ಬೆಂಗಳೂರು: ಜೂನ್ 21: ಹೆಚ್.ಎ.ಎಲ್ 2ನೇ ಹಂತದ 12ನೇ ಮುಖ್ಯ ರಸ್ತೆ ಹಾಗೂ ಅಡ್ಡರಸ್ತೆಯಲ್ಲಿ ತ್ವರಿತವಾಗಿ ಹೊಸ ಚರಂಡಿಯನ್ನು ನಿರ್ಮಿಸುವಂತೆ ಜಲಮಂಡಳಿಯ ಅಧಿಕಾರಿಗಳಿಗೆ ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ರವರು ಸೂಚನೆ ನೀಡಿದರು.
ಪೂರ್ವ ವಲಯ ಆಯುಕ್ತರ ಕಛೇರಿಯಲ್ಲಿ ನಡೆದ ಸಾರ್ವಜನಿಕರ ಕುಂದುಕೊರತೆಯ ಅಹವಾಲಿನ ಕಾರ್ಯಕ್ರಮದಲ್ಲಿ ಇಂದು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ವೇಳೆ, ಸಾರ್ವಜನಿಕರೊಬ್ಬರು ಮಾತನಾಡಿ ಹೆಚ್.ಎ.ಎಲ್ 2ನೇ ಹಂತದ 12ನೇ ಮುಖ್ಯ ರಸ್ತೆ ಹಾಗೂ ಅಡ್ಡ ರಸ್ತೆಯಲ್ಲಿ ಚರಂಡಿಯನ್ನು ಸುಮಾರು 50 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಸುಸ್ಥಿತಿಯಲ್ಲಿಲ್ಲದೆ ನೀರು ರಸ್ತೆಯ ಮೇಲೆ ಬರುತ್ತಿದ್ದು ಹಾಗೂ ಚರಂಡಿಯು ಕಟ್ಟಿಕೊಂಡಿದ್ದು ಸ್ಥಳೀಯರಿಗೆ ತೊಂದರೆಯಾಗುತ್ತಿರುವುದರ ಕುರಿತು ಅಹವಾಲು ಸಲ್ಲಿಸಿದರು.
ಅಹವಾಲಿಗೆ ಪ್ರತಿಕ್ರಿಯಿಸಿದ ವಲಯ ಆಯುಕ್ತರು ಹೆಚ್.ಎ.ಎಲ್ 2ನೇ ಹಂತದ 12ನೇ ಮುಖ್ಯ ರಸ್ತೆ ಹಾಗೂ ಅಡ್ಡರಸ್ತೆಯಲ್ಲಿ ಹೊಸ ಚರಂಡಿ ನಿರ್ಮಿಸಲು ಜಲಮಂಡಳಿಯ ಅಧಿಕಾರಿಗಳಿಗೆ ಸೂಚಿಸಿ, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ರೂ.1 ಲಕ್ಷದ ದಂಡ ವಿಧಿಸುವುದಾಗಿ ತಿಳಿಸಿದರು.
ಘನತ್ಯಾಜ್ಯ ಸಮರ್ಪಕ ನಿರ್ವಹಣೆಗೆ ಸೂಚನೆ:
OMBR ಲೇಔಟ್ ನಲ್ಲಿ ಘನತ್ಯಾಜ್ಯ ನಿರ್ವಹಣೆ ಸೂಕ್ತವಾಗಿ ನಡೆಯದ ಕುರಿತು ಹಾಗೂ ಅನಧಿಕೃತ ಕಟ್ಟಡಗಳ ನಿರ್ಮಾಣದ ಕುರಿತು ನಾಗರಿಕರು ನೀಡಿದ ದೂರಿನ ವಿಷಯಕ್ಕೆ ಪ್ರತಿಕ್ರಿಯಿಸಿದ ವಲಯ ಆಯುಕ್ತರು ವಿಷಯ ಪರಿಶೀಲಿಸಿ ರಸ್ತೆಯ ಪಕ್ಕದಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಸ್ವಚ್ಛಗೊಳಿಸಲು ಹಾಗೂ ಅನಧಿಕೃತ ಕಟ್ಟಡ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಅನಧಿಕೃತ ಬೋರ್ವೆಲ್ ಹಾಗೂ ramp ತೆರವಿಗೆ ಸೂಚನೆ:
ಸಭೆಯಲ್ಲಿ ಹೆಚ್ ಆರ್.ಬಿ.ಆರ್ 1ನೇ ಬ್ಲಾಕ್ ನ ರಸ್ತೆ ಮಧ್ಯದಲ್ಲಿ ಬೋರ್ವೆಲ್ ಕೊರೆದಿರುವ ಹಾಗೂ ಸಾಯಿರಾಮ್ ಅಪಾರ್ಟ್ ಮೆಂಟ್ ನವರು ಅನಧಿಕೃತ ramp ನಿರ್ಮಿಸಿದ್ದು ಮಳೆ ನೀರಿನ ಸರಾಗ ಹರಿವಿಗೆ ತೊಂದರೆಯಾಗುತ್ತಿರುವ ಕುರಿತಾದ ಅಹವಾಲಿಗೆ ಪ್ರತಿಕ್ರಿಯಿಸಿದ ವಲಯ ಆಯುಕ್ತರು ಬೋರ್ವೆಲ್ ನ್ನು ತ್ವರಿತವಾಗಿ ಮುಚ್ಚಿ ramp ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಪಾಯ ಹಂತದಲ್ಲಿರುವ ಒಣ ಮರಗಳ ತೆರವಿಗೆ ಸೂಚನೆ:
KSFC ಲೇ ಔಟ್ ನಲ್ಲಿನ ಒಣ ಮರಗಳು ಅಪಾಯ ಹಂತದಲ್ಲಿದ್ದು ಹಾಗೂ ರಸ್ತೆಗೆ ಬಂದಿರುವ ಕೊಂಬೆಗಳನ್ನು ಕತ್ತರಿಸಲು ಸೂಚನೆ ನೀಡಿದರು. ಹಲವು ಪ್ರದೇಶದಲ್ಲಿ ಬ್ಲಾಕ್ ಸ್ಪಾಟ್ ಗಳ ಕುರಿತು ಸಮಸ್ಯೆಗಳಿದ್ದು ಸ್ವಚ್ಛಗೊಳಿಸಿ ಗ್ರೀನ್ ನೆಟ್ ಅಳವಡಿಸಲು ಸೂಚಿಸಿದರು. ಪೂರ್ವ ವಲಯ ವ್ಯಾಪ್ತಿಯಲ್ಲಿನ ಬ್ಲಾಕ್ ಆದ ಚರಂಡಿಗಳ ಹೂಳೆತ್ತಲು ಸೂಚನೆ ನೀಡಲಾಯಿತು.
ಪಾರ್ಕ್ ಗಳ ಸೂಕ್ತ ನಿರ್ವಹಣೆಗೆ ಸೂಚನೆ:
ಶಿವಾಜಿನಗರ ವಿಭಾಗದ ಕೋಲ್ಸ್ ಪಾರ್ಕ್ ನಿರ್ವಹಣೆ ಸೂಕ್ತವಾಗಿ ನಡೆಯದ ಕುರಿತಾದ ಅಹವಾಲಿಗೆ ಪ್ರತಿಕ್ರಿಯಿಸಿದ ವಲಯ ಆಯುಕ್ತರು ನಿರ್ವಹಣೆ ಕುರಿತಂತೆ ಸೂಕ್ತ ಕ್ರಮವಹಿಸಿ, ವಾಹನಗಳ ಪ್ರವೇಶಕ್ಕೆ ಆಸ್ಪದ ನೀಡದೆ ಮಕ್ಕಳ ಸುರಕ್ಷತೆ ಕುರಿತು ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೂರುಗಳಿಗೆ ಶೀಘ್ರ ಸ್ಪಂದಿಸಲು ಸೂಚನೆ:
ನಾಗರಿಕರ ಧ್ವನಿಗೆ ಸ್ಪಂದನೆ ಕಾರ್ಯಕ್ರಮದಲ್ಲಿ ನಾಗರೀಕರಿಂದ ಬರುವ ದೂರುಗಳಿಗೆ ಶೀಘ್ರ ಸ್ಪಂದನೆಗೆ ಸೂಚನೆ ನೀಡಲಾಯಿತು. ಪೂರ್ವ ವಲಯದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ನಾಗರೀಕರು ಆಗಮಿಸಿ ವಲಯ ಆಯುಕ್ತರಿಗೆ ಧನ್ಯವಾದಗಳನ್ನು ತಿಳಿಸಿದರು.
22 ದೂರುಗಳ ಸ್ವೀಕಾರ:
ಪೂರ್ವ ವಲಯ ವ್ಯಾಪ್ತಿಯಲ್ಲಿ ಇಂದು 22 ದೂರುಗಳನ್ನು ಸ್ವೀಕರಿಸಲಾಗಿದ್ದು, ಕಾಲಮಿತಿಯೊಳಗಾಗಿ ಬಗೆಹರಿಸಲು ಅಧಿಕಾರಿಗಳಿಗೆ ಪೂರ್ವ ವಲಯ ಆಯುಕ್ತರು ಸೂಚನೆ ನೀಡಿದರು.
ಸಾರ್ವಜನಿಕರಿಂದ ಸ್ವೀಕರಿಸಿದ ಪ್ರಮುಖ ಅಹವಾಲುಗಳು:
1. ಬೀದಿ ದೀಪಗಳ ಅಳವಡಿಕೆಯ ಅವಶ್ಯಕತೆಯ ಕುರಿತು ಮನವಿ ಸಲ್ಲಿಸಿದರು.
2. ರಸ್ತೆ ಬದಿ ಕಸ ಸುರಿಯುವುದನ್ನು ತಡೆಯಲು ಮಾರ್ಷಲ್ಗಳನ್ನು ನಿಯೋಜನೆ ಮಾಡಲು ಮನವಿ.
3. ಕೆ.ಎಸ್.ಎಫ್ ಸಿ ಲೇಔಟ್ಲ್ಲಿ ಹೆಚ್ಚಿನ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲು ಮನವಿ.
4. ಹಲಸೂರು ಸೋಮೇಶ್ವರ ದೇವಸ್ಥಾನದ ಉತ್ತರ ಭಾಗದಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ವ್ಯತಿರಿಕ್ತವಾಗಿ ಕಟ್ಟಡವನ್ನು ನಿರ್ಮಿಸಿದ್ದು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ವಿನಂತಿಸಿದರು.
5. ಪಾದಾಚಾರಿಯಲ್ಲಿನ ಅಡಚಣೆಗಳನ್ನು ತೆರವುಗೊಳಿಸುವಂತೆ ಮನವಿ
6. ಚರಂಡಿಗಳ ಬ್ಲಾಕ್ ಆಗಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಸೂಕ್ತ ಕ್ರಮಕ್ಕೆ ವಿನಂತಿಸಿದರು.
7. ಪಾದಾಚಾರಿಯನ್ನು ಬೀದಿಬದಿ ವ್ಯಾಪಾರಿಗಳು ಒತ್ತುವರಿ ಮಾಡಿದ್ದು ಇದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಕುರಿತು ಅಂಗಡಿಗಳ ತೆರವಿಗೆ ವಿನಂತಿಸಿದರು.
ಈ ವೇಳೆ ಜಂಟಿ ಆಯುಕ್ತರಾದ ಶ್ರೀಮತಿ ಸರೋಜ, ಉಪ ಆಯುಕ್ತರಾದ ಶ್ರೀ ರಾಜು, ಮುಖ್ಯ ಅಭಿಯಂತರರಾದ ಶ್ರೀಮತಿ ಸುಗುಣ, ಆರೋಗ್ಯಾಧಿಕಾರಿಯಾದ ಶ್ರಿಮತಿ ಭಾಗ್ಯ, ಕಾರ್ಯಪಾಲಕ ಅಭಿಯತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಡಿಜಿಎಂ, ಎಜಿಎಂ, ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಸಂಬಂಧಿಸಿದ ಅಧಿಕಾರಿಗಳು ಹಾಜರಿದ್ದರು.