ಹಾವೇರಿ:- ಶಿಗ್ಗಾಂವಿ ಗುತ್ತಿಗೆದಾರನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಕೊಲೆ ಆರೋಪಿಗಳ ಪೈಕಿ ಒಬ್ಬನಾದ ನಾಗರಾಜ್ ಸವದತ್ತಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ್ದರಿಂದ ಸಾವು-ನೋವು ಸಂಭವಿಸಿಲ್ಲ. ಇಷ್ಟೇ ಅಲ್ಲದೆ, ಸಂಬಂಧಿಕರು ಉಳಿದ ನಾಲ್ವರು ಆರೋಪಿಗಳ ಮೇಲೂ ಪ್ರತೀಕಾರ ತೀರಿಸಿಕೊಳ್ಳುವ ಶಪಥ ಮಾಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಶಿಗ್ಗಾಂವಿಯಲ್ಲಿ ಪೊಲೀಸ್ ಬಿಗಿಭದ್ರತೆ ಕಲ್ಪಿಸಲಾಗಿದೆ. 5 ಜನ ಸಿಪಿಐ, 7 ಪಿಎಸ್ಐ , 2 ಡಿ.ಆರ್. ವಾಹನ ಸೇರಿದಂತೆ 20 ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪೊಲೀಸರು ಮೂರು ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಸದ್ಯ, ಹತ್ಯೆಯಾದ ಶಿವಾನಂದ ಕುನ್ನೂರ ಪತ್ನಿ ನಾಗರತ್ನಾ ಪೊಲೀಸರಿಗೆ ದೂರು ನೀಡಿದ್ದು, ಇದರ ಆಧಾರದಲ್ಲಿ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.