ಚಾಮರಾಜನಗರ : ಜಿಲ್ಲೆಯ ಹನೂರು ಪಟ್ಟಣದ 11ನೇ ವಾರ್ಡ್ ನ ವಿನಾಯಕ ನಗರದಲ್ಲಿ ಪೊಲೀಸ್ ಪೇದೆಯೋರ್ವನ ಮನೆಯ ಬಾಗಿಲು ಬೀಗ ಒಡೆದ ಕಳ್ಳರು ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಮತ್ತು ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಜೀಪ್ ಚಾಲಕ ಪರಮೇಶ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಪರಮೇಶ್ ತಮ್ಮ ಮಕ್ಕಳಿಗೆ ಬೇಸಿಗೆ ರಜೆ ಇದೆ ಎಂದು ತಮ್ಮ ಸ್ವಗ್ರಾಮಕ್ಕೆ ಕುಟುಂಬ ಸಮೇತ ತೆರಳಿ ಮಕ್ಕಳ ಪರೀಕ್ಷೆ ಫಲಿತಾಂಶದ ಮಾಹಿತಿ ಪಡೆಯಲು ವಾಪಸ್ಸು ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಮನೆಗೆ ನುಗ್ಗಿದ ಕಳ್ಳರು, ಬೀರುವಿನಲ್ಲಿದ್ದ ಸುಮಾರು 16ಗ್ರಾಂ ಚಿನ್ನಾಭರಣ ಬೆಳ್ಳಿ ಪದಾರ್ಥ ಮತ್ತು ಸುಮಾರು 5ಸಾವಿರ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮನೆಯ ಮಾಲೀಕ ಪರಮೇಶ್ ಹನೂರು ಪೊಲೀಸರಿಗೆ ದೂರನ್ನು ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.