ಸರ್ವ ರೋಗಕ್ಕೂ ಸಂಗೀವವೇ ಮದ್ದು ಅಂತಾರೇ. ಆದ್ರೀಗ ತಮ್ಮ ಸೊಗಸಾದ ಕಂಠದ ಮೂಲಕವೇ ಕರುನಾಡ ಮನಸ್ಸುಗಳನ್ನು ಗೆದ್ದಿದ್ದ ಸೋನು ನಿಗಮ್ ಎಂಬ ಗಾಯಕ ಮಾಡಿದ ಎಡವಟ್ಟಿಗೆ ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ. ತಪ್ಪನ್ನು ಒಪ್ಪಿಕೊಳ್ಳದೇ, ಕಡೆ ಪಕ್ಷ ಕ್ಷಮೆಯೂ ಕೇಳದೇ ತಾನು ಮಾಡಿದ್ದೇ ಸರಿ ಎನ್ನುವಂತೆ ವರ್ತಿಸುತ್ತಿರುವ ಈ ಗಾಯಕನ ವಿರುದ್ಧ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮ ಕೈಗೊಳ್ಳಲು ಮುಂದಾಗಿದೆ.
ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯಾಹ್ನ 1 ಗಂಟೆಗೆ ಸಭೆ ಕರೆದಿದ್ದು, ಈ ಸಭೆಯಲ್ಲಿ ಸೋನು ನಿಗಮ್ ಮೇಲೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕೆಂದು ಚರ್ಚೆ ನಡೆಸಲಾಗುತ್ತಿದೆ. ಅದಕ್ಕಾಗಿ ಕನ್ನಡದ ಸಂಗೀತ ನಿರ್ದೇಶಕರಿಗೂ ಆಹ್ವಾನ ಕೊಡಲಾಗಿದೆ. ಕನ್ನಡ ಚಿತ್ರರಂಗದಿಂದ ಸೋನು ನಿಗಮ್ ಬ್ಯಾನ್ ಮಾಡಬೇಕು ಎಂಬ ಕೂಗು ಜೋರಾಗಿದ್ದು, ಈ ಬಗ್ಗೆ ಫಿಲ್ಮಂ ಚೇಂಬರ್ ಹಾಗೂ ಸಂಗೀತ ನಿರ್ದೇಶಕರು ಈ ವಿಷಯದಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆ ಅನ್ನೋದನ್ನು ಕಾದುನೋಡಬೇಕಿದೆ.
ಏನಿದು ವಿವಾದ?
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡುವಂತೆ ಸೋನು ನಿಗಮ್ ಗೆ ಕೇಳಲಾಗಿತ್ತು. ಈ ವೇಳೆ ಕನ್ನಡ, ಕನ್ನಡ ಅಂದಿದ್ದಕ್ಕೆ ಪಹಲ್ಗಾಮ್ ದಾಳಿ ನಡೆದಿದ್ದು ಎಂದಿದ್ದರು. ಕನ್ನಡ ಹಾಡು ಹಾಡಿ ಅಂದಿದಕ್ಕೂ, ಪಹಲ್ಗಾಮ್ ದಾಳಿಗೂ ಏನ್ ಸಂಬಂಧ ಅನ್ನೋದು ದೊಡ್ಡ ಮಟ್ಟದ ಚರ್ಚೆಯಾಗಿತ್ತು. ಕನ್ನಡ ವಿರೋಧಿ ಗಾಯಕನನ್ನು ಬ್ಯಾನ್ ಮಾಡುವಂತೆ ಕರವೇ ಹೋರಾಟ ನಡೆಸಿತ್ತು.