ಚಾಮರಾಜನಗರ : ಅಡುಗೆ ತಯಾರಿಸುವಾಗ ಕುಕ್ಕರ್ ಸಿಡಿದು ಗೃಹಿಣಿ ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಪುರ ಗ್ರಾಮದಲ್ಲಿ ನಡೆದಿದೆ. ರತ್ನಮ್ಮ (40) ಗಾಯಗೊಂಡ ಮಹಿಳೆ.
ಮನೆಯಲ್ಲಿ ಬೆಳಗಿನ ಉಪಹಾರ ತಯಾರಿಸಲು ಗ್ಯಾಸ್ ಒಲೆಯ ಮೇಲೆ ಕುಕ್ಕರ್ ಇಟ್ಟು ಅನ್ನ ತಯಾರಿಸುವಾಗ ಏಕಾಏಕಿ ಕುಕ್ಕರ್ ಸಿಡಿದು ಮುಚ್ಚುಳ ಮೇಲೆ ಹಾರಿ ಪಕ್ಕದಲ್ಲಿಯೇ ನಿಂತಿದ್ದ ರತ್ನಮ್ಮನ ತಲೆಯ ಮೇಲೆ ಬಿದ್ದ ಪರಿಣಾಮ ಗಾಯಗೊಂಡಿದ್ದಾರೆ. ಇದಲ್ಲದೆ ಅನ್ನದ ಬಿಸಿಗಂಜಿ ಮುಖ, ಕೈ ಕಾಲುಗಳಿಗೆ ಬಿದ್ದು ಸುಟ್ಟ ಗಾಯಗಳಾಗಿದೆ.
ತಕ್ಷಣ ಕುಟುಂಬಸ್ಥರು ಕೊಳ್ಳೇಗಾಲ ಉಪವಿಭಾಗ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲು ಮಾಡಿದ್ದಾರೆ. ವೈದ್ಯರಾದ ಡಾ. ಸುನಿತಾ ಮತ್ತು ಸಿಬ್ಬಂದಿಗಳು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಈ ಸಂಬಂಧ ರಾಮಪುರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.