ಬೆಂಗಳೂರು:- 2025ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 17 ವರ್ಷಗಳ ನಂತರ ಮೊಟ್ಟಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಟೂರ್ನಿ ಶುರುವಾಗಿ 17 ವರ್ಷಗಳಾದರೂ ಒಮ್ಮೆಯಾದರೂ ಕಪ್ ಗೆದ್ದಿಲ್ಲ ಎಂಬ ಆರ್ ಸಿಬಿಯ ಕೋಟ್ಯಂತರ ಜನರ ಕೊರಗನ್ನು ಅದು ನೀಗಿಸಿತ್ತು.
ಚಿನ್ನಸ್ವಾಮಿ ಕಾಲ್ತುಳಿತ ದುರಂತ: ಮೃತಪಟ್ಟ 11 ಮಂದಿಯ ವಿವರ ಇಲ್ಲಿದೆ !
ಇದರಿಂದ ಪುಳಕಿತರಾಗಿದ್ದ ಆರ್ ಸಿಬಿ ಅಭಿಮಾನಿಗಳಿಗೆ ಬಂದ ಸುದ್ದಿಯೇನೆಂದರೆ, ಜೂ. 4ರಂದು ಬೆಂಗಳೂರಿಗೆ ಹಿಂದಿರುಗಲಿರುವ ಆರ್ ಸಿಬಿ ತಂಡಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂಬುದು. ಕ್ರೀಡಾಂಗಣಕ್ಕೆ ಪ್ರವೇಶವೂ ಉಚಿತವಾಗಿದ್ದರಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನಿರೀಕ್ಷೆಗೂ ಮೀರಿ ಅಭಿಮಾನಿಗಳು ನುಗ್ಗಿದ್ದರು. ಅಲ್ಲಿ ಉಂಟಾದ ಕಾಲ್ತುಳಿತದಿಂದಾಗಿ 11 ಮಂದಿ ಆರ್ ಸಿಬಿ ಅಭಿಮಾನಿಗಳು ಸಾವಿಗೀಡಾಗಿದ್ದರು.
ಆರ್ಸಿಬಿ ಗೆಲುವಿನ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ ವಿಜಯೋತ್ಸವ ಹಾಗೂ ತಂಡದ ಆಟಗಾರರಿಗೆ ವಿಶೇಷ ಅಭಿನಂದನಾ ಸಮಾರಂಭ ಹಮ್ಮಿಕೊಂಡಿತ್ತು. ಈ ಸುದ್ದಿ ಹಬ್ಬಿದ ಬೆನ್ನಲ್ಲೇ ಬೆಳಗ್ಗೆಯಿಂದಲೇ ಲಕ್ಷಾಂತರ ಅಭಿಮಾನಿಗಳು ಕ್ರೀಡಾಂಗಣದ ಬಳಿ ಜಮಾಯಿಸಿದರು. ಗಂಟೆಗಟ್ಟಲೇ ಕಾದರೂ ಅಭಿಮಾನಿಗಳಿಗೆ ಕ್ರೀಡಾಂಗಣ ಪ್ರವೇಶಿಸಲು ಅವಕಾಶ ನೀಡಿರಲಿಲ್ಲ. ನಂತರ ಉಚಿತ ಟಿಕೆಟ್ ವಿತರಣೆ ವದಂತಿ ಹಬ್ಬಿತ್ತು. ಹಲವು ಗೊಂದಲಗಳಿಂದಾಗಿ ಕಾಲ್ತುಳಿತ ಸಂಭವಿಸಿದೆ.
ಆರ್ಸಿಬಿ ತಂಡದ ಸಂಭ್ರಮಾಚರಣೆ ಮಧ್ಯೆ ಸಂಜೆ 5.30ರ ಸುಮಾರಿಗೆ ಸುರಿದ ಮಳೆಯಿಂದ ಪರಿಸ್ಥಿತಿ ನಿಯಂತ್ರಣದಲ್ಲಿರಲಿಲ್ಲ. ಕಳಪೆ ನಿರ್ವಹಣೆ ಮತ್ತು ವಿಜಯೋತ್ಸವ ಮೆರವಣಿಗೆಗೆ ಅನುಮತಿ ನೀಡುವಲ್ಲಿನ ವಿಳಂಬವು ದುರಂತಕ್ಕೆ ಕಾರಣವಾಯಿತು. ಗಾಯಗೊಂಡವರನ್ನು ಆಂಬ್ಯುಲೆನ್ಸ್ನಲ್ಲಿ ಸಾಗಿಸಲಾಯಿತು. ಪೊಲೀಸರು ಜನರನ್ನು ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಬೇಕಾಯಿತು.
ಮುಖ್ಯ ದ್ವಾರದ ಮೂಲಕ ಒಳಬರುವವರನ್ನು ನೋಡಲು ಅನುಕೂಲವಾಗುವ ಗೇಟ್ ನಂ. 7, ದುರಂತಕ್ಕೆ ತಿರುಗಿತು. ಉಚಿತ ಟಿಕೆಟ್ ಸಿಗುತ್ತದೆ ಎಂಬ ವದಂತಿ ಹಬ್ಬಿದ್ದೇ ಇದಕ್ಕೆ ಕಾರಣವಾಗಿದೆ.