ಹುಬ್ಬಳ್ಳಿ : ಹಿಂದುಗಳ ಹೊಸ ವರ್ಷ ಯುಗಾದಿಯ ಸಂಭ್ರಮ ಎಲ್ಲಡೆ ಕಳೆಗಟ್ಟಿದ್ದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಯುಗಾದಿ ಹಬ್ಬದ ಸಡಗರ ಮನೆ ಮಾಡಿದೆ. ಯುಗಾದಿ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ನಗರದ ಪ್ರಮುಖ ದೇವಾಲಯಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ. ಇಲ್ಲಿನ ಉಣಕಲ್ ನ ಚಂದ್ರಮೌಳೇಶ್ವರ ದೇವಸ್ಥಾನದಲ್ಲೂ ಯುಗಾದಿ ಸಂಭ್ರಮ ಕಳೆಗಟ್ಟಿದೆ.
ಇಂದು ಮುಂಜಾನೆಯ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವ ಘಳಿಗೆಯನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ಶತಮಾನಗಳಷ್ಟು ಹಳೆಯದಾದ ಚಂದ್ರಮೌಳೇಶ್ವರನ ದರ್ಶನ ಪಡೆದರೆ ಇಷ್ಟಾರ್ಥಗಳು ಈಡೇರುತ್ತದೆ ಎಂಬ ಪ್ರತೀತಿ ಹಾಗೂ ನಂಬಿಕೆ ಇಲ್ಲಿನ ಜನರದ್ದಾಗಿದೆ. ಈ ಹಿನ್ನೆಲೆಯಲ್ಲಿ ಯುಗಾದಿ ದಿನದಂದು ದೇವಸ್ಥಾನಕ್ಕೆ ಭೇಟಿ ನೀಡಿ ಸೂರ್ಯ ರಶ್ಮಿ ಶಿವಲಿಂಗ ಸ್ಪರ್ಶಿಸುವುದರ ದರ್ಶನ ಪಡೆದರು.
Ugadi 2025: ಇಂದು “ಯುಗಾದಿ” ಹಬ್ಬದ ಸಂಭ್ರಮ: ಅಪ್ಪಿ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ..!
ಇದು 12 ನೇ ಶತಮಾನದಲ್ಲಿ ಚಾಲುಕ್ಯರ ಕಾಲದಲ್ಲಿ ಕಟ್ಟಲಾದ ದೇವಸ್ಥಾನವಾಗಿದ್ದು, ಚತುರ್ಮುಖ ಶಿವಲಿಂಗ ಇಲ್ಲಿನ ವಿಶೇಷವಾಗಿದೆ. ಹುಬ್ಬಳ್ಳಿ ಧಾರವಾಡ ಕೇವಲ ಅಷ್ಟೇ ಅಲ್ಲಾ ಕರ್ನಾಟಕ,ತಮಿಳುನಾಡು ಸೇರಿದಂತೆ ನೆರೆಯ ಮಹಾರಾಷ್ಟ್ರ ಗೋವಾ ರಾಜ್ಯದಿಂದಲೂ ಭಕ್ತರು ಇಲ್ಲಿಗೆ ಆಗಮಿಸಿದ್ದರು.
ಯುಗಾದಿ ಹಬ್ಬದ ದಿನ ಬೆಳಗ್ಗೆ 6-45 ರಿಂದ 7 ಗಂಟೆಯವರೆಗೆ ಈ ಚತುರ್ಮುಖ ಲಿಂಗದ ಮೇಲೆ ಸೂರ್ಯರಶ್ಮಿ ಬೀಳುವುದು ವಿಶೇಷವಾಗಿದೆ. ಈ ಸಂದರ್ಭದಲ್ಲಿ ಅನೇಕ ಭಕ್ತರು ದೇವರ ದರ್ಶನ ಪಡೆದು ಧನ್ಯರಾಗುತ್ತಾರೆ. ಇದಾದ ಬಳಿಕ ಭಕ್ತರು ಬೇವು-ಬೆಲ್ಲ ಸವಿದು ಯುಗಾದಿ ಹಬ್ಬವನ್ನು ಆಚರಣೆ ಮಾಡಿದರು.
ಈ ಕುರಿತು ಭಕ್ತರು ತಮ್ಮ ಅನಿಸಿಕೆ ಹಂಚಿಕೊಂಡಿದ್ದು ಇದೊಂದು ಅತ್ಯಂತ ಅಮೃತ ಗಳಿಗೆ ಆಗಿದೆ. ವರ್ಷದಲ್ಲಿ ಒಂದು ಸಲ ಮಾತ್ರ ಶ್ರೀ ಚಂದ್ರಮೌಳೃಶ್ವರನ ಶಿವಲಿಂಗ ಮೇಲೆ ಸೂರ್ಯಕಿರಣ ನೇರವಾಗಿ ಸೂರ್ಯೋದಯ ಆದ ತಕ್ಷಣ ಬೀಳುತ್ತದೆ. ಈ ಅತ್ಯಂತ ಅದ್ಭುತವಾದ ದರ್ಶನ ಮಾಡಲು ನಾಡಿನ ವಿವಿಧ ಕಡೆಗಳಿಂದ ಬರುತ್ತಾರೆ ಎನ್ನುತ್ತಾರೆ ಎಂದು ಸ್ಥಳೀಯ ಮುಖಂಡ ರಾಮನಗೌಡರ ಶೆಟ್ಟನಗೌಡರ ಹೇಳಿದರು.