ಬೆಂಗಳೂರು:- ದಲಿತರ ವೋಟ್ ಬ್ಯಾಂಕ್ಗಾಗಿ ಕಾಂಗ್ರೆಸ್ ಮೊಸಳೆ ಕಣ್ಣೀರಿಡುತ್ತಿದೆ ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ಮಾಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹೆಜ್ಜೆ ಹೆಜ್ಜೆಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಅವಮಾನಿಸುತ್ತಲೇ ಬಂದಿದೆ. ಅಂಬೇಡ್ಕರ್ ಗೆದ್ದಂತಹ ಹಿಂದೂ ಪ್ರಾಬಲ್ಯದ ಕ್ಷೇತ್ರಗಳನ್ನೇ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಂತಹ ದುರುಳ ನೀತಿ ತೋರಿದವರು ಕಾಂಗ್ರೆಸ್ಸಿಗರು. ಅವರು ಈಗ ದಲಿತರ ವೋಟ್ ಬ್ಯಾಂಕ್ಗಾಗಿ ಮೊಸಳೆ ಕಣ್ಣೀರಿಡುತ್ತಿದ್ದಾರೆ ಎಂದರು.
ಅಂಬೇಡ್ಕರ್ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಲೆಂದೇ ಕಾಂಗ್ರೆಸ್ ಅಂದು ಅಂಬೇಡ್ಕರ್ ಗೆದ್ದಂತಹ ಜೈಸೂರು, ಕುಲ್ಲಾ, ಹರೀದ್ಪುರ ಪ್ರದೇಶಗಳನ್ನು ಕ್ಷೇತ್ರಗಳನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ದೇಶಕ್ಕೆ ಒಂದು ಸಂವಿಧಾನದ ಸುಭದ್ರ ಚೌಕಟ್ಟು ನಿರ್ಮಿಸಿಕೊಟ್ಟಂತಹ ಮಹಾನ್ ನಾಯಕ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪಕ್ಷ ಸ್ವತಂತ್ರ ಪೂರ್ವದಿಂದಲೂ ಮಹಾ ಅವಮಾನಗಳನ್ನೇ ಮಾಡುತ್ತಾ ಬಂದಿದೆ. ಗಾಂಧಿ, ನೆಹರು ಕಾಲದಿಂದ ಇಲ್ಲಿವರೆಗೂ ಇದು ಮುಂದುವರಿದೇ ಇದೆ. ಪ್ರಸ್ತುತ ಭೀಮ ಹೆಜ್ಜೆ ಶತಮಾನ ಸಂಭ್ರಮ ಆಚರಿಸದ ರಾಜ್ಯ ಕಾಂಗ್ರೆಸ್ ಸರ್ಕಾರದ ಅವಗಣನೆಯೂ ಇದಕ್ಕೊಂದು ನಿದರ್ಶನ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಅಂಬೇಡ್ಕರ್ ಚುನಾವಣೆ ಮೂಲಕ ಸಂವಿಧಾನ ಸಭೆ ಪ್ರವೇಶಿಸಲು ಬಯಸಿದರೆ ಎರಡು ಬಾರಿಯೂ ಬೆಂಬಲಿಸದ ಕಾಂಗ್ರೆಸ್ ಕುತಂತ್ರ ನಡೆಸಿ ಸೋಲಿಸಿತು. ಕೊನೆಗೆ ದಲಿತ ನಾಯಕ ಜೋಗೇಂದ್ರನಾಥ್ ಮೊಂಡಲ್ ಅವರ ಒತ್ತಾಯದ ಮೇರೆಗೆ ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸಿ ಸಂವಿಧಾನ ಸಭೆಗೆ ಆಯ್ಕೆಯಾದರು. ಆದರೆ ಇದನ್ನೂ ಸಹಿಸದ ಕಾಂಗ್ರೆಸ್ ಅಂಬೇಡ್ಕರ್ ಗೆದ್ದ ಬಹುಸಂಖ್ಯಾತ ಹಿಂದೂಗಳಿದ್ದ ಕ್ಷೇತ್ರಗಳನ್ನೇ ಪಾಕ್ಗೆ ಬಿಟ್ಟುಕೊಟ್ಟಿತು ಎಂದು ಸಚಿವ ಜೋಶಿ ದೂರಿದ್ದಾರೆ.