ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಧೀಡೀರ್ ಅಂತಾ ದಕ್ಷಿಣ ಚಿತ್ರರಂಗದ ಖ್ಯಾತ ಸಿನಿಮಾ ಮೇಕರ್ ಎಸ್ ಎಸ್ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರನ್ನು ಭೇಟಿಯಾಗಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಸಿಕಂದರ್ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಭಾಯಿಜಾನ್ ಗೆ ತಕ್ಷಣ ಗೆಲುವಿನ ಅವಶ್ಯಕತೆಯಂತೂ ಇದೆ. ಹೀಗಾಗಿ ಸಲ್ಲುಮೀಯಾ ವಿಜಯೇಂದ್ರ ಪ್ರಸಾದ್ ಅವರನ್ನು ಭೇಟಿಯಾಗಿದ್ದಾರೆ.
ಸಲ್ಮಾನ್ ಖಾನ್ ಸಿನಿಮಾ ಬದುಕಿನಲ್ಲಿ ಮೈಲಿಗಲ್ಲು ಸೃಷ್ಟಿಸಿದ ಚಿತ್ರ ಬಜರಂಗಿ ಭಾಯಿಜಾನ್. ಈ ಸಿನಿಮಾಗೆ ಕಥೆ ಕಟ್ಟಿಕೊಟ್ಟವರೇ ಇದೇ ವಿಜಯೇಂದ್ರ ಪ್ರಸಾದ್. ಎಲ್ಲದಕ್ಕಿಂತ ಮುಖ್ಯವಾಗಿ ರಾಜಮೌಳಿ ಹಿಂದಿನ ಶಕ್ತಿ ಇವ್ರೇ. ಜಕ್ಕಣ್ಣ ತೆರೆಮೇಲೆ ತರುವ ಸಿನಿಮಾಗಳ ಕಥೆ ಇವರದ್ದೇ. ಇಂತಹ ವಿಜಯೇಂದ್ರ ಪ್ರಸಾದ್ ಎಣೆದ ಬಜರಂಗಿ ಭಾಯಿಜಾನ್ ಕಥೆ ಬಾಲಿವುಡ್ ಅಂಗಳದಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಕಬೀರ್ ಖಾನ್ ಸಾರಥ್ಯದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಹೀರೋ ಆಗಿ ಅಬ್ಬರಿಸಿದರು. ಭಾರತದಲ್ಲಿ ಮಿಸ್ ಆಗುವ ಪಾಕಿಸ್ತಾನದ ಹುಡುಗಿ ಮುನ್ನಿಯನ್ನು ಮರಳಿ ಅವಳ ಊರು ತಲುಪಿಸೋ ಕಥೆಗೆ ಸಲ್ಮಾನ್ ಖಾನ್, ರಾಕ್ಲೈನ್ ವೆಂಕಟೇಶ್, ಕಬೀರ್ ಖಾನ್ ಹಣ ಹಾಕಿದ್ದರು. ಬಹಳ ದಿನಗಳಿಂದಲೂ ಬಜರಂಗಿ ಭಾಯಿಜಾನ್ 2 ಸಿನಿಮಾ ಬರಲಿದೆ ಎಂಬ ಸುದ್ದಿ ಇತ್ತು. ಇದೀಗ ಆ ಸಮಯ ಕೂಡಿಬಂದಿದೆ.
ಸಾಲು ಸಾಲು ಸೋಲುಗಳನ್ನು ಕಾಣುತ್ತಿರುವ ಬಾಲಿವುಡ್ ಬಾಯಿಜಾನ್ ಮತ್ತೊಮ್ಮೆ ವಿಜಯೇಂದ್ರ ಪ್ರಸಾದ್ ಜೊತೆ ಕೈ ಜೋಡಿಸಿದ್ದಾರೆ. ಇತ್ತೀಚೆಗೆ ಅವರನ್ನು ಮುಂಬೈನಲ್ಲಿ ಭೇಟಿಯಾಗಿದ್ದಾರೆ ಎನ್ನಲಾಗ್ತಿದೆ. ಈ ಸಮಯದಲ್ಲಿ ಬಜರಂಗಿ ಭಾಯಿಜಾನ್ 2 ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಬಿಟೌನ್ ಅಂಗಳಲ್ಲಿ ಹರಿದಾಡ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಅಪ್ ಡೇಟ್ ಸಿಗಬಹುದು. ಬಜರಂಗಿ ಭಾಯಿಜಾನ್ 2 ಕಥೆ ಅಭಿವೃದ್ಧಿಪಡಿಸೋದಾಗಿ ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ ಎನ್ನಲಾಗುತ್ತಿದೆ.