ಗುಜರಾತ್ ರಾಜ್ಯದಲ್ಲಿ ಭೀಕರ ದುರಂತ ನಡೆದಿರುವುದು ತಿಳಿದುಬಂದಿದೆ. ಅಹಮದಾಬಾದ್ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ಬೋಯಿಂಗ್ ಎ-171 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 242 ಜನರಲ್ಲಿ 241 ಜನರು ಸಾವನ್ನಪ್ಪಿದ್ದಾರೆ. ಆದರೆ, ರಮೇಶ್ ವಿಶ್ವಾಸ್ ಕುಮಾರ್ ಬುಚರ್ವಾಡಾ ಎಂಬ ಒಬ್ಬ ವ್ಯಕ್ತಿ ಮಾತ್ರ ಅಪಘಾತದಿಂದ ಬದುಕುಳಿದಿದ್ದಾರೆ.
ಅವರು ಪ್ರಸ್ತುತ ಅಹಮದಾಬಾದ್ನ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಅಪಘಾತದ ವಿವರಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು.ಅಪಘಾತದಲ್ಲಿ ತಾವು ಬದುಕುಳಿದಿರುವುದಕ್ಕೆ ವಿಶ್ವಾಸ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ನಾನು ಇನ್ನೂ ದಿಗ್ಭ್ರಮೆಯಲ್ಲಿದ್ದೇನೆ. ವಿಮಾನ ನೆಲಕ್ಕಪ್ಪಳಿಸಿದಾಗ ನಾನು ವಿಮಾನದಲ್ಲೇ ಇದ್ದೆ. ಆದರೆ ಮುಂದೇನಾಯ್ತು ಎಂಬುದು ಸ್ಪಷ್ಟವಾಗಿ ನೆನಪಿಲ್ಲ. ಭಾರೀ ಸ್ಫೋಟ ಮತ್ತು ಹೊಗೆಯಲ್ಲಿ ಯಾರು ಎಲ್ಲಿದ್ದಾರೆ ಎಂಬುದೇ ಕಾಣುತ್ತಿರಲಿಲ್ಲ. ನಾನು ಬದುಕುಳಿದಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ” ಎಂದು ವಿಶ್ವಾಸ್ ಕುಮಾರ್ ಹೇಳಿದ್ದಾರೆ.
ವಿಮಾನ ನೆಲಕ್ಕಪ್ಪಳಿಸಿ ಸ್ಫೋಟಗೊಂಡಾಗ ನಾನು ನನ್ನ ಸೀಟಿನಲ್ಲಿ ಭದ್ರವಾಗಿ ಕುಳಿತಿದ್ದೆ. ಅದು ಕೆಳಕ್ಕೆ ಬೀಳುವ ರಭಸ ನೋಡಿ ನಾನು ಬದುಕುಳಿಯಲಾರೆ ಎಂಬ ಭಾವನೆ ನನ್ನನ್ನು ಆವರಿಸಿತ್ತು. ಆದರೆ ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳ ಬಳಿಕ ಕಣ್ಣು ತೆರೆದಾಗ ನಾನು ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದೆ. ಈ ಕ್ಷಣದವರೆಗೂ ನಾನು ಬದುಕಿದ್ದೇನೆ ಎಂಬುದನ್ನು ನನ್ನಿಂದ ನಂಬಲಾಗುತ್ತಿಲ್ಲ ಎಂದು ವಿಶ್ವಾಸ್ ಕುಮಾರ್ ಭಾವನಾತ್ಮಕವಾಗಿ ಹೇಳಿದ್ದಾರೆ.
ಅಪಘಾತದಲ್ಲಿ ರಮೇಶ್ ಅವರ ಎದೆ, ಕಣ್ಣು ಮತ್ತು ಕಾಲುಗಳಿಗೆ ತೀವ್ರ ಗಾಯಗಳಾಗಿದ್ದವು. ಇದಕ್ಕೂ ಮೊದಲು, ವಿಮಾನ ಅಪಘಾತಕ್ಕೀಡಾಗಿ ಸುಟ್ಟುಹೋದಾಗ ಗಾಯಗೊಂಡ ರಮೇಶ್ ಆಂಬ್ಯುಲೆನ್ಸ್ ಕಡೆಗೆ ನಡೆದುಕೊಂಡು ಹೋಗುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.