ಬೆಂಗಳೂರಿನ ಸಂಗೀತ ಕಾರ್ಯಕ್ರಮವೊಂದರದಲ್ಲಿ ಕನ್ನಡ ಹಾಡು ಹಾಡುವಂತೆ ಕೇಳಿದ್ದಕ್ಕೆ ವಿವದಾತ್ಮಕ ಹೇಳಿಕೆ ಕೊಟ್ಟು ಕನ್ನಡಿಗರ ಕೆಂಗಣ್ಣಿಗೆ ಗುರಿಯಾದವರು ಬಾಲಿವುಡ್ ಗಾಯಕ ಸೋನು ನಿಗಮ್. ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಆಕ್ಷೇಪಾರ್ಹ ಪದ ಬಳಸಿದ್ದ ಗಾಯಕನ ವಿರುದ್ಧ ಬೆಂಗಳೂರಿನಲ್ಲಿ ಎಫ್ ಐಆರ್ ದಾಖಲು ಮಾಡಲಾಗಿತ್ತು. ಈ ಕೇಸ್ ರದ್ದು ಮಾಡುವಂತೆ ಸೋನು ನಿಗಮ್ ಹೈಕೋರ್ಟ್ ಮೊರೆ ಹೋಗಿದ್ದರು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ಮೇ 15ಕ್ಕೆ ಮುಂದೂಡಿದೆ.
ರಾಜ್ಯ ಹೈಕೋರ್ಟ್ ಏಕಸದಸ್ಯ ಪೀಠದ ನಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರು ಅರ್ಜಿ ವಿಚಾರಣೆ ನಡೆಸಿದರು. ಕಚೇರಿ ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಅರ್ಜಿದಾರರ ವಕೀಲರ ವಾದವನ್ನು ಒಪ್ಪಲಾಗುವುದಿಲ್ಲ ಎಂದು ಮೇ 15ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದ್ದಾರೆ.
ಮೇ ಮೊದಲವಾರ ಬೆಂಗಳೂರಿನ ಅವಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಅವಲಹಳ್ಳಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೋನು ನಿಗಮ್ಗೆ ನೋಟಿಸ್ ಜಾರಿಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಸೋನು ನ್ಯಾಯಾಲಯದ ಮೊರೆ ಹೋಗಿ ಎಫ್ಐಆರ್ ರದ್ದಿಗೆ ಕೋರಿದ್ದರು.
ಚಿತ್ರರಂಗದಿಂದ ಬ್ಯಾನ್!
ಕನ್ನಡ, ಕನ್ನಡ ಎನ್ನುತ್ತಾ ಕನ್ನಡಿಗರನ್ನು ಕೆರಳಿಸಿದ್ದ ಗಾಯಕನನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬ್ಯಾನ್ ಮಾಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕ್ಷಮೆ ಕೇಳುವವರೆಗೂ ತಾತ್ಕಾಲಿಕವಾಗಿ ಬ್ಯಾನ್ ಮಾಡಿತ್ತು.