ಬೀದರ್: ರಾಜ್ಯದ ತುತ್ತತುದಿಯ ಗಡಿ ಜಿಲ್ಲೆ ಬೀದರ್ ನ ವಿಮಾನ ನಿಲ್ದಾಣಕ್ಕೆ ಕೊನೆಗೂ ಮುಕ್ತಿ ಸಿಗಲು ಕ್ಷಣಗಣನೆ ಆರಂಭವಾಗಿದೆ. ಈ ಮೂಲಕ ಗಡಿ ಜಿಲ್ಲೆ ಜನರ ದಶಕಗಳ ಕನಸು ನಾಳೆ ನನಸಾಗಲಿದೆ.
ನಾಳೆಯಿಂದ ಬೀದರ್ ವಿಮಾನ ನಿಲ್ದಾಣದಿಂದ ನಾಗರಿಕ ವಿಮಾನಯಾನ ಸೇವೆ ಆರಂಭವಾಗಲಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಏ.16ರಂದು ಬೀದರ್ ಬರಲಿದ್ದು, ಏ.17ರ ಬೆಳಿಗ್ಗೆ ಐದು ಜನ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ವಿತರಿಸಿ ವಿಮಾನ ಸಂಚಾರಕ್ಕೆ ಚಾಲನೆ ನೀಡುವರು.
ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಕನಸು ಬೀದರ್ ಏರ್ಪೋರ್ಟ್. ದಶಕಗಳ ಕಾಲ ನಡೆದ ಕಾಮಾಗಾರಿ ಪೂರ್ಣಗೊಂಡಿದ್ದು, ಮುಂಬೈ, ಬೆಂಗಳೂರು, ಹೈದರಾಬಾದ್, ದೆಹಲಿಗೆ ವಿಮಾನ ಹಾರಾಟ ಪ್ರಾರಂಭವಾಗಲಿದೆ.
ಬುಧವಾರ ಬೀದರ್ ಗೆ ಬರಲಿರುವ ಸಿಎಂ ಸಿದ್ದರಾಮಯ್ಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಏ.16ರ ಸಂಜೆ 4ಕ್ಕೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಬೃಹತ್ ಸಾರ್ವಜನಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲ ಕಾಮಗಾರಿಗಳಿಗೆ ಸಿದ್ದರಾಮಯ್ಯ ಚಾಲನೆ ನೀಡುವರು. ಕಾರ್ಯಕ್ರಮಕ್ಕೆ ಸುಮಾರು 50 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ.
ಬೀದರ್–ಬೆಂಗಳೂರು ನಡುವೆ ನಾಗರಿಕ ವಿಮಾನಯಾನ, ಜಿಲ್ಲಾಡಳಿತ ಸಂಕೀರ್ಣ, ಮೆಹಕರ್ ಏತ ನೀರಾವರಿ ಯೋಜನೆ, ಔರಾದ್ ತಾಲ್ಲೂಕಿನ 36 ಕೆರೆ ತುಂಬಿಸುವುದು, ಭಾಲ್ಕಿಯಲ್ಲಿ ಕ್ರೀಡಾ ಸಮುಚ್ಚಯ ನಿರ್ಮಾಣ ಪ್ರಮುಖ ಯೋಜನೆಗಳು, ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಿಗಲಿದೆ.
ವಿವಿಧ ಕಾಮಗಾರಿಗಳ ವಿವರ..
* ಔರಾದ್ನ ನಾಗೂರ್, ಸಂತಪೂರನಲ್ಲಿ 220 ಕೆ.ವಿ ಉಪಕೇಂದ್ರಗಳ ಉದ್ಘಾಟನೆ (₹114 ಕೋಟಿ)
* ಬೀದರ್ ನಗರಸಭೆ ಮತ್ತು ಭಾಲ್ಕಿ ಪುರಸಭೆ ವ್ಯಾಪ್ತಿಯ ವಿವಿಧ ಕಾಮಗಾರಿಗಳು (₹49 ಕೋಟಿ)
* ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಭಾಲ್ಕಿಯಲ್ಲಿ 400 ಮನೆಗಳ ಹಸ್ತಾಂತರ (₹23 ಕೋಟಿ)
* ಬ್ರಿಮ್ಸ್ನಲ್ಲಿ ಹೃದ್ರೋಗ ಚಿಕಿತ್ಸಾ ಘಟಕ ಮತ್ತು ಕ್ಯಾಥ್ಲ್ಯಾಬ್ ಉದ್ಘಾಟನೆ (₹15.11 ಕೋಟಿ)
* ವಿದ್ಯಾರ್ಥಿನಿಲಯ, ಅಂಗನವಾಡಿ ಕೇಂದ್ರ, ಶಾಲೆ ಮತ್ತು ಆರೋಗ್ಯ ಕೇಂದ್ರ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳ ಲೋಕಾರ್ಪಣೆ
* ಭಾಲ್ಕಿ ತಾಲ್ಲೂಕಿನ ಮೆಹಕರ್ ಏತ ನೀರಾವರಿ ಯೋಜನೆ ಹಾಗೂ ಔರಾದ್ ತಾಲ್ಲೂಕಿನ 36 ಕೆರೆ ತುಂಬಿ ಸುವ ಯೋಜನೆಗೆ ಶಂಕುಸ್ಥಾಪನೆ (₹582 ಕೋಟಿ)
* ಬೀದರ್ ತಾಲ್ಲೂಕಿನ ಬಗದಲ್ ಹಾಗೂ ಇತರ 104 ಜನವಸತಿ ಮತ್ತು ಚಿಟಗುಪ್ಪ ತಾಲ್ಲೂಕಿನ ಮನ್ನಾಏಖೆಳ್ಳಿ ಹಾಗೂ 32 ಜನ ವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ (₹330 ಕೋಟಿ)
* ಬೀದರ್ ನಗರಸಭೆ, ಬಸವಕಲ್ಯಾಣ, ಭಾಲ್ಕಿ, ಹುಮನಾಬಾದ್, ಚಿಟಗುಪ್ಪ ಮತ್ತು ಔರಾದ್ ಪುರಸಭೆ ವ್ಯಾಪ್ತಿಯಲ್ಲಿ ಜಲಮೂಲಗಳ ಪುನಶ್ಚೇತನ ಮತ್ತು ಉದ್ಯಾನ ಅಭಿವೃದ್ಧಿ (₹100 ಕೋಟಿ)
* ಬೀದರ್ ನಗರಸಭೆ, ಹುಮನಾಬಾದ್ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಉನ್ನತೀಕರಣ (₹80 ಕೋಟಿ)
*ಔರಾದ್ ತಾಲ್ಲೂಕಿನ ಹಂಗರಗಾ– ಸಾವರಗಾಂವ್ ನಡುವೆ ಬ್ರಿಜ್ ಕಂ ಬ್ಯಾರೇಜ್ (₹70 ಕೋಟಿ)
* ಪ್ರಜಾಸೌಧ– ಜಿಲ್ಲಾಡಳಿತ ಕಚೇರಿ ಕಟ್ಟಡ ನಿರ್ಮಾಣ (₹48 ಕೋಟಿ)
* ಹೊಸ ತಾಲ್ಲೂಕುಗಳಾದ ಚಿಟಗುಪ್ಪ, ಕಮಲನಗರ, ಹುಲಸೂರ ಆಡಳಿತ ಕೇಂದ್ರ ಕಟ್ಟಡ ನಿರ್ಮಾಣ (₹25 ಕೋಟಿ)
* ಹೊನ್ನಿಕೇರಿ ಮೀಸಲು ಅರಣ್ಯದಲ್ಲಿ ಪರಿಸರ ಪ್ರವಾಸೋದ್ಯಮ ಯೋಜನೆ (₹15 ಕೋಟಿ)
* ಭಾಲ್ಕಿಯಲ್ಲಿ ಅತ್ಯಾಧುನಿಕ 150 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣ (₹16 ಕೋಟಿ)
* ಭಾಲ್ಕಿಯಲ್ಲಿ ಸುಸಜ್ಜಿತ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾ ಸಮುಚ್ಚಯ (₹15 ಕೋಟಿ)
ಭಾಲ್ಕಿ ಆರ್.ಟಿ.ಒ. ಕಚೇರಿ ಮತ್ತು ವಾಹನ ಚಾಲನಾ ಪರೀಕ್ಷಾ ಪಥ ಸೇರಿದಂತೆ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ