ನವದೆಹಲಿ: ರಾಜ್ಯಸಭೆಯಲ್ಲೂ ಸಹ ವಕ್ಫ್ ತಿದ್ದುಪಡಿ ಮಸೂದೆ 2025ರ ಅಂಗೀಕಾರ ಗೊಂಡಿದೆ. ಸುದೀರ್ಘ12 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆ ಮತ್ತು ವಿರೋಧ ಪಕ್ಷಗಳ ತೀವ್ರ ವಿರೋಧ ನಡುವೆ ವಕ್ಫ್ ಮಸೂದೆ ಅಂಗೀಕಾರಗೊಂಡಿದ್ದು, ರಾಜ್ಯಸಭೆಯಲ್ಲಿ, ಮಸೂದೆಯ ಪರವಾಗಿ 128 ಮತಗಳು ಮತ್ತು ವಿರೋಧವಾಗಿ 95 ಮತಗಳು ಚಲಾವಣೆಯಾದವು.
ಗುರುವಾರ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಚರ್ಚೆ ಆರಂಭವಾಗಿ ಇಂದು ನಸುಕಿನ ಜಾವದವರೆಗೆ ರಾಜ್ಯಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಸತತ ಚರ್ಚೆಗಳು ನಡೆದಿವೆ. ರಾಜ್ಯಸಭೆಯಲ್ಲಿ ಮಸೂದೆಯನ್ನು ಅಂಗೀಕಾರಕ್ಕಾಗಿ ಮಂಡಿಸುವ ಮೊದಲು, ವಕ್ಫ್ ಆಸ್ತಿಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಲಾಗಿಲ್ಲ ಎಂದು ರಿಜಿಜು ಒತ್ತಿ ಹೇಳಿದರು.ವಕ್ಫ್ ಮಂಡಳಿ ಯಾವಾಗಲೂ ಹಾಗೆಯೇ ಇರುತ್ತದೆ. ವಕ್ಫ್ ಮಂಡಳಿಯು ಶಾಸನಬದ್ಧ ಸಂಸ್ಥೆಯಾಗಿದ್ದು, ಮುಸ್ಲಿಮರನ್ನು ಮಾತ್ರ ಶಾಸನಬದ್ಧ ಸಂಸ್ಥೆಯಲ್ಲಿ ಏಕೆ ಸೇರಿಸಬೇಕು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ವಿವಾದವಿದ್ದರೆ, ಆ ವಿವಾದವನ್ನು ಹೇಗೆ ಪರಿಹರಿಸಲಾಗುತ್ತದೆ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರೊಂದಿಗೆ ವಿವಾದಗಳೂ ಇರಬಹುದಲ್ಲವೇ ಎಂದು ಕೇಳಿದರು ಶಾಸನಬದ್ಧ ಸಂಸ್ಥೆಯು ಎಲ್ಲಾ ಧರ್ಮಗಳ ಪ್ರತಿನಿಧಿಗಳನ್ನು ಒಳಗೊಂಡ ಜಾತ್ಯತೀತ ಸಂಸ್ಥೆಯಾಗಿರಬೇಕು ಎಂದು ರಿಜಿಜು ವಾದಿಸಿದರು. ನಂತರ ಮಸೂದೆಯನ್ನು ರಾಜ್ಯಸಭೆಯಲ್ಲಿ ಷರತ್ತು-ಅನುಬಂಧದ ಆಧಾರದ ಮೇಲೆ ಮತಕ್ಕೆ ಹಾಕಲಾಯಿತು.
ಇದಕ್ಕೂ ಮೊದಲು, ಕೇಂದ್ರ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ವಕ್ಫ್ (ತಿದ್ದುಪಡಿ) ಮಸೂದೆ 2025 ನ್ನು ರಾಜ್ಯಸಭೆಯಲ್ಲಿ ಮಂಡಿಸಿದರು. ಲೋಕಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ತಂದ ಎಲ್ಲಾ ತಿದ್ದುಪಡಿಗಳನ್ನು ಧ್ವನಿ ಮತಗಳಿಂದ ತಿರಸ್ಕರಿಸಿದ ನಂತರ ಮಸೂದೆಯನ್ನು ಅಂಗೀಕರಿಸಲಾಯಿತು. ಮತಗಳ ವಿಭಜನೆಯಲ್ಲಿ 288 ಸದಸ್ಯರು ಪರವಾಗಿ ಮತ್ತು 232 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು, ಸಂಸತ್ತಿನಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ ಅಂಗೀಕಾರ ಕ್ಷಣವನ್ನು ಸಾಮಾಜಿಕ-ಆರ್ಥಿಕ ನ್ಯಾಯ, ಪಾರದರ್ಶಕತೆ ಮತ್ತು ಸಮಗ್ರ ಬೆಳವಣಿಗೆಗಾಗಿ ದೇಶದ ಸಾಮೂಹಿಕ ಅನ್ವೇಷಣೆಯಲ್ಲಿ “ಒಂದು ಮಹತ್ವದ ಕ್ಷಣ” ಎಂದು ಬಣ್ಣಿಸಿದ್ದಾರೆ. ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, ದಶಕಗಳಿಂದ ವಕ್ಫ್ ವ್ಯವಸ್ಥೆಯು ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆ ಎದುರಿಸುತ್ತಿತ್ತು. ವಿಶೇಷವಾಗಿ ಮುಸಲ್ಮಾನ ಮಹಿಳೆಯರು, ಬಡ ಮುಸಲ್ಮಾನರು ಮತ್ತು ಪಸ್ಮಾಂಡ ಮುಸಲ್ಮಾನರ ಹಿತಾಸಕ್ತಿಗಳಿಗೆ ಹಾನಿ ಮಾಡುತ್ತದೆ ಎಂದು ಹೇಳಿದ್ದಾರೆ.
.