ಬೆಂಗಳೂರು:- ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಆಯುಷ್ ಇಲಾಖೆಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಯೋಜನೆ ಮಾಡಲಾಗಿತ್ತು.
ʻಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗʼ ಎನ್ನುವ ಧ್ಯೇಯವಾಕ್ಯ ಸಾಕಾರಗೊಳಿಸುವ ನಿಟ್ಟಿನಲ್ಲಿ ಬೆಳಗ್ಗೆ 6 ಗಂಟೆಯಿಂದ ಶುರುವಾಗಿ 8:30ರ ವರೆಗೆ ಯೋಗ ಪ್ರದರ್ಶನ ನಡೆಯಿತು. ಹಿರಿಯ ರಾಜಕೀಯ ನಾಯಕರೂ ಸೇರಿ ವಿವಿಧ ಸಂಸ್ಥೆಯ ಯೋಗಪಟುಗಳು ಇದರಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಟ ಅನಿರುದ್ಧ್, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ನಟಿ ಸಾನ್ಯ ಅಯ್ಯರ್, ನಟ ಶೈನ್ ಶೆಟ್ಟಿ ಭಾಗಿಯಾಗಿ ವಿವಿಧ ಆಸನಗಳನ್ನ ಪ್ರದರ್ಶಿಸಿದರು.
ಎಲ್ಲರು ನಿತ್ಯ ಯೋಗಾಭ್ಯಾಸ ಮಾಡಿ:
ಬಳಿಕ ಯೋಗ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ವಿಶ್ವದ ಬಹುತೇಕ ದೇಶಗಳಲ್ಲಿ ಯೋಗ ದಿನವನ್ನ ಆಚರಣೆ ಮಾಡಲಾಗುತ್ತಿದೆ. ಕರ್ನಾಟಕ ಸರ್ಕಾರದ ಯೋಗ ದಿನ ಉತ್ತಮವಾಗಿ ಆಚರಣೆ ಮಾಡಿದೆ. ಸರ್ಕಾರಕ್ಕೆ ಧನ್ಯವಾದ ಹೇಳ್ತೀನಿ. ಯೋಗ ಜೀವನವನ್ನ ಪರಿಪೂರ್ಣ ಮಾಡುತ್ತದೆ. ʻಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗʼ ಅನ್ನೋ ಘೋಷ ವಾಕ್ಯ ಉತ್ತಮವಾಗಿದೆ ಎಂದರಲ್ಲದೇ ಯೋಗ ಮಾಡಿ ನಿರೋಗಿ ಆಗಿ ಎಂದು ಸಲಹೆ ನೀಡಿದರು.
ಯೋಗದಿಂದ ಶಾಂತಿ ಸಿಗಲಿದೆ. ನಾನು ಚಿಕ್ಕವನಿಂದ ಯೋಗಾಭ್ಯಾಸ ಮಾಡುತ್ತಿದ್ದೇನೆ. ಈಗಲೂ ನಿತ್ಯ ಯೋಗ ಮಾಡ್ತೀನಿ. ಜನರಿಗೆ ಮನವಿ ಮಾಡ್ತೀನಿ. ಎಲ್ಲರು ನಿತ್ಯ ಯೋಗಾಭ್ಯಾಸ ಮಾಡಿ. ಯೋಗ ಜೀವನದ ಭಾಗವಾಗಿ ಸ್ವೀಕಾರ ಮಾಡೋಣ. ಎಲ್ಲರೂ ಯೋಗಾಭ್ಯಾಸ ಮಾಡೋಣ ಎಂದು ಸಂಕಲ್ಪ ಮಾಡುವಂತೆ ಕರೆ ಕೊಟ್ಟರು.