ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ಮಿತಿ ಮೀರಿದ್ದು, ಇವರಿಗೆ ಪೊಲೀಸರ ಭಯ ಇಲ್ವಾ ಎಂಬ ಪ್ರಶ್ನೆ ಮೂಡಿದೆ.
ಹೌದು, ಜೀವನಕ್ಕಾಗಿ ಬೆಂಗಳೂರಿಗೆ ಬಂದಿದ್ದ ಉತ್ತರ ಪ್ರದೇಶ ಮೂಲದ ಹುಡುಗರಿಗೆ ಗಾಂಜಾ ನಶೆಯಲ್ಲಿದ್ದ ಪುಂಡರು, ಹಲ್ಲೆ ಮಾಡಿ ಸುಲಿಗೆ ಮಾಡಿದ್ದಾರೆ. ಹಲ್ಲೆ ಬಳಿಕ ಮೊಬೈಲ್ ಹಾಗೂ ಹಣವನ್ನು ಈ ಗ್ಯಾಂಗ್ ಸುಲಿಗೆ ಮಾಡಿದ್ದು, ಬೆಂಗಳೂರು ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
AIN ಕನ್ನಡ ನ್ಯೂಸ್ ಗೆ ಆರೋಪಿಗಳು ಹಲ್ಲೆ ಮಾಡುವ ಎಕ್ಸ್ ಕ್ಲೂಸಿವ್ ಸಿಸಿಟಿವಿ ಫುಟೇಜ್ ಲಭ್ಯವಾಗಿದೆ. ಈ ದೃಶ್ಯದಲ್ಲಿ ಆರೋಪಿಗಳು ಹಲ್ಲೆ ಮಾಡುವ ದೃಶ್ಯ, ತುಂಬಾ ಭಯಾನಕವಾಗಿದೆ. 5 ಮಂದಿಗೂ ಅಧಿಕ ಆರೋಪಿಗಳಿಂದ ಕೃತ್ಯ ನಡೆದಿದ್ದು, ಅಮಾಯಕ ಹುಡುಗರ ಮೇಲೆ ಸಿಕ್ಕ ಸಿಕ್ಕಲ್ಲಿ ಹಲ್ಲೆ ಮಾಡಿ ಗೂಂಡಾ ವರ್ತನೆ ತೋರಿದ್ದಾರೆ. ಕಳೆದ 15 ನೇ ತಾರೀಕು ರಾತ್ರಿ 10.15 ರ ಸುಮಾರಿಗೆ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಪಾಳ್ಯ ಬಸ್ ಸ್ಟಾಪ್ ನಲ್ಲಿರುವ ನಂದಿನಿ ಭೂತ್ ಬಳಿ ನಡೆದಿರುವ ಘಟನೆ ಇದಾಗಿದೆ. ಹಲ್ಲೆಗೊಳಗಾದ ಯುಪಿ ಬಿಹಾರದ ಹುಡುಗರು, ಐಸ್ ಕ್ಯಾಂಡಿ ಸೇರಿದಂತೆ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು. ಇವರ ಬಳಿ ಹಣ ಇದೆ ಅಂತ ತಿಳಿದು ಆರೋಪಿಗಳು, ಹಣ ಕೇಳಿದ್ದಾರೆ. ಈ ವೇಳೆ ಹಣ ಕೊಡದೇ ಇದ್ದಾಗ ಏಕಾಏಕಿ ಅಟ್ಟಾಡಿಸಿ ಹಲ್ಲೆ ಮಾಡಿ ಸುಲಿಗೆ ಮಾಡಲಾಗಿದೆ. ಈ ವೇಳೆ ನಂದಿನಿ ಭೂತ್ ಮಾಲೀಕ ಕೂಡ ಆರೋಪಿಗಳನ್ನ ತಡೆದಿದ್ದಾರೆ.
ಆದ್ರೆ ಕ್ಯಾರೆ ಅನ್ನದೆ ಸಿಕ್ಕ ಸಿಕ್ಕ ಹಾಗೆ ಆರೋಪಿಗಳು ಹಲ್ಲೆ ಮಾಡಿದ್ದಾರೆ.. ದೊಣ್ಣೆಯಲ್ಲೂ ಹಲ್ಲೆ ಮಾಡಿ, ದುಷ್ಕೃತ್ಯ ಮೆರೆದಿದ್ದಾರೆ. ಈ ವೇಳೆ ನಂದಿನಿ ಭೂತ್ ಮಾಲೀಕ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಸದ್ಯ ಘಟನೆ ಸಂಬಂಧ ಮೊಬೈಲ್ ಹಾಗೂ ಹಣ ಕಿತ್ತು ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪರಾರಿಯಾಗಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ರಾಹುಲ್ ಹೆಸರಿನ ಇಬ್ಬರು ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಕೈಗೊಂಡಿದ್ದಾರೆ.