ಹುಬ್ಬಳ್ಳಿ: ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ ಎಂದಿದ್ದ ಸಿಎಂ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಪೋಸ್ಟ್ ಹಾಕಿದ್ದ ಹಿಂದೂ ಕಾರ್ಯಕರ್ತನ ಮೇಲೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಕುರಿತು ಹಿಂದೂ ಕಾರ್ಯಕರ್ತ ಶಿವಾನಂದ ಸತ್ತಿಗೇರಿ ಆಕ್ರೋಶ ವ್ಯಕ್ತಪಡಿಸಿದ್ದು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ನಡೆ ಸರಿಯಿಲ್ಲ. ರಾಜ್ಯದಲ್ಲಿರುವ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ಗಳ ಸುರಿಸುತ್ತಿದ್ದಾರೆ. ಈ ಮೂಲಕ ಹಿಂದೂ ಕಾರ್ಯಕರ್ತರನ್ನು ಬೆದರಿಸುವ ತಂತ್ರ ನಡೆಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯನವರ ಪ್ರಚೋದನಕಾರಿ ಹೇಳಿಕೆ ವಿರುದ್ಧ ಪೋಸ್ಟ್ ಮಾಡಿದ್ದೆ. ಡಿಲೀಟ್ ಆದ ಒಂದು ತಿಂಗಳ ನಂತರ ಇದೀಗ ಪ್ರಕರಣ ದಾಖಲಾಗಿದೆ. ಈ ರೀತಿ ಪ್ರಕರಣ ದಾಖಲು ಮಾಡಿರುವುದು ಸರಿಯಲ್ಲ. ಈ ಬಗ್ಗೆ ನಾನು ಕಾನೂನು ಹೋರಾಟ ನಡೆಸುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾನೆ.
ಕಳೆದ ಏ.28 ರಂದು ಬಜರಂಗದಳ ಕಾರ್ಯಕರ್ತ ಶಿವಾನಂದ ಸತ್ತಿಗೇರಿ ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ ಎಂಬ ಸಿಎಂ ಸಿದ್ಧರಾಮಯ್ಯ ಹೇಳಿಕೆ ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಪೋಸ್ಟ್ನಲ್ಲಿ ಸಿಎಂ ಅವರಿಗೆ ಗೋಡ್ಸೆ ಬೇಕಾಗಿದ್ದಾರೆ ಎಂದು ಉಲ್ಲೇಖಿಸಿದ್ದರು. ಬಳಿಕ ಪೊಲೀಸರು ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿಸಿದ್ದರು