ಬೆಂಗಳೂರು: ಜಾತಿಗಣತಿ ವರದಿ ವರದಿ ಸ್ವೀಕಾರ ಮಾಡಬೇಕೋ ಬೇಡವೋ ಎಂಬುದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೆಲವೇ ಹೊತ್ತಲ್ಲಿ ನಿರ್ಧಾರವಾಗಲಿದೆ.
ಆದರೆ, ಜಾತಿ ಗಣತಿ ವರದಿ ಬಗ್ಗೆ ಸಚಿವರು ತಮ್ಮದೇ ಅಭಿಪ್ರಾಯ ಹೇಳಿದ್ದಾರೆ. ಜಾತಿ ಗಣತಿ ವರದಿ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಯುತ್ತೆ. ಕ್ಯಾಬಿನೆಟ್ ನಲ್ಲಿ ಚರ್ಚೆಯಾದ ಬಳಿಕ ಮಾತನಾಡುತ್ತೇನೆ. ವರದಿ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ ಎಂದ ಸಚಿವ ಶಿವರಾಜ್ ತಂಗಡಗಿ, ವರದಿ ಎಲ್ಲಿಯೂ ಬಹಿರಂಗ ಆಗಿಲ್ಲ. ಈಗ ಬರುತ್ತಿರುವ ಅಂಕಿ ಸಂಖ್ಯೆ ಊಹಾಪೋಹ. ಇದು ಜಾತಿಗಣತಿ ಅಲ್ಲ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ. ಇದಕ್ಕೆ ಯಾರು ಆತಂಕಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ವರದಿ ಓಪನ್ ಆಗಲಿ, ಆಮೇಲೆ ನೋಡೋಣ
ಜಾತಿ ಗಣತಿ ವರದಿ ಜಾರಿಗೆ ಮುಹೂರ್ತ ಫಿಕ್ಸ್ ಆಗಿದೆ. ಎಲ್ಲರೂ ಒಟ್ಟಾಗಿ ತೀರ್ಮಾನ ಮಾಡುತ್ತೇವೆ. ವರದಿ ಜಾರಿ ಬಳಿಕ ನೋಡೋಣ ಏನು ಆಗುತ್ತದೆ ಎಂದು ಹೇಳಿರುವ ಸಚಿವ ಸತೀಶ್ ಜಾರಕಿಹೊಳಿ, ಪ್ರಬಲ ಸಮುದಾಯದ ವಿರೋಧದ ಬಗ್ಗೆ ವರದಿ ಓಪನ್ ಆಗಲಿ, ಆಮೇಲೆ ನೋಡೋಣ. ವರದಿ ಜಾರಿಯಾದ ಮೇಲೆ ಸದನವನ್ನೇ ಕರೆಯಬೇಕು. ಅಲ್ಲಿ ಯಾರೆಲ್ಲ ಏನೇನು ಪ್ರಶ್ನೆ ಕೇಳ್ತಾರೆ ನೋಡೋಣ ಎಂದಿದ್ದಾರೆ.
ನಮ್ಮ ಹೈಕಮಾಂಡ್ ವರದಿ ಜಾರಿಗೆ ಬದ್ಧ
ಜಾತಿ ಗಣತಿ ವರದಿ ಜಾರಿಗೆ ನಮ್ಮ ಹೈಕಮಾಂಡ್ ವರದಿ ಜಾರಿಗೆ ಬದ್ಧವಾಗಿದೆ ಎಂದಿರುವ ಸಚಿವ ಕೆ.ಹೆಚ್ ಮುನಿಯಪ್ಪ, ಕ್ಯಾಬಿನೆಟ್ ನಿರ್ಧಾರ ಏನಾಗುತ್ತಿದೆ ನೋಡಿ. ಎಐಸಿಸಿ ಅಧ್ಯಕ್ಷರು, ನಮ್ಮ ನಾಯಕರು ಜಾತಿಗಣತಿ ಆದ್ರೆ ಯಾವುದೇ ಜಾತಿಗೆ ಅನ್ಯಾಯ ಆಗಲ್ಲ ಅಂತ ಹೇಳಿದ್ದಾರೆ. ಇದರಿಂದ ಯಾವುದೇ ಸಮುದಾಯಕ್ಕೆ ತೊಂದರೆ ಆಗುವುದಿಲ್ಲ. ವರದಿಗೆ ಯಾರ ವಿರೋಧವೂ ಇಲ್ಲ. ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ತೊಂದರೆ ಆಗುವುದಿಲ್ಲ ಎಂದಿದ್ದಾರೆ.
ಜಾತಿ ಗಣತಿ ಅಲ್ಲ..ಸಾಮಾಜಿಕ ಆರ್ಥಿಕ ಸಮೀಕ್ಷೆ
ಇದು ಜಾತಿ ಗಣತಿ ವರದಿ ಅಲ್ಲ. ಸಾಮಾಜಿಕ ಆರ್ಥಿಕ ಸಮೀಕ್ಷೆ. ಅದರಲ್ಲಿ ಏನಿದೆ, ಏನಿಲ್ಲ ಗೊತ್ತಿಲ್ಲ. ವರದಿ ಮಂಡನೆ ಬಳಿಕ ಏನಿದೆ, ಏನಿಲ್ಲ ಅಂತ ಗೊತ್ತಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅದರಲ್ಲಿ ಅಂಕಿ ಅಂಶ ಏನಿದೆ, ಸೆನ್ಸೆಸ್ ರಿಪೋರ್ಟ್ ಸರಿಸಮನಾಗಿದೆಯಾ ಇಲ್ಲವಾ ಗೊತ್ತಾಗಲಿದೆ. ದತ್ತಾಂಶ ಟ್ಯಾಲಿ ಆಗಬೇಕು. ಒಳ ಮೀಸಲಾತಿ ವಿಚಾರವಾಗಿ ಜಸ್ಟೀಸ್ ನಾಗಮೋಹನ್ ದಾಸ್ ಕಮಿಟಿ ವರದಿ ಮಾಡಬೇಕು. ಏನಾಗಲಿದೆ ನೀಡೋಣ ಎಂದಿದ್ದಾರೆ.
ಲಿಂಗಾಯತ ಸಮುದಾಯ ವಿರೋಧ ಇಲ್ಲ
ಜಾತಿ ಗಣತಿ ವರದಿಗೆ ಒಕ್ಕಲಿಗರು, ಲಿಂಗಾಯತ ಸಮಾಜದ ವಿರೋಧ ಇಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಹತ್ತು ವರ್ಷಗಳಾಗಿರೋದ್ರಿಂದ ರಿವ್ಯೂ ಆಗಬೇಕು ಅಂತ ಬೇಡಿಕೆ ಇದೆ. ಜಾತಿ ಗಣತಿ ಆಗಬೇಕು ಅಂತ ಎಲ್ಲಾ ಸಮುದಾಯ ಒಪ್ಪಿದೆ. ನಮ್ಮ ಪಕ್ಷದಲ್ಲಿ ಕೂಡ ಯಾವುದೇ ವ್ಯತ್ಯಾಸ ಇಲ್ಲ. ಕ್ಯಾಬಿನೆಟ್ ನಲ್ಲಿ ಚರ್ಚೆಮಾಡಿ, ಸಬ್ ಕಮಿಟಿ ಮಾಡೋದಾ ಅಂತ ನೋಡಬೇಕು. ಇಲ್ಲ ಜನರ ಅಭಿಪ್ರಾಯಕ್ಕೆ ಬಿಡೋದಾ ನೋಡಬೇಕು. ಯಾವುದೇ ಸಮುದಾಯಕ್ಕೂ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.