ಹುಬ್ಬಳ್ಳಿ: ದೇಶದಲ್ಲಿ ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳ ದುಪ್ಪಟ್ಟು ದಾಸ್ತಾನಿದೆ. ಎಲ್ಲೂ ಕೂಡಾ ಕೊರತೆಯಿಲ್ಲ, ಜನಸಾಮಾನ್ಯರು, ವರ್ತಕರು ಯಾರೂ ಈ ಬಗ್ಗೆ ಚಿಂತಿತರಾಗಬೇಕಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದ್ದಾರೆ.
ಅಕ್ಕಿ, ಗೋಧಿ, ಸಕ್ಕರೆ, ಕಡಲೆ, ತೊಗರಿ, ಮಸೂರ್, ಹೆಸರುಕಾಳು, ಖಾದ್ಯ ತೈಲ ಹೀಗೆ ಪ್ರತಿಯೊಂದೂ ಕೂಡಾ ಸಾಕಷ್ಟು ದಾಸ್ತಾನಿದೆ. “ಆಹಾರ ಪದಾರ್ಥ ಕೊರತೆಯಿದೆ” ಎನ್ನುವುದು ಕೇವಲ ಸುಳ್ಳು ವದಂತಿ. ಇದಕ್ಕೆ ಯಾರೂ ಕಿವಿಗೊಡಬಾರದು, ಭಯಭೀತರಾಗಬಾರದು ಹಾಗೂ ವರ್ತಕರೂ ಹೆಚ್ಚು ಹೆಚ್ಚು ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳ ಸಂಗ್ರಹಣೆ, ದಾಸ್ತಾನು ಮಾಡಿಟ್ಟುಕೊಳ್ಳಬಾರದು ಎಂದು ಕರೆ ನೀಡಿದ್ದಾರೆ.
ಚಾಣಕ್ಯನ ಪ್ರಕಾರ ಈ ಕೆಲಸ ಮಾಡಿದ್ರೆ ಸಾಕು ಜೀವನದ ಪ್ರತಿ ಹೆಜ್ಜೆಯಲ್ಲೂ ಸಿಗುತ್ತೆ ಸಂತೋಷ-ಯಶಸ್ಸು..!
ದೇಶದಲ್ಲಿ ಎಲ್ಲಿಯೂ ಆಹಾರ ಧಾನ್ಯ, ಅಗತ್ಯ ವಸ್ತುಗಳ ಕೊರತೆ ಇರುವುದಿಲ್ಲ. ಅಗತ್ಯಕ್ಕಿಂತ ಹೆಚ್ಚು ಆಹಾರ ಧಾನ್ಯ ಖರೀದಿಗೆ ಮಾರುಕಟ್ಟೆಗಳಲ್ಲಿ ಮುಗಿಬೀಳುವ ಅವಶ್ಯಕತೆಯಿಲ್ಲ ಎಂದ ಸಚಿವರು, ವಿನಾಕಾರಣ ಯಾರಾದರೂ ಸುಳ್ಳು ವದಂತಿ ಹರಡಲು ಯತ್ನಿಸಿದರೆ ಹಾಗೂ ವರ್ತಕರು ಹೆಚ್ಚು ಹೆಚ್ಚು ಸಂಗ್ರಹ ಮಾಡಿಟ್ಟುಕೊಂಡರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳ ವ್ಯಾಪಾರದಲ್ಲಿ ತೊಡಗಿರುವ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು ಅಥವಾ ವ್ಯಾಪಾರ ಸಂಸ್ಥೆಗಳು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಹಕರಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ಸಹ ನೀಡಿದೆ ಎಂದಿದ್ದಾರೆ.
ದುಪ್ಪಟ್ಟು ಸಂಗ್ರಹವಿದೆ ವದಂತಿ ನಂಬಬೇಡಿ: ದೇಶದಲ್ಲಿ ಎಲ್ಲೆಡೆಯೂ ದುಪ್ಪಟ್ಟು ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳ ಸಂಗ್ರವಿದೆ. ಸಾಕಷ್ಟು ದಾಸ್ತಾನಿದೆ. ಹಾಗಿದ್ದರೂ “ಕೊರತೆಯಿದೆ ಎಂದು ಯಾರಾದರೂ ಅಪಪ್ರಚಾರ ಮಾಡಿದಲ್ಲಿ, ಸಂದೇಶಗಳನ್ನು ರವಾನಿಸಿದಲ್ಲಿ ಯಾರೂ ನಂಬಬಾರದು. ಅಗತ್ಯ ಮಾನದಂಡಗಳನ್ನು ಮೀರಿದ ಸಂದೇಶಗಳಿಗೆ ಗಮನ ಕೊಡಬೇಡಿ ಎಂದು ಸಚಿವ ಜೋಶಿ ಕರೆ ನೀಡಿದ್ದಾರೆ.
ಏನೇನು ಎಷ್ಟೆಷ್ಟು ದಾಸ್ತಾನಿದೆ: ದೇಶದಲ್ಲಿ ಪ್ರಸ್ತುತ ಅಕ್ಕಿ ದಾಸ್ತಾನು 356.42 ಲಕ್ಷ ಮೆಟ್ರಿಕ್ ಟನ್ಗಳಷ್ಟಿದೆ. 135 LMT ಬಫರ್ ಮಾನದಂಡಕ್ಕೆ ವಿರುದ್ಧವಾಗಿ ದುಪ್ಪಟ್ಟು ದಾಸ್ತಾನಿದೆ. ಅದೇ ರೀತಿ, ಗೋಧಿ ದಾಸ್ತಾನು ಸಹ ಹೆಚ್ಚಿದೆ. 276 LMT ಬಫರ್ ಮಾನದಂಡಕ್ಕೆ ವಿರುದ್ಧವಾಗಿ 383.32 LMT ಸಂಗ್ರವಿದ್ದು, ಇದು ಅಗತ್ಯ ಬಫರ್ ಮಾನದಂಡಗಳಿಗಿಂತ ಬಲವಾದ ಹೆಚ್ಚುವರಿಯನ್ನು ಪ್ರದರ್ಶಿಸುತ್ತಿದ್ದು, ರಾಷ್ಟ್ರವ್ಯಾಪಿ ಆಹಾರ ಭದ್ರತೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ.
ಇದಲ್ಲದೇ, ಭಾರತ ಸುಮಾರು 17 LMT ಖಾದ್ಯ ತೈಲ ದಾಸ್ತಾನು ಹೊಂದಿದೆ. ದೇಶೀಯವಾಗಿ ಗರಿಷ್ಠ ಉತ್ಪಾದನಾ ಋತುವಿನಲ್ಲಿ ಸಾಸಿವೆ ಎಣ್ಣೆಯ ಲಭ್ಯತೆ ಹೇರಳವಾಗಿದ್ದು, ಖಾದ್ಯ ತೈಲ ಪೂರೈಕೆಗೆ ಪೂರಕವಾಗಿದೆ. ಪ್ರಸ್ತುತ ಸಕ್ಕರೆ ಋತುವು 79 LMT ಕ್ಯಾರಿ-ಓವರ್ ಸ್ಟಾಕ್ನೊಂದಿಗೆ ಪ್ರಾರಂಭವಾಗಿದ್ದು, 34 LMT ಎಥೆನಾಲ್ ಉತ್ಪಾದನೆಗೆ ಬಳಸಿದ ನಂತರವೂ 262 LMT ಉತ್ಪಾದನೆ ಅಂದಾಜಿಸಲಾಗಿದೆ ಎಂದು ಹೇಳಿದರು.
ಸುಮಾರು 257 LMT ಸಕ್ಕರೆಯನ್ನು ಈಗಾಗಲೇ ಉತ್ಪಾದಿಸಲಾಗಿದೆ. 280 LMT ದೇಶೀಯ ಬಳಕೆ ಮತ್ತು 10 LMT ರಫ್ತನ್ನು ಪರಿಗಣಿಸಿ, ಅಂತಿಮ ಸ್ಟಾಕ್ ಸುಮಾರು 50 LMT ನಿರೀಕ್ಷೆಯಿದೆ. ಇದು ಎರಡು ತಿಂಗಳ ಬಳಕೆಗಿಂತ ಹೆಚ್ಚು ಸಂಗ್ರಹವನ್ನು ತೋರ್ಪಡಿಸುತ್ತದೆ. ಅನುಕೂಲಕರ ಹವಾಮಾನ ಪರಿಸ್ಥಿತಿಗಳಿಂದಾಗಿ 2025–26ರ ಸಕ್ಕರೆ ಋತುವಿನ ಉತ್ಪಾದನಾ ನಿರೀಕ್ಷೆಯೂ ಆಶಾದಾಯಕವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಅಂಕಿ-ಸಂಖ್ಯೆ ಸಹಿತ ವಿವರಿಸಿದ್ದಾರೆ.
ಇ-ಮಾರುಕಟ್ಟೆಯಲ್ಲಿ ಕಾನೂನು ಬಾಹಿರ ವಾಕಿ-ಟಾಕಿ ವಿರುದ್ಧ ಕ್ರಮ: ರಾಷ್ಟ್ರೀಯ ಭದ್ರತೆ ಹಿನ್ನೆಲೆಯಲ್ಲಿ ಇ-ಕಾಮರ್ಸ್ ವೇದಿಕೆಗಳಲ್ಲಿ ಕಡಿಮೆ ಶಕ್ತಿ, ಅತಿ ಕಡಿಮೆ ಫ್ರಿಕ್ವೆನ್ಸಿ ಉಳ್ಳ ವಾಕಿ-ಟಾಕಿ ಸಾಧನ ಮಾರಾಟ ಮಾಡದಂತೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(CCPA) ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ ಎಂದೂ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಇ-ಕಾಮರ್ಸ್ ವೇದಿಕೆಗಳಲ್ಲಿ ಪ್ರದರ್ಶಿಸುತ್ತಿರುವ ಕೆಲ ವೈರ್ಲೆಸ್ ಸಾಧನಗಳಿಂದ ರಾಷ್ಟ್ರೀಯ ಭದ್ರತಾ ಕಾರ್ಯಾಚರಣೆಗಳಿಗೆ ಅಪಾಯ ಎದುರಾಗಬಹುದಾದ ಸಾಧ್ಯತೆ ಇರುವುದರಿಂದ ಪ್ರಮುಖ ತಾಂತ್ರಿಕತೆ ಅಂಶಗಳನ್ನು ಹೊಂದಿರದ ಸಾಧನಗಳ ಪಟ್ಟಿ ಹಾಕುವಂತಿಲ್ಲ ಮತ್ತು ಮಾರಾಟ ಸಹ ಮಾಡುವಂತಿಲ್ಲ ಎಂದು ಸಚಿವರು ಎಚ್ಚರಿಸಿದ್ದಾರೆ.
ಇ-ಕಾಮರ್ಸ್ ವೇದಿಕೆಗಳಲ್ಲಿ ಮಾರಾಟವಾಗುತ್ತಿರುವ ವಾಕಿ-ಟಾಕಿಯಂತಹ ವೈರ್ಲೆಸ್ ಸಾಧನಗಳಲ್ಲಿ ಕೆಲ ಸಮಸ್ಯೆಗಳನ್ನು ಗುರುತಿಸಲಾಗಿದೆ. ಹೀಗಾಗಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ 2019ರ ಗ್ರಾಹಕ ರಕ್ಷಣಾ ಕಾಯ್ದೆ ಸೆಕ್ಷನ್ 18(2)(l) ಅಡಿಯಲ್ಲಿ ನಿರ್ದಿಷ್ಟ ಮಾರ್ಗಸೂಚಿ ಹೊರಡಿಸಿದೆ. ಕಾನೂನು ಅನುಸರಣೆ, ಗ್ರಾಹಕರ ರಕ್ಷಣೆ ಮತ್ತು ಡಿಜಿಟಲ್ ಮಾರುಕಟ್ಟೆಯಲ್ಲಿ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಗುರಿಯೊಂದಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಕಾನೂನು ಅನುಸರಣೆಯಿಲ್ಲದ ವೈರ್ಲೆಸ್ ಸಾಧನಗಳ ಮಾರಾಟ ರಾಷ್ಟ್ರೀಯ ಭದ್ರತಾ ಕಾರ್ಯಾಚರಣೆಗಳಿಗೆ ಗಮನಾರ್ಹ ಅಪಾಯ ಉಂಟುಮಾಡುವ ಜನತೆಗೆ ಶಾಸನ ಬದ್ಧ ನಿಯಮ ಉಲ್ಲಂಘನೆಯಾಗುತ್ತದೆ. ಹಾಗಾಗಿ ಗ್ರಾಹಕರ ಹಕ್ಕುಗಳನ್ನು ಎತ್ತಿ ಹಿಡಿಯಲು ಮತ್ತು ಕಾನೂನು ಬಾಹಿರ ವ್ಯಾಪಾರ ಪದ್ಧತಿಗಳನ್ನು ತಡೆಯಲು ಎಲ್ಲಾ ಮಾರಾಟಗಾರರು ನಿಯಂತ್ರಕ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಇ-ಕಾಮರ್ಸ್ ವೇದಿಕೆಗಳಲ್ಲಿ ಮಾರಾಟ ಮಾಡುತ್ತಿರುವ ಯಾವುದೇ ವೈರ್ಲೆಸ್ ಸಾಧನಗಳು ಕಾರ್ಯಾಚರಣಾ ಆವರ್ತನಗಳ ಸರಿಯಾದ ಬಹಿರಂಗಪಡಿಸುವಿಕೆ, ಪರವಾನಗಿ ಮಾಹಿತಿ, ಸಲಕರಣೆ ಪ್ರಕಾರದ ಅನುಮೋದನೆ (ETA)ಯಂತಹ ನಿರ್ಣಾಯಕ ಮಾಹಿತಿಯಿಂದ ಕೂಡಿರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಗ್ರಾಹಕ ರಕ್ಷಣಾ ಕಾಯ್ದೆ 2019, ಭಾರತೀಯ ಟೆಲಿಗ್ರಾಫ್ ಕಾಯ್ದೆ 1885, ವೈರ್ಲೆಸ್ ಟೆಲಿಗ್ರಾಫಿ ಕಾಯ್ದೆ 1933 ಮತ್ತು ಕಡಿಮೆ ಶಕ್ತಿ, ಅತಿ ಕಡಿಮೆ ಶಕ್ತಿ ಶಾರ್ಟ್ ರೇಂಜ್ ರೇಡಿಯೋ ಫ್ರೀಕ್ವೆನ್ಸಿ ಸಾಧನಗಳ ಬಳಕೆ (ಪರವಾನಗಿ ವಿನಾಯಿತಿ) ನಿಯಮ 2018 ಸೇರಿದಂತೆ ಬಹು ಕಾನೂನುಗಳ ಉಲ್ಲಂಘನೆ ಕಂಡುಬಂದ ಮಾರಾಟಗಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.