ಹುಬ್ಬಳ್ಳಿ: ಗುಜರಾತ್ ನ ರಾಜಧಾನಿ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್ಸಿಬಿ ಜಯಗಳಿಸಿದ ಹಿನ್ನೆಲೆಯಲ್ಲಿ, ನಗರದ ಚನ್ನಮ್ಮ ವೃತ್ತ ಸೇರಿದಂತೆ ವಿವಿಧ ಕಡೆಗಳಲ್ಲಿ ಅಭಿಮಾನಿಗಳು ಬೆಳಗಿನ ಜಾವದವರೆಗೂ ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು.
ಚೊಚ್ಚಲ ಕಪ್ ಗೆದ್ದ ಆರ್ ಸಿಬಿ: ಮುಗಿಲು ಮುಟ್ಟಿದ ಗೆಲುವಿನ ಸಂಭ್ರಮ.. ಹುಚ್ಚೆದ್ದು ಕುಣಿದ ಫ್ಯಾನ್ಸ್!
ಕೊನೆಯ ಮೂರು ಓವರುಗಳು ಬಾಕಿಯಿದ್ದಾಗಲೇ ಗೆಲುವು ಖಚಿತವೆಂದು, ಮನೆಯಿಂದ ಹೊರಗೆ ಬಂದು ಚನ್ನಮ್ಮ ವೃತ್ತದ ಬಳಿ ಸೇರಲು ಆರಂಭಿಸಿದರು. ಕೆಲವರು ಮೊಬೈಲ್ನಲ್ಲಿಯೇ ಪಂದ್ಯಾವಳಿಯ ನೇರಪ್ರಸಾರ ವೀಕ್ಷಿಸುತ್ತ, ಆರ್ಸಿಬಿ, ಆರ್ಸಿಬಿ ಎಂದು ಘೋಷಣೆ ಕೂಗುತ್ತ ನಗರವನ್ನೆಲ್ಲ ಸಂಚರಿಸಿದರು. ಕೆಲವರು ಬಡಾವಣೆಯಲ್ಲಿ ಗುಂಪುಗೂಡಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ ಮೂಡಿತು.
ಐಪಿಎಲ್ ಅಂತಿಮ ಪಂದ್ಯಕ್ಕೆ ಆರ್ಸಿಬಿ ಅರ್ಹತೆ ಪಡೆದ ದಿನದಿಂದಲೇ, ನಗರದಲ್ಲಿ ಆರ್ಸಿಬಿ ಜೆರ್ಸಿಗೆ ಬೇಡಿಕೆ ಹೆಚ್ಚಾಗಿತ್ತು. ಮಾಲ್ಗಳ ಬಟ್ಟೆ ಮಳಿಗೆಗಳಲ್ಲಿ ಹಾಗೂ ಕ್ರೀಡಾ ಸಾಮಗ್ರಿಗಳ ಅಂಗಡಿಗಳಲ್ಲಿ ಜೆರ್ಸಿ ಗಳು ಭರ್ಜರಿಯಾಗಿ ಮಾರಾಟವಾದವು. ಯುವಕರು, ಮಕ್ಕಳು ಹಾಗೂ ಆರ್ಸಿಬಿ ಅಭಿಮಾನಿಗಳು ಜರ್ಸಿ ಧರಿಸಿ ಸಂಭ್ರಮಿಸಿದರು.
ಇನ್ನೊಂದು ಕಡೆ ಇಡೀ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಹಿಡಿದು ಜನತಾ ಬಜಾರ್, ಕೊಪ್ಪೀಕರ್ ರಸ್ತೆ, ಹುಬ್ಬಳ್ಳಿ ವಿಜಯಪುರ ರಸ್ತೆ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಜನರ ಸಂಭ್ರಾಚರಣೆಗೆ ಪಾರವೇ ಇರಲಿಲ್ಲ. ಈ ನಡುವೆ ಆರ್ ಸಿಬಿ ಅಭಿಮಾನಿಗಳು ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ ಆರ್ ಸಿಬಿ ಗೆದ್ದ ಕಪ್ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಕೆಲವು ಸಂಘಟನೆಗಳ ಪದಾಧಿಕಾರಿಗಳು, ಆರ್ಸಿಬಿ ಗೆಲುವಿಗೆ ಸಿದ್ದಾರೂಢಮಠ, ಶಿರಡಿ ಸಾಯಿ ಬಾಬಾ ಗುಡಿ ಹಾಗೂ ಇತರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬ್ಯಾಟ್, ಬಾಲ್ ಇಟ್ಟು ಪ್ರಾರ್ಥಿಸಿದರು. ಪಂದ್ಯ ವೀಕ್ಷಣೆಗೆ ಕೆಲವು ಬಾರ್ ಹಾಗೂ ಹೋಟೆಲ್ಗಳಲ್ಲಿ ಎಲ್ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು