ಹುಬ್ಬಳ್ಳಿ: 5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ, ಹತ್ಯೆಗೈದಿರುವ ಅಮಾನವೀಯ ಘಟನೆ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರ ಮೂಲದ ಸೈಕೋಪಾತ್ ಓರ್ವ ಬಾಲಕಿಯನ್ನ ಶೆಡ್ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಚೀರಾಟ ಕೇಳಿ ಅಲ್ಲೇ ಇದ್ದ ಸ್ಥಳೀಯರು ಶೆಡ್ನತ್ತ ಬಂದಿದ್ದಾರೆ. ಜನ ಬರುತ್ತಿರುವುದನ್ನು ಕಂಡು, ಭಯದಿಂದ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.
ಇನ್ನೂ 5 ವರ್ಷದ ಬಾಲಕಿ ಹತ್ಯೆ ಖಂಡಿಸಿ, ಆಕ್ರೋಶಗೊಂಡಿರುವ ಬಾಲಕಿ ಪೋಷಕರು ಹಾಗೂ ಸ್ಥಳೀಯರು ಅಶೋಕನಗರ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪೊಲೀಸ್ ಆಯುಕ್ತರು, ಇಂದು ಬೆಳಗ್ಗೆ ತಾಯಿ ಮನೆಗೆಲಸಕ್ಕೆ ಹೋಗುವಾಗ ಮಗುವನ್ನೂ ಕರೆದುಕೊಂಡು ಹೋಗಿದ್ದರು. ತಾಯಿ ಮನೆಯೊಳಗೆ ಕೆಲಸ ಮಾಡುವ ಸಮಯದಲ್ಲಿ ಯುವಕನೋರ್ವ ಮಗುವನ್ನು ಎತ್ತಿಕೊಂಡು ಹೋಗಿದ್ದಾನೆ. ಪಾಳು ಬಿದ್ದ ಕೋಣೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಆರೋಪಿಯ ಹಿನ್ನೆಲೆ ಇನ್ನು ಗೊತ್ತಾಗಿಲ್ಲ. ರೇಪ್ ಬಗ್ಗೆ ಇನ್ನೂ ಮಾಹಿತಿ ಇಲ್ಲ ಎಂದಿದ್ದಾರೆ.