2025ರ ಮೊದಲ 6 ತಿಂಗಳುಗಳು ಕಳೆದು ಹೋಗ್ತಿದೆ. ಈ ಆರು ತಿಂಗಳಲ್ಲಿ ದೇಶ 6 ಘೋರ ದುರಂತಗಳನ್ನು ಕಂಡಿರುವುದು ನಿಜಕ್ಕೂ ಶೋಚನೀಯ.
1.ಪೆಹಲ್ಗಾಮ್ ದಾಳಿ
ಅದು ಏಪ್ರಿಲ್ 22ನೇ ತಾರೀಕು. ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಆದ್ರೆ ಮಧ್ಯಾಹ್ನ 3ರಿಂದ 4 ಗಂಟೆ ಸುಮಾರಿಗೆ ಬರಸಿಡಿಲಿನಂತೆ ಬಂದ ಸುದ್ದಿಯೊಂದು ಭಾರತ ಮಾತ್ರವಲ್ಲದೇ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಈ ಸುದ್ದಿ ಕೇಳಿ ಭಾರತದ ಜನರಿಗೆ ನೋವಿನ ಜೊತೆಗೆ ರಕ್ತವೂ ಕುದಿದಿತ್ತು. ಅದಕ್ಕೆ ಕಾರಣ ಭೂಲೋಕದ ಸ್ವರ್ಗ ಎಂದೇ ಕರೆಯಲ್ಪಡುವ ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದರು. ರುದ್ರ ರಮಣೀಯವಾದ ಪ್ರವಾಸಿ ತಾಣ ಪಹಲ್ಗಾಮ್ ಬಳಿ ಐವರು ಶಸ್ತ್ರಸಜ್ಜಿತ ಭಯೋತ್ಪಾದಕರು ಅಲ್ಲಿಗೆ ಬಂದಿದ್ದ ಪ್ರವಾಸಿಗರ ಮೇಲೆ ದಾಳಿ ನಡೆಸಿ ಬರೋಬ್ಬರಿ 26 ಮಂದಿಯನ್ನು ಕೊಲೆ ಮಾಡಿದ್ದರು. ತಮ್ಮ ಹೆಂಡತಿಯ ಮುಂದೆ, ಮಕ್ಕಳ ಕಣ್ಣೆದುರಲ್ಲೇ 26 ಮಂದಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು. ಇಸ್ಲಾಮಿಕ್ ಉಗ್ರರು ಧರ್ಮ ಕೇಳಿ ಕೊಲೆ ಮಾಡಿದ್ದು ಭಾರತೀಯರ ರಕ್ತ ಕುದಿಯುವಂತೆ ಮಾಡಿತ್ತು. ಈ ದುಷ್ಕೃತ್ಯಕ್ಕೆ ಬಲಿಯಾದವರಲ್ಲಿ ಇಬ್ಬರು ಕನ್ನಡಿಗರೂ ಸೇರಿದ್ದರು. ಖುಷಿ ಖುಷಿಯಾಗಿ ತಮ್ಮವರ ಜೊತೆ ಪ್ರವಾಸಕ್ಕೆಂದು ಬಂದವರ ಮೇಲೆ ಯಮನಂತೆ ಎಗರಿದ ಪಾಪಿ ಭಯೋತ್ಪಾದಕರು ಪಿಸ್ತೂಲು ಹಿಡಿದು 26 ನಾಗರಿಕರನ್ನು ಕೊಂದಿದ್ದರು. ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಂದಿದ್ದ ಪಾಪಿಗಳಿಗೆ ಆಪರೇಷನ್ ಸಿಂಧೂರ ಮೂಲಕ ಭಾರತ ತಕ್ಕ ಶಾಸ್ತ್ರೀ ಮಾಡಿತ್ತು.
2.ಕುಂಭ ಮೇಲೆ ಕಾಲ್ತುಳಿತ!
ಪ್ರಯಾಗರಾಜ್ನಲ್ಲಿ ಕುಂಭಮೇಳದ ಸಂದರ್ಭದಲ್ಲಿ ಜನವರಿ 29ರಂದು ಮೌನಿ ಅಮವಾಸ್ಯೆಯಂದು ಕಾಲ್ತುಳಿತ ಘಟನೆ ನಡೆದಿತ್ತು. ಈ ಕಾಲ್ತುಳಿತದಲ್ಲಿ 37 ಜನರು ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿತ್ತು. ಆದ್ರೆ BBC Hindi ಇತ್ತೀಚಿಗೆ ನಡೆಸಿದ ಆಳವಾದ ತನಿಖೆಯು ಕಾಲ್ತುಳಿತದ ಸಂಖ್ಯೆಯನ್ನು ಬಹಿರಂಗಗೊಳಿಸಿದೆ. ಬಿಬಿಸಿ ತನಿಖೆಯು ಕನಿಷ್ಠ 82 ಸಾವುಗಳನ್ನು ದೃಢಪಡಿಸಿದೆ.
3. ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ!
ಆರ್ ಸಿಬಿ ಚಾಂಪಿಯನ್ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಆರ್ ಸಿಬಿ ವಿಜಯೋತ್ಸವದಲ್ಲಿ 11 ಜನ ಅಭಿಮಾನಿಗಳು ಮತಪಟ್ಟಿದ್ದರು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ತಮ್ಮ ಇಷ್ಟದ ಕ್ರಿಕೆಟಿಗರನ್ನು ನೋಡಲು ಬಂದಿದ್ದ ವೇಳೆ ತಳ್ಳಾಟ ನೂಕಾಟ ಉಂಟಾಗಿ 11 ಜನ ಸಾವನ್ನಪ್ಪಿದ್ದರು. ಇಡೀ ದೇಶ ಈ ಘಟನೆಗೆ ಶೋಕ ಮಿಡಿದಿತ್ತು,.
4.ದೆಹಲಿ ರೈಲು ಕಾಲ್ತುಳಿತ ಪ್ರಕರಣ!
ಫೆಬ್ರವರಿ 15, 2025 ರಂದು, ಭಾರತದ ನವದೆಹಲಿಯಲಿ ರೈಲು ನಿಲ್ದಾಣದಲ್ಲಿ ಜನಸಂದಣಿಯಿಂದಾದ ನೂಕು ನುಗ್ಗಲಿನಿಂದ ಕನಿಷ್ಠ 18 ಜನರು ಸಾವನ್ನಪ್ಪಿದರು. ಉತ್ತರ ಭಾರತದ ಪ್ರಯಾಗರಾಜ್ನಲ್ಲಿ ನಡೆಯುವ ಧಾರ್ಮಿಕ ಉತ್ಸವ ಮಹಾ ಕುಂಭಕ್ಕೆ ಹೊರಟಿದ್ದ ವೇಳೆಯಲ್ಲಿ ಈ ಘಟನೆ ನಡೆದಿತ್ತು.
5. ಮುಂಬೈ ಲೋಕಲ್ ಟ್ರೈನ್ ಅಪಘಾತ!
ಜೂನ್ 9ರಂದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಂದ ಥಾಣೆಯ ಕಸರಾ ಪ್ರದೇಶದ ಕಡೆಗೆ ಹೋಗುತ್ತಿದ್ದ ಸ್ಥಳೀಯ ರೈಲಿನಿಂದ ಹಳಿ ಮೇಲೆ ಬಿದ್ದು ಐವರು ಪ್ರಯಾಣಿಕರು ಸಾವನ್ನಪ್ಪಿದ್ದರು. ಜನದಟ್ಟಣೆಯಲ್ಲಿ ಸಂದರ್ಭದಲ್ಲಿ ಮಿತಿಮೀರಿ ತುಂಬಿದ್ದ ರೈಲಿನಿಂದ ಆಯತಪ್ಪಿ ಕೆಳಗೆ ಬಿದ್ದು, ಐವರು ಮೃತಪಟ್ಟಿದ್ದರು.
6. ಅಹಮಾದಾಬಾದ್ ವಿಮಾನ ದುರಂತ!
ಗುಜರಾತ್ ನ ಅಹಮಾದಾಬಾದ್ ನಲ್ಲಿ ನಿನ್ನೆ ನಡೆದ ಏರೋ ಇಂಡಿಯಾ ವಿಮಾನ ದುರಂತದಲ್ಲಿ 241 ಮೃತಪಟ್ಟಿದ್ದಾರೆ. ಅಹಮಾದಾಬಾದ್ ನಿಂದ ಲಂಡನ್ ಗೆ ಹೊರಟ್ಟಿದ್ದ ವಿಮಾನ ತಾಂತ್ರಿಕ ದೋಷದಿಂದ ಪತನಗೊಂಡಿದ್ದು, ಈ ವಿಮಾನದಲ್ಲಿ 242 ಮಂದಿ ಪಯಾಣ ಬೆಳೆಸುತ್ತಿದ್ದರು. ಆದ್ರೆ ಟೇಕಾಫ್ ಆದ ಕೆಲ ಸೆಕೆಂಡ್ ಗಳಲ್ಲಿಯೇ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಪತನಗೊಂಡಿದೆ. ಡಾಕ್ಟರ್ ಹಾಸ್ಟೆಲ್ ಮೇಲೆ ವಿಮಾನ ಎಗರಿದ್ದು, ಇದು ದೇಶದ ಅತಿ ದೊಡ್ಡ ದುರಂತ ಎನ್ನಲಾಗುತ್ತಿದೆ. ದುರಂತದಲ್ಲಿ ಓರ್ವ ಹೊರತುಪಡಿಸಿ ಎಲ್ಲಾ ಪ್ರಯಾಣಿಕರು ಮೃತಪಟ್ಟಿರುವುದು ಅತ್ಯಂತ ಶೋಚನೀಯ.