ವಿಜಯಪುರ:- ಮನಗೂಳಿ ಯಲ್ಲಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ್ಯಾಂತರ ಮೌಲ್ಯದ ಚಿನ್ನ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಖದೀಮರ ಪತ್ತೆಗೆ ಪೊಲೀಸ್ ಇಲಾಖೆ ಎಂಟು ವಿಶೇಷ ತಂಡಗಳು ರಚಿಸಿದೆ. ಬ್ಯಾಂಕ್ನಲ್ಲಿದ್ದ 58 ಕೆಜಿ 975 ಗ್ರಾಂ ಚಿನ್ನಾಭರಣ ಮತ್ತು 5.20 ಲಕ್ಷ ನಗದು ಕಳ್ಳತನವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದರು.
ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ವಿಶ್ವಮಟ್ಟದ ಕನ್ನಡದ ರಾಯಭಾರಿಗಳು: ಡಿಸಿಎಂ ಡಿ.ಕೆ.ಶಿವಕುಮಾರ್!
ಕಳೆದ ತಿಂಗಳು ಮೇ 25 ರಂದು ವಿಜಯಪುರ ಜಿಲ್ಲೆ ಬಸನವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ರಾಷ್ಟ್ರೀಕೃತ ಕೆನರಾ ಬ್ಯಾಂಕ್ನಲ್ಲಿ ಕಳ್ಳತನವಾಗಿತ್ತು. ಬ್ಯಾಂಕ್ನಲ್ಲಿ ಕಳ್ಳತನವಾದ ಸುದ್ದಿ ತಿಳಿದು ಮನಗೂಳಿ ಪೊಲೀಸರು ಹಾಗೂ ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ರಾಮನಗೌಡ ಹಟ್ಟಿ ಹಾಗೂ ಇತರೆ ಸಿಬ್ಬಂದಿ, ಶ್ವಾನದಳ ಮತ್ತು ಬೆರಳಚ್ಚು ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.
ನಂತರ ಬ್ಯಾಂಕ್ ಹಿರಿಯ ಆಧಿಕಾರಿಗಳು ಸ್ಥಳಕ್ಕೆ ತೆರಳಿ ಕಳ್ಳತನವಾದ ನಗದು ಚಿನ್ನಾಭರಣಗಳ ಅಂಕಿ ಅಂಶಗಳ ಲೆಕ್ಕ ಹಾಕಿದರು. ಬ್ಯಾಂಕ್ನಲ್ಲಿ ಅಡವಿಟ್ಟ ಹಾಗೂ ಸುರಕ್ಷಣೆಗೆ ಇಟ್ಟಿದ್ದ 58 ಕೆಜಿ 975.94 ಗ್ರಾಂ ಚಿನ್ನಾಭರಣಗಳು ಹಾಗೂ 5.20 ಲಕ್ಷ ನಗದು ಕಳ್ಳತನವಾಗಿರುವುದು ಗೊತ್ತಾಗಿದೆ. ಚಿನ್ನದ ಅಂದಾಜು ಮೌಲ್ಯ 53 ಕೋಟಿ 26ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಳ್ಳರ ಪತ್ತೆಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.
ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ನೀಡಿರುವ ಮಾಹಿತಿ ಪ್ರಕಾರ, “6 ರಿಂದ 8 ಜನ ಕದೀಮರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಲಾಕರ್ ಓಪನ್ ತೆರೆಯಲು ಮತ್ತು ಸೈರನ್ ಬಂದ್ ಮಾಡಲು ನಕಲಿ ಕೀ ಬಳಕೆ ಮಾಡಿದ್ದಾರೆ. ಬ್ಯಾಂಕ್ ಆವರಣದಲ್ಲಿದ್ದ ಸಿಸಿ ಕೆಮೆರಾಗಳನ್ನು ತಿರುಗಿಸಿದ್ದು ಹಾಗೂ ಸಿಸಿ ಕೆಮೆರಾ ಹಾರ್ಡ್ ಡಿಸ್ಕ್ ಸಮೇತ ಪರಾರಿಯಾಗಿದ್ದಾರೆ . ಸತತ ಎರಡು ದಿನಗಳ ಕಾಲ ಸಂಚು ರೂಪಿಸಿ, ಪ್ಲ್ಯಾನ್ ಮಾಡಿ ಕೃತ್ಯವೆಸಲಾಗಿದೆ. ಕದೀಮರ ಪತ್ತೆಗೆ 8 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದ್ದು ತನಿಖೆ ಮುಂದುವರೆದಿದೆ” ಎಂದು ತಿಳಿಸಿದ್ದಾರೆ.