ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ 114 ಹಳ್ಳಿಗಳಿದ್ದು, ಇವುಗಳಲ್ಲಿ 140 ಮಂದಿರಗಳನ್ನು ಕಳೆದ 7 ವರ್ಷದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ ಎಂದು ಕ್ಷೇತ್ರದ ಶಾಸಕರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ತುರಮುರಿ ಗ್ರಾಮದಲ್ಲಿ ಶುಕ್ರವಾರ ನೂತನ ಶ್ರೀ ಜ್ಯೋತಿರ್ಲಿಂಗ ಮಂದಿರದ ವಾಸ್ತುಶಾಂತಿ, ಮೂರ್ತಿ ಪ್ರತಿಷ್ಟಾಪನೆ ಮತ್ತು ಕಳಸಾರೋಹಣ ಸೋಹಳಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ಯಾವುದೇ ಜಾತಿ, ಭಾಷೆ, ಧರ್ಮ ಯಾವುದನ್ನೂ ನೋಡದೆ ಎಲ್ಲ ಗ್ರಾಮಗಳಲ್ಲಿ ಜನರ ಬೇಡಿಕೆಯಂತೆ ಮಂದಿರಗಳನ್ನು ನಿರ್ಮಾಣ ಮತ್ತು ಜೀರ್ಣೋದ್ಧಾರ ಮಾಡಲಾಗಿದೆ ಎಂದರು.
ಜನರ ಪ್ರೀತಿ ಮತ್ತು ಸಹಕಾರದಿಂದಾಗಿ ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಭಿವೃದಧಿ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡುವ ಯೋಜನೆ ಹೊಂದಿದ್ದೇನೆ. ಎಲ್ಲರ ಸಹಕಾರ ಹೀಗೆಯೇ ಮುಂದುವರಿಯಲಿ ಎಂದು ಅವರು ವಿನಂತಿಸಿದರು. ಕಾರ್ಯಕ್ರಮದಲ್ಲಿ ಯುವರಾಜ ಕದಂ, ಸುಹಾಸ್ ಜಾಧವ್, ಜ್ಞಾನೇಶ್ವರ ಜಾಧವ್, ವೈಶಾಲಿ ಕಾಂಡೇಕರ್, ಬಾಬು ಬೆಳಗಾಂವ್ಕರ್, ಉಮೇಶ ಜಾಧವ್, ಪ್ರಕಾಶ ಚಲವಟ್ಕರ್, ಯಲ್ಲಪ್ಪ ಜಾಧವ್, ಪುಂಡಲೀಕ್ ಬೆಳಗಾಂವ್ಕರ್, ಮಾಜಿ ಸೈನಿಕರ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.