ಬೆಂಗಳೂರು, ಜೂ.09: ಜಿ.ಕೆ.ವಿ.ಕೆಯ ಆಡಳಿತ ವ್ಯವಸ್ಥೆ ಹಾಗೂ ಘನತೆಗೆ ಕುಂದು ಉಂಟಾಗದಂತೆ ಮಂಡ್ಯದ ವಿ.ಸ್.ಫಾರ್ಮ್ ನಲ್ಲಿ ನೂತನ ಪ್ರಾರಂಭಗೊಂಡಿರುವ ಕೃಷಿ ವಿ.ವಿ.ಗೆ ಅಗತ್ಯವಿರುವ ಸಿಬ್ಬಂದಿ ಹಾಗೂ ಇತರ ಸೌಕರ್ಯಗಳ ವರ್ಗಾವಣೆ ಮಾಡುವಂತೆ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿಯವರು ನಿರ್ದೇಶನ ನೀಡಿದ್ದಾರೆ..
ಬೆಂಗಳೂರಿನ ಮಹಾತ್ಮ ಗಾಂಧಿ ಕೃಷಿ ವಿಶ್ವವಿದ್ಯಾಲಯದಿಂದ ಬೇರ್ಪಟ್ಟಿರುವ ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಆಡಳಿತ ಚಟುವಟಿಕೆಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸುವ ಕುರಿತು ಸಭೆ ನಡೆಸಿದ ಸಚಿವರು ಹಲವು ಸಲಹೆ ಸೂಚನೆಗಳನ್ನು ನೀಡದರು..
ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಇರುವ ಜಿ.ಕೆ.ವಿ.ಕೆ ಮತ್ತು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಬೇರ್ಪಡಿಸಲಾಗಿರುವ ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಕಾಲೇಜುಗಳು/ಸಂಶೋಧನಾ ಕೇಂದ್ರಗಳ ಕಟ್ಟಡ ಹಾಗೂ ಬೋಧಕ/ಬೋದಕೇತರ ಸಿಬ್ಬಂದಿಯೊಂದಿಗೆ ಮಂಡ್ಯ ಕೃಷಿ ವಿ.ವಿ.ಗೆ ನಿಯಮಾನುಸಾರ ವರ್ಗಾಯಿಸುವಂತೆ ಸಚಿವರು ತಿಳಿಸಿದರು..
ಮಂಡ್ಯ ಕೃಷಿ ವಿ.ವಿ, ಕನಸಿನ ಕೂಸಾಗಿದ್ದು ಇದ್ದನ್ನು ಸಹ ಇತರ ಕೃಷಿ ವಿಶ್ವವಿದ್ಯಾಲಯಗಳಷ್ಟೆ ಮೌಲ್ಯಯುತವಾಗಿ, ಆಡಳಿತಾತ್ಮಕವಾಗಿ, ಶೈಕ್ಷಣಿಕವಾಗಿ ಬಾಲವರ್ಧನೆಗೊಳಿಸಲು ಎರಡು ವಿಶ್ವವಿದ್ಯಾಲಯದ ಅಧಿಕಾರಿಗಳು ಶ್ರಮಿಸಬೇಕಿದೆ ಎಂದು ಕರೆ ನೀಡಿದರು..
ಜಿ.ಕೆ.ವಿ.ಕೆ ಅತ್ಯಂತ ಹಳೆಯ ಕೃಷಿ ವಿಶ್ವವಿದ್ಯಾಲಯವಾಗಿದ್ದು ವ್ಯವಸ್ಥಿತವಾಗಿ ಪ್ರಗತಿ ಕಂಡಿದೆ. ಅಲ್ಲದೇ ರಾಷ್ಟ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿದೆ. ಅದರ ಮೌಲ್ಯ, ಬೆಳವಣಿಗೆ ಹಾಗೂ ಮಹತ್ವಕ್ಕೆ ಒಂದಿಷ್ಟು ದಕ್ಕೆಯಾಗದಂತೆ ಆಡಳಿತಾತ್ಮಕ ವಿಭಜನೆ ಕೈಗೊಳ್ಳುವಂತೆ ಅವರು ಸೂಚಿಸಿದರು..
ಹೊಸದಾಗಿ ಸೃಜನೆಯಾಗಬೇಕಾಗಿರುವ ಹುದ್ದೆಗಳನ್ನ ಪಟ್ಟಿ ಮಾಡಿ ಹಣಕಾಸು ಇಲಾಖೆಗೆ ಅನುಮೋದನೆಗೆ ಕಳುಹಿಸಿಕೊಡುವಂತೆ ಸೂಚಿಸಿದ ಸಚಿವ ಎನ್.ಚಲುವರಾಯಸ್ವಾಮಿಯವರು, ಒಟ್ಟಾರೆ ರಾಜ್ಯದ ಕೃಷಿ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಣೆಗೆ ಮೊದಲ ಆದ್ಯತೆ ನೀಡುವಂತೆ ಹೇಳಿದರು..
ಮಂಡ್ಯ ಕೃಷಿ ವಿ.ವಿ ಸದೃಡ ಆಗುವವರೆಗೆ, ವಿದ್ಯಾರ್ಥಿಗಳ ನೋಂದಣಿ ಪರೀಕ್ಷೆ ಸಿದ್ದತೆ, ಫಲಿತಾಂಶ ಮತ್ತಿತರ ವಿಚಾರಗಳ ಬಗ್ಗೆ ನಿರಂತರವಾಗಿ ಅಗತ್ಯ ಸಹಕಾರ ಮತ್ತು ಮಾರ್ಗದರ್ಶನ ನೀಡುವಂತೆ ಜಿ.ಕೆ.ವಿ.ಕೆ ಅಧಿಕಾರಿಗಳಿಗೆ ಸೂಚಿಸಿದ್ದರು..
ಜಿ.ಕೆ.ವಿ.ಕೆ ಉಪ ಕುಲಪತಿ ಡಾ. ಸುರೇಶ್ ,ಶಿವಮೊಗ್ಗ ಕೃಷಿ ವಿ.ವಿ. ಉಪ ಕುಲಪತಿ ಡಾ ಜಗದೀಶ್ ,ಕೃಷಿ ಆಯುಕ್ತರಾದ ವೈ.ಎಸ್. ಪಾಟೀಲ್, ಕೃಷಿ ನಿರ್ದೇಶಕರಾದ ಡಾ. ಜಿ.ಟಿ. ಪುತ್ರ. ಅಪರ ಕೃಷಿ ನಿರ್ದೇಶಕರಾದ ವೆಂಕಟರಮಣರೆಡ್ಡಿ, ಮಂಡ್ಯ ಕೃಷಿ ವಿ.ವಿ. ವಿಶೇಷಾಧಿಕಾರಿ ಡಾ. ಹರಿಣಿಕುಮಾರ, ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಉಪಸ್ಥಿತರಿದ್ದರು.