ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಆಗಾಗ ಟಿ ಆರ್ ಪಿ ಡೀಲ್ ಎಂಬ ಪೆಡಂಭೂತದ ಬಗ್ಗೆ ಮಾತುಕತೆ ಆಗುತ್ತದೆ. ಅವರ ಸೀರಿಯಲ್ ಹಾಗಂತೆ, ಇವರದು ಹೀಗಂತೆ ಎಂಬ ಗಾಳಿಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಒಬ್ಬ ಪ್ರೊಡ್ಯೂಸರ್ ಉದ್ದಾರ ಆಗುತ್ತಿದ್ದರೆ ಅದನ್ನ ನೋಡಿ ಹೊಟ್ಟೆಕಿಚ್ಚು ಪಡಲು ಹತ್ತು ಜನರು ತಯಾರಿರುತ್ತಾರೆ. ಒಂದು ಧಾರಾವಾಹಿ ಹಿಂದಿನ ಶ್ರಮ, ಅದಕ್ಕೆ ಪಡಬೇಕಾದ ಕಷ್ಟ- ಗೊತ್ತಿದ್ದರೂ ಉರಿದುಕೊಳ್ಳೋರು ಉರಿಯುತ್ತಲೇ ಇರುತ್ತಾರೆ.
ಈಗ ಮೊದಲಿನ ದಿನಗಳ ಹಾಗೆ ಟಿ ಆರ್ ಪಿ ಯಾವ ಸೀರಿಯಲ್ ಗೂ ಬರುತ್ತಿಲ್ಲ. ನಂಬರ್ ಒನ್ ಅನ್ನಿಸಿಕೊಂಡ ಚಾನೆಲ್ ನ ಟಿಆರ್ಪಿ ಕೂಡ ಬಹಳ ಕೆಳಕ್ಕೇ ಬಂದಿದೆ. 10-15 ಟಿ ಆರ್ ಪಿ ಬರುವ ಕಾಲ ಹೋಗಿ, ಅದೀಗ 5-6 ಕ್ಕೆ ಇಳಿದಿದೆ.
ಇಂಡಸ್ಟ್ರಿಯ ದೊಡ್ಡದೊಂದು ರಿಯಾಲಿಟಿ ಶೋ ಮಾಡುವ ಚಾನಲಿನ ಸೀರಿಯಲ್ಲುಗಳ ವಿಚಾರಕ್ಕೆ ಬಂದರೆ ಅದನ್ನ ನೋಡೋರೇ ಇಲ್ಲ. ಮೇಲಿಂದ ಮೇಲೆ ಲಾಂಚ್ ಮಾಡಿದ ಹೆಚ್ಚಿನ ಸೀರಿಯಲ್ಲುಗಳೂ ಮಕಾಡೆ. ಇನ್ನು ಉಳಿದ ಒಂದೆರಡು ಸೀರಿಯಲ್ಲುಗಳಿಗೆ ನಂಬರೋ ನಂಬರು! ಅದನ್ನ ಯಾರು ಯಾಕೆ ನೋಡುತ್ತಾರೆ ದೇವರೇ ಬಲ್ಲರು! ಅತ್ಯಂತ ಕಳಪೆ ಕತೆ ಹೊಂದಿರುವ, ನೋಡಲೂ ಸಾಧ್ಯವಿಲ್ಲದ ಸೀರಿಯಲ್ಲು ಓಡುತ್ತಲೇ ಇರುತ್ತದೆ. ಕಾರಣ- ನೀವು ಕೇಳಬಾರದು ನಾವು ಹೇಳಬಾರದು!
Chanakya Niti: ಚಾಣಕ್ಯನ ಪ್ರಕಾರ ಮಕ್ಕಳ ವಿಷಯದಲ್ಲಿ ಪೋಷಕರು ಈ ತಪ್ಪುಗಳನ್ನು ಮಾಡಬಾರದು…!
ಇನ್ನು ಉಳಿದ ಒಂದೆರಡು ಚಾನಲ್ಲುಗಳು ಆಟಕ್ಕುಂಟು ಲೆಕ್ಕಕ್ಕೆ ಇಲ್ಲ. ಆದರೆ ಟಿ ಆರ್ ಪಿ ಡೀಲ್ ವಿಷಯ ಬಂದಾಗ ಇಲ್ಲಿ ಬರುವ ಸೀರಿಯಲ್ಲುಗಳ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಲೇ ಇರುತ್ತದೆ. ಏಕೆಂದರೆ ದೊಡ್ಡವರ ವಿಷಯ ಯಾರೂ ಮಾತನಾಡುವುದಿಲ್ಲ! ಅಲ್ಲಿನ ಒಳಗಿನ ಕರಾಳ ಕತೆಗಳು ಹೊರಗೇ ಬರುವುದಿಲ್ಲ! ಯಾವುದೋ ನಂಟಿನ-ಗಂಟಿನ ಧಾರಾವಾಹಿಗಳಿಗೆ ತಡರಾತ್ರಿಯಲ್ಲೂ ಭರ್ಜರಿ ಟಿ ಆರ್ ಪಿ. ಕಾರಣ- ನೀವು ಕೇಳಬಾರದು ನಾವು ಹೇಳಬಾರದು!
ಬಣ್ಣಬಣ್ಣದ ಚಾನಲ್ ಒಂದರಲ್ಲಿ ಸೀರಿಯಲ್ ನಿಲ್ಲಿಸುತ್ತೇನೆ ಎಂದಾಗೆಲ್ಲ ಒಬ್ಬ ಪ್ರೊಡ್ಯೂಸರ್ ಧಾರಾವಾಹಿಯ ಟೀಆರ್ ಪಿ ಮುಗಿಲು ಮುಟ್ಟುತ್ತದೆ. ಯಾಕೆ? ಇನ್ನೊಬ್ಬ ಪ್ರೊಡ್ಯೂಸರ್ ಎಂಟರಿಂದ ಹತ್ತೇ ದಿನಕ್ಕೆ ಧಾರಾವಾಹಿ ಸುತ್ತಿ ಮುಗಿಸುತ್ತಾರೆ. ಆದರೂ ನಂಬರ್ ಮಾತ್ರ ಭರ್ಜರಿ. ಯಾಕೆ? ಅದೇ ಬಣ್ಣಬಣ್ಣದ ಚಾನಲಿನಲ್ಲಿ ಆಯಕಟ್ಟಿನ ಜಾಗದಲ್ಲಿ ಕೂತವರು ’ಇನ್ವೆಸ್ಟ್’ ಮಾಡಿರೋ ಧಾರಾವಾಹಿಗಳು ಬಹುಕಾಲ ನಡೆಯುತ್ತವೆ!
ಅವರ ಸೀರಿಯಲ್ ಗೆ ಸದಾ ಕಾಲ ’ಜಯ’ವೇ! ಕಾರಣ ನೀವು ಕೇಳಬಾರದು ನಾವು ಹೇಳಬಾರದು. ಆದರೆ ಹೊರಗಡೆ ಕೊಡುವ ಪೋಸ್ ತಾನು ಮಾತ್ರ ಸತ್ಯ ಹರಿಶ್ಚಂದ್ರನ ತುಂಡಣ್ಣ! ಉಳಿದವರೆಲ್ಲ ಸುಳ್ಳಣ್ಣ . ತನ್ನದೆಲ್ಲ ಬಿಳಿಯಣ್ಣ ಉಳಿದವರದೆಲ್ಲ ಕಪ್ಪಣ್ಣ! ಕೊನೆಗೆ, ಜನರಿಗೆ ಒಂದು ಸೀರಿಯಲ್ ಇಷ್ಟ ಆಯಿತೋ- ನೋಡುತ್ತಾರೆ. ಇಲ್ಲವೋ ಬಿಡುತ್ತಾರೆ. ಅಲ್ಲಿಗೆ ಮುಗೀತು. ಅಲ್ಲವೆ?