ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ರಾಜ್ಯದಲ್ಲಿ ಆಗಾಗ ಭಾರಿ ಚರ್ಚೆಗೆ ಗ್ರಾಸವಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ)ಯ ವರದಿಗೆ ಕೊನೆಗೂ ಮೋಕ್ಷ ಸಿಗುವ ಲಕ್ಷಣ ಕಾಣುತ್ತಿದೆ.
ಗುಜರಾತ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾತಿ ಗಣತಿ ವರದಿ ಜಾರಿಗೆ ತರುವ ಸಂಬಂಧ ಹೈಕಮಾಂಡ್ ನಾಯಕರಿಂದ ಒಪ್ಪಿಗೆ ಪಡೆದಿದ್ದು, ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೆಚ್ ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಕಳೆದ 2015 ರ ಏಪ್ರಿಲ್ 11ರಿಂದ ಮೇ. 30ರವರೆಗೆ ರಾಜ್ಯದಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಲಾಗಿತ್ತು. ಬಳಿಕ ಕೆ.ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷರಾಗಿ ಸಲ್ಲಿಸಿದ್ದ ದತ್ತಾಂಶ ಅಧ್ಯಯನ ವರದಿಯೈನ್ನು ಸಂಪುಟದಲ್ಲಿಅಂಗೀಕರಿಸಲು ತಯಾರಿ ನಡೆದಿದೆ. ಆ ಮೂಲಕ ಜಾತಿ ವಿವರವೂ ಒಳಗೊಂಡಂತೆ ಒಟ್ಟು 54 ಮಾನದಂಡಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿ ಗಣಕೀಕರಣಗೊಳಿಸಲಾಗಿದೆ.
ಕ್ಯಾಬಿನೆಟ್ ಸಭೆಯ ಕಾರ್ಯಸೂಚಿ ಲಿಸ್ಟ್ ನಲ್ಲಿಈ ವಿಷಯ ಸೇರ್ಪಡೆಯಾಗಿದೆ. ಜಾತಿ ಗಣತಿ ಅಂಗೀಕಾರದ ಬಳಿಕ ಮೀಸಲು ಪ್ರಮಾಣವನ್ನು ಹೆಚ್ಚಳ ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ.
ಲಿಂಗಾಯತ, ಒಕ್ಕಲಿಗರ ವಿರೋಧ
ಕಾಂತರಾಜ್ ನೇತೃತ್ವದಲ್ಲಿ ನಡೆದ ಜಾತಿ ಗಣತಿ ವರದಿಗೆ ರಾಜ್ಯದ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯ ತೀವ್ರ ವಿರೋಧ ಮಾಡಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಸಂಪುಟದ ಲಿಂಗಾಯತ ಹಾಗೂ ಒಕ್ಕಲಿಗ ಸಮಾಜದ ಸಚಿವರೇ ಜಾತಿ ಗಣತಿ ವರದಿಗೆ ವಿರೋಧಿಸಿದ್ದಾರೆ. ಹೀಗಾಗಿ ನಾಳೆ ಅಂದರೆ ಶುಕ್ರವಾರ ನಡೆಯುವ ಸಂಪುಟ ಸಭೆಯಲ್ಲಿ ಲಿಂಗಾಯತ, ಒಕ್ಕಲಿಗ ಸಚಿವರು ಜಾತಿ ಗಣತಿ ವರದಿಗೆ ಅಸ್ತು ಅಂತಾರಾ ಅನ್ನೋದನ್ನ ಕಾದು ನೋಡಬೇಕಿದೆ.