ಕಳೆದೊಂದು ವಾರದಿಂದ ಕೋಲಾರದಲ್ಲಿ ಹೂವು ಬೆಳೆಗಾರರು ಪರಿಸ್ಥಿತಿ ಡೋಲಾಯಮಾನವಾಗಿದೆ. ಶ್ರಾವಣದಲ್ಲಿ ಬರುವ ಸಾಲು ಸಾಲು ಹಬ್ಬಗಳು, ಶುಭ ಸಮಾರಂಭಗಳಿಂದ ಒಂದಷ್ಟು ಹಣ ಗಳಿಸಬಹುದೆಂಬ ಲೆಕ್ಕಾಚಾರದಲ್ಲಿ ಹೂವು ಬೆಳೆದ ರೈತರ ಲೆಕ್ಕಾ ಸಂಪೂರ್ಣವಾಗಿ ತಲೆಕೆಳಗಾಗಿದೆ.
ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಒಂದಿಷ್ಟು ಹೂವಿಗೆ ಬೆಲೆ ಇದ್ದು, ಅಲ್ಪಸ್ವಲ್ಪ ಹಣಗಳಿಸಿದ್ದು ಬಿಟ್ಟರೆ ನಂತರದ ದಿನಗಳಲ್ಲಿ ಕನಿಷ್ಟ ಹಾಕಿರುವಂತಹ ಬಂಡವಾಳ ಸಹ ಸಿಗದೆ ರೈತ ಕಂಗಾಲಾಗಿದ್ದಾನೆ. ಪ್ರತಿ ಎಕರೆ ಕನಿಷ್ಟ 50 ರಿಂದ 60 ಸಾವಿರ ಬಂಡವಾಳ ಹಾಕಿ ಬೆಳೆದ ಹೂವು ಜೊತೆಗೆ ರೈತರ ತೋಟದಲ್ಲಿ ಹೂವು ಬಿಡಿಸುವುದು ಸಾಗಾಣಿಕೆ ವೆಚ್ಚ ಎಲ್ಲವನ್ನು ಲೆಕ್ಕ ಹಾಕಿದ್ರೆ ಹೂವು ಬೆಳೆದ ರೈತರಿಗೆ ಹೂವು ತುಂಬುವ ಚೀಲದ ಬೆಲೆಯೂ ಸಿಗುತ್ತಿಲ್ಲ.
ಕೆಜಿ ಚೆಂಡುಮಲ್ಲಿಗೆ ಹೂವಿಗೆ 5 ರಿಂದ 10 ರೂಪಾಯಿ ಇದ್ದರೆ, ಹೂವು ತುಂಬುವ ಚೀಲದ ಬೆಲೆ 40 ರೂಪಾಯಿ ಇದೆ. ಇಂಥ ಪರಿಸ್ಥಿತಿಯಲ್ಲಿ ರೈತರು ತಾವು ಬೆಳೆದ ಹೂವನ್ನು ಮಾರುಕಟ್ಟೆಗೂ ಹಾಕಲಾಗದೆ ರಸ್ತೆ ಬದಲಿಯಲ್ಲಿ ಸುರಿದು ಬೇಸರದಿಂದ ವಾಪಸ್ಸಾಗುತ್ತಿದ್ದಾರೆ.
ದೇವರಿಗೆ ಪೂಜೆ ಮಾಡುವ ಹೂವನ್ನು ಬೆಳೆದ ರೈತರಿಗೆ ದೇವರೂ ಕೈಹಿಡಿಯುತ್ತಿಲ್ಲ ಎಂದು ರೈತರು ಬೇಸರ ಹೊರಹಾಕುತ್ತಿದ್ದಾರೆ. ಸದ್ಯ ಶ್ರಾವಣ ಮಾಡದಲ್ಲಿ ಹೂವಿನ ಬೆಲೆ ಈ ರೀತಿ ಕುಸಿತಕ್ಕೆ ಕಾರಣ ಕೋಲಾರ ಜಿಲ್ಲೆಯಾದ್ಯಂತ ಯಥೇಚ್ಛವಾಗಿ ರೈತರು ಚೆಂಡು ಹೂ, ಸೇವಂತಿಗೆ, ಬಟನ್ಸ್ ಗುಲಾಬಿ ಹೂವು ಬೆಳೆದಿದ್ದಾರೆ. ಜೊತೆಗೆ ಹೊರ ರಾಜ್ಯಗಳಿಂದಲೂ ಮೊದಲಿನಂತೆ ಬೇಡಿಕೆ ಇಲ್ಲದೆ ಕಾರಣ ರೈತರು ಬೆಳೆದ ಹೂವು ರಸ್ತೆಬದಿ ಸುರಿಯುವಂತಾಗಿದೆ.