18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂತಿಮವಾಗಿ ತನ್ನ ಚೊಚ್ಚಲ ಪ್ರಶಸ್ತಿಯನ್ನು ಎತ್ತಿಹಿಡಿದಿದೆ. 2025 ರ ಟಿ-20 ಲೀಗ್ನ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಸೋಲಿಸಿ ಚಾಂಪಿಯನ್ ಆಗಿದೆ. ಐಪಿಎಲ್ನ ಅತ್ಯಂತ ಜನಪ್ರಿಯ ಫ್ರಾಂಚೈಸಿಯಾಗಿರುವ ಆರ್ಸಿಬಿ ಚಾಂಪಿಯನ್ ಆದ ಬಳಿಕ ಅನೇಕ ಚರ್ಚೆಗಳು ಆರಂಭವಾಗಿವೆ. 18 ವರ್ಷಗಳ ಈ ಅವಧಿಯಲ್ಲಿ ಹಲವು ಆಟಗಾರರು ಬಂದು ಹೋಗಿದ್ದಾರೆ. ಆದ್ರೆ, ವಿರಾಟ್ ಕೊಹ್ಲಿ ಮಾತ್ರ 18 ವರ್ಷಗಳಿಂದ ತಂಡದ ಭಾಗವಾಗಿದ್ದಾರೆ.
ಮೈಸೂರು ರಸ್ತೆಯಲ್ಲಿ ಬಿಎಂಟಿಸಿ ಬಸ್ ಅಪಘಾತ: 10 ಕ್ಕೂ ಹೆಚ್ಚು ಮಂದಿಗೆ ಗಾಯ!
ಈ ನಡುವೆ ತಂಡ ಚಾಂಪಿಯನ್ ಆಗಿರುವ ಕುರಿತು ತಂಡದ ಮಾಜಿ ಮಾಲೀಕ ವಿಜಯ ಮಲ್ಯ ಅವರು ಮಾತನಾಡಿದ್ದಾರೆ.
ಐಪಿಎಲ್ ಆರಂಭವಾದ ಬಳಿಕ ಆರ್ಸಿಬಿ ಫ್ರಾಂಚೈಸಿ ಖರೀದಿಸಿದ ಬಗ್ಗೆ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ ಪಾಡ್ಕಾಸ್ಟ್ನಲ್ಲಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ನಾನು ಮುಂಬೈ ಇಂಡಿಯನ್ಸ್ ಸೇರಿದಂತೆ ಒಟ್ಟು ಮೂರು ಫ್ರಾಂಚೈಸಿಗಳಿಗೆ ಬಿಡ್ ಮಾಡಿದ್ದೆ. ಮುಂಬೈ ತಂಡವನ್ನು ಮುಖೇಶ್ ಅಂಬಾನಿ ಖರೀದಿಸಿದರು. ಮುಂಬೈನಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಸೋತ ನಂತರ ಅಂತಿಮವಾಗಿ ಆರ್ಸಿಬಿಯನ್ನು 112 ಮಿಲಿಯನ್ ಯುಎಸ್ ಡಾಲರ್ಗೆ (ಇದು 2008 ರಲ್ಲಿ 600-700 ಕೋಟಿ ರೂ. ಮೌಲ್ಯ) ಖರೀದಿಸಿದೆ ಎಂದು ಮಲ್ಯ ತಿಳಿಸಿದ್ದಾರೆ.
ಈ ಲೀಗ್ ಬಗ್ಗೆ ಲಲಿತ್ ಮೋದಿ ಹೇಳಿದಾಗ ನಾನು ತುಂಬಾ ಪ್ರಭಾವಿತನಾಗಿದ್ದೆ. ಅವರು ಒಂದು ದಿನ ನನಗೆ ಕರೆ ಮಾಡಿ, ತಂಡಗಳನ್ನು ಹರಾಜು ಮಾಡಲಾಗುವುದು ಎಂದು ಹೇಳಿದರು. ನೀವು ಯಾವುದನ್ನು ಖರೀದಿಸುತ್ತೀರಾ? ಎಂದರು. ಹಾಗಾಗಿ, ನಾನು ಮೂರು ಫ್ರಾಂಚೈಸಿಗಳಿಂದ ಬಿಡ್ ಮಾಡಿದೆ. ಮುಂಬೈಯನ್ನು ಬಹಳ ಕಡಿಮೆ ಮೊತ್ತದಿಂದ ಕಳೆದುಕೊಂಡೆ ಎಂದು ಹೇಳಿಕೊಂಡಿದ್ದಾರೆ.
2008 ರಲ್ಲಿ ನಾನು ಆರ್ಸಿಬಿ ಫ್ರಾಂಚೈಸಿಯನ್ನು ಬಿಡ್ ಮಾಡಿದಾಗ, ಐಪಿಎಲ್ ಅನ್ನು ಭಾರತೀಯ ಕ್ರಿಕೆಟ್ಗೆ ಒಂದು ದಿಕ್ಕನ್ನೇ ಬದಲಾಯಿಸುವ ತಂಡವೆಂದು ನಾನು ನೋಡಿದೆ. ಬೆಂಗಳೂರಿನ ಉತ್ಸಾಹಭರಿತ, ಕ್ರಿಯಾತ್ಮಕ, ಆಕರ್ಷಕ ಮನೋಭಾವವನ್ನು ಸಾಕಾರಗೊಳಿಸುವ ತಂಡವನ್ನು ರಚಿಸುವುದು ನನ್ನ ಗುರಿಯಾಗಿತ್ತು. ಆರ್ಸಿಬಿ ಮೈದಾನದಲ್ಲಿ ಮಾತ್ರವಲ್ಲ, ಹೊರಗೂ ಶ್ರೇಷ್ಠತೆಯನ್ನು ಪ್ರತಿನಿಧಿಸುವ ಬ್ರ್ಯಾಂಡ್ ಆಗಬೇಕೆಂದು ನಾನು ಬಯಸಿದ್ದೆ. ಅದಕ್ಕಾಗಿಯೇ ನಾನು ನಮ್ಮ ಮದ್ಯದ ಬ್ರಾಂಡ್ಗಳಲ್ಲಿ ಒಂದಾದ ರಾಯಲ್ ಚಾಲೆಂಜ್ ಹೆಸರನ್ನೇ ಫ್ರಾಂಚೈಸಿಗೆ ಇಟ್ಟೆ ಎಂದು ಆರ್ಸಿಬಿ ಹೆಸರು ಹೇಗೆ ಬಂತು ಎಂಬುದನ್ನು ಮಲ್ಯ ವಿವರಿಸಿದ್ದಾರೆ.
ಹರಾಜಿನಲ್ಲಿ ವಿರಾಟ್ ಕೊಹ್ಲಿಯನ್ನು ಖರೀದಿಸಿದ್ದನ್ನು ಕೂಡ ಮಲ್ಯ ನೆನಪಿಸಿಕೊಂಡಿದ್ದಾರೆ. ಕೊಹ್ಲಿಯನ್ನು ಅವರ ರಾಜ್ಯ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್ (ಆಗ ಡೆಲ್ಲಿ ಡೇರ್ಡೆವಿಲ್ಸ್) ಆಯ್ಕೆ ಮಾಡಿಕೊಳ್ಳುವ ನಿರೀಕ್ಷೆಯಿತ್ತು. ಆದರೆ, ಫ್ರಾಂಚೈಸಿ ಪ್ರದೀಪ್ ಸಾಂಗ್ವಾನ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿತು. ಇದರಿಂದಾಗಿ ಆರ್ಸಿಬಿಗೆ ಹದಿಹರೆಯದ ಪ್ರತಿಭೆಯನ್ನು ಸೇರಿಸಿಕೊಳ್ಳಲು ಸಾಧ್ಯವಾಯಿತು. ನಾನು ಆರ್ಸಿಬಿಯನ್ನು ಒಂದು ಶಕ್ತಿಶಾಲಿ ತಂಡವನ್ನಾಗಿ ಮಾಡಬಲ್ಲ ಆಟಗಾರರನ್ನು ಆಯ್ಕೆ ಮಾಡಿದೆ. ಅಂಡರ್-19 ವಿಶ್ವಕಪ್ ತಂಡದ ಯುವ ಆಟಗಾರ ವಿರಾಟ್ ಕೊಹ್ಲಿಯನ್ನು ಗುರುತಿಸಿದ್ದು ದೊಡ್ಡ ಹೆಮ್ಮೆ. ಕೊಹ್ಲಿ ವಿಶೇಷ ಎಂದು ನನ್ನ ಮನಸ್ಸು ಆಗಲೇ ಹೇಳಿತ್ತು. ನಾನು ಅವರನ್ನು ಆಯ್ಕೆ ಮಾಡಿದೆ. ರಾಹುಲ್ ದ್ರಾವಿಡ್ ಅವರನ್ನು ನಮ್ಮ ಐಕಾನ್ ಆಟಗಾರನನ್ನಾಗಿ ಪಡೆಯುವುದು ಯಾವುದೇ ತೊಂದರೆಯಾಗಲಿಲ್ಲ. ಅವರು ಬೆಂಗಳೂರಿನ ಹೆಮ್ಮೆ. ನಾವು ಜಾಕ್ವೆಸ್ ಕಾಲಿಸ್, ಅನಿಲ್ ಕುಂಬ್ಳೆ ಮತ್ತು ಜಹೀರ್ ಖಾನ್ರಂತಹ ಜಾಗತಿಕ ತಾರೆಗಳನ್ನು ಸಹ ಕರೆತಂದೆವು. ನನಗೆ ಸ್ಥಳೀಯ ನಾಯಕರು ಮತ್ತು ಅಂತರರಾಷ್ಟ್ರೀಯ ಪ್ರತಿಭೆಯ ಮಿಶ್ರಣ ಬೇಕಿತ್ತು. ಐಪಿಎಲ್ ಟ್ರೋಫಿಯನ್ನು ಬೆಂಗಳೂರಿಗೆ ತರುವುದು ನನ್ನ ಕನಸಾಗಿತ್ತು. ಆ ಗುರಿಯೊಂದಿಗೆ ನಾನು ತಂಡವನ್ನು ನಿರ್ಮಿಸಿದೆ ಎಂದು ತಿಳಿಸಿದ್ದಾರೆ.