ಗದಗ : ಸಿಇಟಿ ಪರೀಕ್ಷೆ ಬರೆಯಲು ಬ್ರಾಹ್ಮಣ ವಿದ್ಯಾರ್ಥಿಗೆ ಜನಿವಾರ ತೆಗೆಸಿದ್ದ ಪ್ರಕರಣ ಸಂಬಂಧ ಬ್ರಾಹ್ಮಣ ಸಮುದಾಯ ಭಾರೀ ಆಕ್ರೋಶ ವ್ಯಕ್ತಪಡಿಸಿದೆ.
ಗದಗ ಜಿಲ್ಲಾ ಕಾಂಗ್ರೆಸ್ ಹಾಗೂ ಬ್ರಾಹ್ಮಣ ಸಮಾಜ ಮುಖಂಡ ಗುರಣ್ಣ ಬಳಗಾನೂರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬೀದರ್ ಹಾಗೂ ಶಿವಮೊಗ್ಗ ಘಟನೆಯನ್ನು ಜನಿವಾರ ಹಾಕುವ ಎಲ್ಲ ಸಮುದಾಯಗಳು ಖಂಡಿಸಬೇಕು. ಜನಿವಾರ ತೆಗೆಯಲು ಹೇಳಿದ ಅಧಿಕಾರಿ, ಸಿಬ್ಬಂದಿಗೆ ಶಿಕ್ಷೆ ಆಗುವವರೆಗೂ ಹೋರಾಟ ಮಾಡುತ್ತೇವೆ. ಯಜ್ಞೋಪವೇತ ಧಾರಣೆ ಮಾಡುವ ಎಲ್ಲಾ ಸಮುದಾಯ ನಮ್ಮೊಂದಿಗೆ ಇರಬೇಕು.
ರಾಜ್ಯದಲ್ಲಿ ನಡೆದ ಘಟನೆಯನ್ನು ಖಂಡಿಸುತ್ತೇವೆ. ಬ್ರಾಹ್ಮಣ ಸಮಾಜವನ್ನು ಅವಮಾನ ಮಾಡುವುದು ಅವರ ಉದ್ದೇಶ ಆದಂತಿದೆ. ವಿದ್ಯಾರ್ಥಿಗಳಿಗೆ ಅವಮಾನ ಮಾಡಿದ ಅಧಿಕಾರಿ, ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಬೇಕು. ಬ್ರಾಹ್ಮಣರ ಭಾವನೆಗೆ ದಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ತಪ್ಪಿತಸ್ಥರನ್ನು ಸೇವೆಯಿಂದ ವಜಾ ಮಾಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಇನ್ನೂ ಜಾತಿ ಗಣತಿಯಲ್ಲಿ ಬ್ರಾಹ್ಮಣ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದರು. ರಾಜ್ಯಾದ್ಯಾಂತ 40 ರಿಂದ 50 ಲಕ್ಷ ಬ್ರಾಹ್ಮಣರಿದ್ದಾರೆ. ಜಾತಿ ಗಣತಿಯಲ್ಲಿ ಕೇವಲ 14 ಲಕ್ಷ ಸಂಖ್ಯೆಯನ್ನು ತೋರಿಸಲಾಗಿದೆ. ಈ ವರದಿಯನ್ನು ನಾವು ನಿರಾಕರಿಸುತ್ತೇವೆ. ಮುಂದಿನ ದಿನಗಳಲ್ಲಿ ಗದಗ ಜಿಲ್ಲೆಯಾದ್ಯಂತ ಬ್ರಾಹ್ಮಣ ಸಂಘದಿಂದ ಜಾತಿ ಗಣತಿ ಮಾಡಲಿದ್ದೇವೆ ಎಂದರು.