ಗದಗ: ರಾಜಕೀಯ ಹಿನ್ನಲೆ, ರಾಜ್ಯದಲ್ಲಿ ಬಲಾಢ್ಯ ಹೊಂದಿದ ಮೇಲ್ಜಾತಿಗಳು ಜಾತಿಗಣತಿ ವಿರೋಧ ಮಾಡ್ತಿವೆ. ಬಲಾಢ್ಯ ಜಾತಿಗಳು ಜನಸಂಖ್ಯೆಯಲ್ಲಿ ಕಡಿಮೆ ಇದ್ರೂ, ರಾಜಕೀಯ ಅಧಿಕಾರ ಮುಂದಿಟ್ಟು ಕೆಳಜಾತಿ ನಿಯಂತ್ರಿಸುವ ಕೆಲಸ ಮಾಡುತ್ತಿವೆ ಅಂತ ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ ಹೇಳಿದರು.
ಗದಗನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂಗಾಯತ, ಒಕ್ಕಲಿಗರು, ಕುರುಬರು ಹಾಗೂ ಸ್ವಾಮಿಗಳ ವಿರುದ್ಧ ಹರಿಹಾಯ್ದರು. ಓರ್ವ ರಾಜಕಾರಣಿ ಹೇಳ್ತಾರೆ ಎರಡು ಸಮುದಾಯ ವಿರೋಧ ಕಟ್ಟಿಕೊಂಡು ಹೇಗೆ ಗಣತಿ ಜಾರಿಗೊಳಿಸ್ತಿರಿ ಅಂತಾರೆ. ಈ ರಾಜ್ಯ ಅವರಪ್ಪನದ್ದಾ? ಎರಡು ಜಾತಿಗಳದ್ದಾ? ನೂರಾರು ಜಾತಿಗಳು, ದೊಡ್ಡ ಸಮುದಾಯ ಇದೆ. ಬೆದರಿಸುವ ಗೂಂಡಾಗಿರಿ ಮಾಡುವ ಮೂಲಕ ತನ್ನ ಜಾತಿಯ ಹಿರಿಮೆಯನ್ನು ಉಳಿಸಿಕೊಳ್ಳಲು ಕೆಲವು ಹೆಗ್ಗಣಗಳು ಬಂದು ವಿನಾಕಾರಣ ಬಾಯಿ ಮಾಡುತ್ತಿವೆ ಎಂದರು. ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ತೊಡೆದು ಹಾಕಲು ಮೇಲ್ಜಾತಿಗಳು ಕೆಲಸ ಮಾಡುತ್ತಿವೆ. ತಮ್ಮ ಜಾತಿಯ ಹಿರಿಮೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡ್ತಿದ್ದಾರೆ. ರಾಜಕಾರಣಿಗಳು ಅಷ್ಟೇ ಅಲ್ಲಾ ಸ್ವಾಮಿಗಳು ಬೇಕಾಬಿಟ್ಟಿಯಾಗಿ ಮಾತನಾಡ್ತಿದ್ದಾರೆ. ಲಿಂಗಾಯತ ಸ್ವಾಮಿಜಿ ಹೇಳುವ ಪ್ರಕಾರ ಅವರದ್ದು ಒಂದೂವರೆ ಕೋಟಿ ಜನಸಂಖ್ಯೆ ಅಂತಾರೆ. ಬೇಕಾಬಿಟ್ಟಿಯಾಗಿ ವಾಸ್ತವ ಅಲ್ಲದ ಅಂಕಿ ಸಂಖ್ಯೆಗಳನ್ನು ಹೇಳುವ ಮೂಲಕ ಜನರು ದಿಕ್ಕು ತಪ್ಪಿಸುವ ಕೆಲಸವನ್ನು ಈ ರಾಜ್ಯದ ಧಾರ್ಮಿಕ ಮುಖಂಡರು, ವರದಿ ವಿರೋಧ ಮಾಡುವ ರಾಜಕೀಯ ಮುಖಂಡರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಾತಿ ವ್ಯವಸ್ಥೆ ಶ್ರೇಷ್ಠ ಮತ್ತು ಕನಿಷ್ಠತೆಯನ್ನು ಹುಟ್ಟು ಹಾಕಿದ್ದು. ಈ ಬಗ್ಗೆ ದೇಶದಲ್ಲಿ ಸರಿಯಾದ ಅಧ್ಯಯನ ಆಗಬೇಕು. 1931ರಲ್ಲಿ ಜಾತಿ ಗಣತಿ ನಡೆದಿದ್ದು, ಅಂದಿನಿಂದ ಇಂದಿನವರೆಗೂ ನಿಖರವಾದ ಜಾತಿ ಗಣತಿ ನಡೆದಿಲ್ಲ. ಹಿಗಿದ್ದರೂ ಜಾತಿ ಗಣತಿ ಆಧಾರದ ಮೇಲೆ ಹಲವು ತೀರ್ಮಾನ ಆಗುತ್ತಿರುವುದು ಸರಿಯಾದ ಕ್ರಮವಲ್ಲ. ವರದಿ ಇನ್ನೂ ಸಂಪೂರ್ಣವಾಗಿ ಬಿಡುಗಡೆ ಆಗದಿದ್ದರೂ, ಅವೈಜ್ಞಾನಿಕ ಅಂತ ಹೇಳುವುದು ಸೂಕ್ತವಲ್ಲ. ರಾಜ್ಯದ ಮಠಾಧೀಶರು ಸೇರಿದಂತೆ ಹಲವರು ತಮ್ಮ ಸಮುದಾಯ ಉಳಿಸಿಕೊಳ್ಳಲು ಈ ವರದಿಯನ್ನು ನಿರಾಕರಿಸುತ್ತಿವೆ. ಜೊತೆಗೆ, ತಮ್ಮ ಅಧಿಕಾರ ಕಳೆದುಕೊಳ್ಳುತ್ತವೆ ಎನ್ನುವ ಭೀತಿಯಲ್ಲಿದೆ. ಕಾಂತರಾಜು ವರದಿ ಕೇವಲ ಜಾತಿ ಜನಗಣತಿ ಅಲ್ಲ. ಸಾಮಾಜಿಕ ಸ್ಥಿತಿಗತಿ ಕೂಡ ಅದರಲ್ಲಿ ಅಡಗಿದೆ. ಹಾವನೂರ ವರದಿ, ಚಿನ್ನಪ್ಪರೆಡ್ಡಿ ವರದಿ ಸೇರಿದಂತೆ ಹಲವಾರು ವರದಿಗಳನ್ನು ಮೇಲ್ಜಾತಿಯವರು ಒಪ್ಪಿಕೊಂಡಿಲ್ಲ. ಅದೇ ರೀತಿ ಕಾಂತರಾಜು ವರದಿಯನ್ನು ತಿರಸ್ಕಾರ ಮಾಡುವ ಹುನ್ನಾರ ನಡೆದಿದೆ. ಆರ್ಥಿಕವಾಗಿ, ರಾಜಕೀಯವಾಗಿ ಬಲಾಢ್ಯವಾಗಿರುವ ಲಿಂಗಾಯತರು ಹಾಗೂ ಒಕ್ಕಲಿಗರು ಈ ವರದಿ ಒಪ್ಪಿಕೊಳ್ಳುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಮೆಲ್ಜಾತಿಯವರ ರಾಜಕೀಯ ಒತ್ತಡಕ್ಕೆ ಮಣಿಯದೇ ವರದಿಯನ್ನು ಅನುಷ್ಠಾನಗೋಳಿಸಬೇಕು. ವರದಿ ಜಾರಿಯಾಗುವುದರಿಂದ ಹಿಂದೂಳಿದ ವರ್ಗಗಳ ಏಳಿಗೆಗೆ ಸಹಾಯವಾಗುತ್ತದೆ. ವರದಿಯಲ್ಲಿ ದೋಷ ಕಂಡು ಬಂದರೆ ಅಧ್ಯಯನ ಮಾಡಲಿ ಅಂತ ಸಲಹೆ ನೀಡಿದರು.