ಆಂಧ್ರಪ್ರದೇಶ:- ಗುತ್ತಿಗೆದಾರನೊಬ್ಬ ಪಾರ್ಕ್ ಮಾಡಲಾದ ಕಾರನ್ನು ತೆರವುಗೊಳಿಸದೇ ಅದಕ್ಕೂ ಸೇರಿ ಕಾಂಕ್ರಿಟ್ ಹಾಕಿಕೊಂಡು ರಸ್ತೆ ನಿರ್ಮಾಣ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ಜರುಗಿದೆ.
ಬಾಪಟ್ಲಾ ಜಿಲ್ಲೆಯ ವೆಟಪಾಲೇಂ ಮಂಡಲದ ಅಮೋದಗಿರಿಟಪ್ಣಂ ಎಂಬಲ್ಲಿ ಈ ಘಟನೆ ನಡೆದಿದೆ. ಬುದ್ದಿ ವೆಂಕಟರಮಣ ಎಂಬ ವ್ಯಕ್ತಿ ಮನೆಯ ಮುಂದೆ ನಡೆದಿದೆ. ಬುದ್ದಿ ವೆಂಕಟರಮಣ ಅವರ ಮನೆಯಿಂದ ಚೆನ್ನಮ್ ಸೆಟ್ಟಿ ಸುಬ್ಬರಾಮ್ ಎಂಬವರ ಮನೆಯವರೆಗೆ ದೇಶಾಯಿಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 4.10 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕೆಲಸ ನಡೆಯುತ್ತಿದೆ. ಹೊಸ ರಸ್ತೆ ನಿರ್ಮಾಣ ಮಾಡುವಾಗ ಅಡ್ಡಲಿರುವ ಕಲ್ಲು, ಕಸ, ಕಡ್ಡಿ ವಸ್ತುಗಳನ್ನು ತೆರವುಗೊಳಿಸುವುದು ಗುತ್ತಿಗೆದಾರರ ಮೊದಲ ಜವಾಬ್ದಾರಿಯಾಗಿರುತ್ತದೆ. ಆದರೆ ಇಲ್ಲಿ ಹಾಗಾಗಲಿಲ್ಲ. ಈ ರಸ್ತೆ ನಿರ್ಮಾಣ ಮಾಡುತ್ತಿದ್ದಾಗ ವೆಂಕಟ ರಮಣ ಅವರ ಮನೆ ಮುಂದೆ ಒಂದು ಹಳೆಯ ಕಾರನ್ನು ನಿಲ್ಲಿಸಲಾಗಿತ್ತು. ಇದನ್ನು ರಸ್ತೆ ನಿರ್ಮಾಣ ಮಾಡುವಾಗ ತೆರವುಗೊಳಿಸಲೇ ಇಲ್ಲ. ಗುತ್ತಿಗೆದಾರ ಕಾರನ್ನು ತೆಗೆಯದೇ ಅದಕ್ಕೂ ಸೇರಿ ಕಾಂಕ್ರಿಟ್ ಹಾಕಿಕೊಂಡು ಹೋಗಿದ್ದಾನೆ. ಹೀಗಾಗಿ ಕಾರು ಇದೀಗ ಹೊಸ ರಸ್ತೆಗೆ ಬಲವಾಗಿ ಅಂಟಿಕೊಂಡಿದೆ.
ಈ ಕುರಿತು ಪಂಚಾಯತ್ ಕಾರ್ಯದರ್ಶಿಯನ್ನು ಪ್ರಶ್ನಿಸಿದಾಗ, “ಕಳೆದ ಒಂದು ವರ್ಷದಿಂದ ಈ ಕಾರು ಅಲ್ಲೇ ನಿಂತಿದೆ. ಕಾರು ತೆಗೆಯುವಂತೆ ಅದರ ಮಾಲೀಕರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಹಾಗಾಗಿ ಬೇರೆ ಆಯ್ಕೆಗಳಿಲ್ಲದೇ, ಗುತ್ತಿಗೆದಾರ ಕಾರಿಗೂ ರಸ್ತೆಗೆ ಕಾಂಕ್ರಿಟ್ ಹಾಕಿದ್ದಾರೆ” ಎಂದು ತಿಳಿಸಿದರು.