ಕೋಲಾರ : ಕೊರಿಯರ್ ಪಾರ್ಸೆಲ್ ಕೊಡುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದ ಘಟನೆ ಕೋಲಾರ ತಾಲ್ಲೂಕಿನ ಮುದುವಾಡಿ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚೇತನ್ ಹಾಗೂ ಯುವರಾಜ್ ಹಲ್ಲೆಗೊಳಗಾಗಿದ್ದು, ನಗರದ ಕೀಲುಕೋಟೆ ನಿವಾಸಿ ಕೊರಿಯರ್ ಬಾಯ್ ಪವನ್ ಹಾಗೂ ಆತನ ಸೋದರ ಮೋಹನ್ ಎಂಬುವರಿಂದ ಹಲ್ಲೆ ನಡೆದಿದೆ. ಕೊರಿಯರ್ ಬಾಯ್ ಪವನ್ ಹಾಗೂ ಹೊಸಹಳ್ಳಿ ಯುವಕನ ಮಧ್ಯೆ ಪೋನ್ ನಲ್ಲಿ ಮಾತಿನ ಚಕಮಕಿ ನಡೆದಿದೆ. ಮಾತು ಅತಿರೇಕಕ್ಕೆ ತಿರುಗಿ ಗ್ರಾಮಕ್ಕೆ ಹುಡುಕಿಕೊಂಡು ಬಂದು ಗಲಾಟೆ ಮಾಡಿದ ಕೊರಿಯರ್ ಬಾಯ್ ಪವನ್ ಮತ್ತು ಆತನ ಸಹೋದರ ಮೋಹನ್ ಚೇತನ್ ಮತ್ತು ಯುವರಾಜ್ಗೆ ಚಾಕುವಿನಿಂದ ಇರಿದಿದ್ದಾರೆ.
ಇನ್ನೂ ಚಾಕು ಇರಿತದಿಂದ ಉದ್ರಿಕ್ತರಾದ ಗ್ರಾಮದ ಜನರು ಕೂಡಲೇ ಪವನ್ ಹಾಗೂ ಮೋಹನ್ ಬಟ್ಟೆ ಬಿಚ್ಚಿ ಕಟ್ಟಿಹಾಕಿ ಥಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಚಾಕು ಇರಿತಕ್ಕೆ ಒಳಗಾದ ಗಾಯಾಳುಗಳಿಗೆ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಚಾಕು ಇರಿದ ಮೋಹನ್ ಹಾಗೂ ಪವನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.