ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ವೀರಚಿನ್ನೇನಹಳ್ಳಿ ಗ್ರಾಮದಲ್ಲಿ ಭೀಕರ ಕೊಲೆಯೊಂದು ನಡೆದು ಹೋಗಿದೆ. ಮನಸೋ ಇಚ್ಚೆ ಚಾಕುವಿನಿಂದ ಇರಿದು ರಾಜು (40) ಎಂಬಾತನ ಕೊಲೆ ಮಾಡಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ.
ಇಂದು ಬೆಳಗಿನಜಾವ 4.30ರ ವೇಳೆ ಕಾಲಿಗೆ ಟವೆಲ್ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ವೀರಚಿನ್ನೇನಹಳ್ಳಿ ಗ್ರಾಮದ ರಾಜುನ ಸಂಬಂಧಿಯೊಬ್ಬರ ಮನೆ ಬಳಿಯೇ ಈ ಘಟನೆ ನಡೆದಿದೆ. ಮೂರು ಜನರಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಯಾವ ಕಾರಣಕ್ಕೆ ಕೊಲೆ ನಡೆದಿದೆ, ಕೊಲೆ ಮಾಡಿದವರ್ಯಾರು ಎಂದು ತಿಳಿದು ಬಂದಿಲ್ಲ. ತುಮಕೂರಿನ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲಿಸರು ತನಿಖೆ ಆರಂಭಿಸಿದ್ದಾರೆ.