ಪ್ರತಿಯೊಬ್ಬ ವ್ಯಕ್ತಿಯ ಹೃದಯದ ಬಡಿತದೊಂದಿಗೆ ರಕ್ತವು ಹೃದಯದಿಂದ ಅಪಧಮನಿಗಳ ಮುಖಾಂತರ ದೇಹದ ಎಲ್ಲಾ ಭಾಗಗಳಿಗೆ ತಲುಪುತ್ತದೆ ಹಾಗೂ ಅಭಿಧಮನಿಗಳಿಂದ ಹೃದಯಕ್ಕೆ ಬರುತ್ತದೆ. ರಕ್ತದ ಪರಿಚಲನೆಯಾಗುವಾಗ ರಕ್ತನಾಳಗಳ ಗೋಡೆಗಳ ಮೇಲೆ ಆಗುವ ಒತ್ತಡಕ್ಕೆ ರಕ್ತದೊತ್ತಡವೆನ್ನುತ್ತಾರೆ. ಸಾಮಾನ್ಯವಾಗಿ ರಕ್ತವು ನಿಗದಿತ ವೇಗದಲ್ಲಿ ಅಪಧಮನಿಗಳಿಗೆ ಪ್ರವಹಿಸುವುದು. ಕೆಲವೊಮ್ಮೆ, ಹಲವು ಕಾರಣಗಳಿಂದ ನಿಗದಿತ ವೇಗಕ್ಕಿಂತ ಹೆಚ್ಚು ಅಥವಾ ಕಡಿಮೆ ವೇಗದಲ್ಲಿ ರಕ್ತವು ಹೃದಯದಿಂದ ಅಪಧಮನಿಗಳಿಗೆ ಪ್ರವಹಿಸಿದಾಗ ರಕ್ತದೊತ್ತಡವು ಏರುಪೇರಾಗುತ್ತದೆ.
ಅಧಿಕ ರಕ್ತದೊತ್ತಡದ ಸಮಸ್ಯೆಯು ಒಂದು ದೀರ್ಘಾವಧಿಯ ಆರೋಗ್ಯ ಸಮಸ್ಯೆಯಾಗಿದ್ದು. ಇದು ನಾನಾ ಕಾಯಿಲೆಗಳಿಗೆ ಕಾರಣವಾಗುತ್ತದೆ. ನಮ್ಮ ದೇಶದಲ್ಲಿ ಸುಮಾರು 23 ಪ್ರತಿಶತದಷ್ಟು ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಅಧಿಕ ರಕ್ತದೊತ್ತಡದಿಂದ ನಮ್ಮ ನಾನಾ ಅಂಗಗಳ ಮೇಲೆ ಹಾನಿಯಾಗಲಾರಂಭಿಸುತ್ತದೆ. ಅವುಗಳಲ್ಲಿ ಕಣ್ಣು ಕೂಡಾ ಒಂದು. ಕಣ್ಣಿನ ಸಮಸ್ಯೆ ಎಷ್ಟು ಗಂಭೀರವಾಗುತ್ತೆ ಎಂದರೆ ದೃಷ್ಟಿಯನ್ನೇ ಕಳೆದುಕೊಳ್ಳುವಂತಹ ಸ್ಥಿತಿ ಉಂಟಾಗುತ್ತದೆ. ಅದಕ್ಕಾಗಿ ರಕ್ತದೊತ್ತಡವನ್ನು ಕಂಟ್ರೋಲ್ನಲ್ಲಿಟ್ಟುಕೊಂಡರೆ ರೆಟಿನಾ ಮತ್ತು ಆಪ್ಟಿಕ್ ನರಗಳ ಹಾನಿಯನ್ನು ರಕ್ಷಿಸಬಹುದು
ಓರ್ವ ವ್ಯಕ್ತಿಯಲ್ಲಿ ದೀರ್ಘಕಾಲದ ಅಥವಾ ನಿರಂತರ ಅಧಿಕ ರಕ್ತದೊತ್ತಡದ ಸಮಸ್ಯೆ ಮುಂದುವರಿದರೆ, ಅದು ರಕ್ತನಾಳಗಳ ಸಾಮರ್ಥ್ಯದ ಮೇಲೆ ಪ್ರಭಾವ ಬೀರುತ್ತದೆ. ರಕ್ತದೊತ್ತಡದಲ್ಲಿನ ಏರಿಳಿತಗಳು ಕಣ್ಣುಗಳ ಮೇಲೂ ಪರಿಣಾಮ ಬೀರುತ್ತದೆಯಾದರೂ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಇದು ಕಣ್ಣುಗಳ ನರಗಳನ್ನು ನಿರ್ಬಂಧಿಸಬಹುದು ಮತ್ತು ರೆಟಿನಾವನ್ನು ಹಾನಿಗೊಳಿಸಬಹುದು.
ಇದರಿಂದಾಗಿ ದೃಷ್ಟಿ ಮಸುಕಾಗುತ್ತದೆ ಮತ್ತು ಕಣ್ಣುಗಳಲ್ಲಿ ರಕ್ತಸ್ರಾವ ಅಥವಾ ಸಂಪೂರ್ಣ ದೃಷ್ಟಿ ಕಳೆದುಕೊಳ್ಳಗಬಹುದು. ಇದನ್ನು ಅಧಿಕ ರಕ್ತದೊತ್ತಡ ರೆಟಿನೋಪತಿ ಎಂದು ಕರೆಯಲಾಗುತ್ತದೆ.
ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಸಮಸ್ಯೆಗಳಿದ್ದರೆ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡುವುದು ಕಷ್ಟಕರವಾಗುತ್ತದೆ. ರಕ್ತದೊತ್ತಡದಲ್ಲಿ ದೀರ್ಘಕಾಲದವರೆಗೆ ಕಣ್ಣಿನ ಸಮಸ್ಯೆಗಳ ಸ್ಪಷ್ಟ ಲಕ್ಷಣಗಳು ಕಂಡುಬರದ ಕಾರಣ ಕಣ್ಣಿನ ಪರೀಕ್ಷೆಯಲ್ಲಿ ವಿಳಂಬವಾಗುತ್ತದೆ. ಅಧಿಕ ರಕ್ತದೊತ್ತಡ ರೆಟಿನೋಪತಿಯಿಂದಾಗಿ, ಕೆಲವು ಜನರ ದೃಷ್ಟಿ ಕ್ರಮೇಣ ಕ್ಷೀಣಿಸಲು ಪ್ರಾರಂಭಿಸುತ್ತದೆ. ಆದ್ದರಿಂದ ರಕ್ತದೊತ್ತಡವನ್ನು ಕಂಟ್ರೋಲ್ನಲ್ಲಿಟ್ಟುಕೊಳ್ಳುವುದು ಮುಖ್ಯ
ಮಧುಮೇಹದಿಂದ ಬಳಲುತ್ತಿರುವವರೂ ಕೂಡಾ ತಮ್ಮ ಕಣ್ಣಿನ ಬಗ್ಗೆ ಜಾಗರೂಕರಾಗಿಬೇಕು. ಕಣ್ಣಿನ ವಿವಿಧ ಭಾಗಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅನಿಯಂತ್ರಿತ ಮಧುಮೇಹವು ಕಣ್ಣಿನ ಪೊರೆ, ಕಣ್ಣುಗಳಲ್ಲಿ ರಕ್ತಸ್ರಾವ, ರೆಟಿನಾಗೆ ಹಾನಿ, ಕಣ್ಣಿನಲ್ಲಿ ಊತ, ಹಠಾತ್ ದೃಷ್ಟಿ ನಷ್ಟ, ಕಾರ್ನಿಯಾಕ್ಕೆ ಹಾನಿ ಮತ್ತು ಆಗಾಗ್ಗೆ ಸೋಂಕುಗಳಂತಹ ಸಮಸ್ಯೆಗಳನ್ನು ಹೊಂದಬಹುದು.
ಹಾಗಯೇ ಅಧಿಕ ರಕ್ತದೊತ್ತಡದಲ್ಲಿ, ಕಣ್ಣುಗಳನ್ನು ತಿರುಗಿಸುವ ಸೂಕ್ಷ್ಮ ನರಗಳು ಅಪಾಯದಲ್ಲಿರುತ್ತವೆ. ಈ ಕಾರಣದಿಂದಾಗಿ ಒಂದು ಕಣ್ಣು ಕ್ರಮೇಣ ವಕ್ರವಾಗುತ್ತದೆ, ಇದರಿಂದಾಗಿ ರೋಗಿಯು ದೃಷ್ಟಿ ನಷ್ಟ ಅಥವಾ ಡಿಪ್ಲೋಪಿಯಾದಿಂದ ಬಳಲಬಹುದು
ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದಾಗಿ ಕಣ್ಣುಗಳ ದೃಷ್ಟಿ ಕಳೆದುಕೊಂಡ ನಂತರ, ಕೆಲವೊಮ್ಮೆ ಚಿಕಿತ್ಸೆ ನೀಡಿದರೂ ಅದು ಸರಿಯಾಗುವುದಿಲ್ಲ. ಮೆದುಳಿಗೆ ಪಾರ್ಶ್ವವಾಯು ಬಂದಂತೆಯೇ, ರೆಟಿನಾ ಪಾರ್ಶ್ವವಾಯು ಕೂಡ ಅದೇ ರೀತಿಯಲ್ಲಿ ಸಂಭವಿಸುತ್ತದೆ. ಅಧಿಕ ರಕ್ತದೊತ್ತಡದಿಂದಾಗಿ ಕಣ್ಣುಗಳ ನರಗಳಲ್ಲಿ ರಕ್ತ ಪರಿಚಲನೆ ಸ್ವಲ್ಪ ಸಮಯದವರೆಗೆ ನಿರ್ಬಂಧಿಸಲ್ಪಡುತ್ತದೆ. ಕಣ್ಣಿನ ನರಗಳು, ರೆಟಿನಾ ಇತ್ಯಾದಿಗಳಲ್ಲಿನ ಈ ಸಮಸ್ಯೆಯು ಕಣ್ಣಿನ ರಕ್ತಸ್ರಾವಕ್ಕೆ ಕಾರಣವಾಗಬಹುದು.
ಮಧುಮೇಹ, ಅಧಿಕ ರಕ್ತದೊತ್ತಡ, ಹೈಪರ್ಲಿಪಿಡೆಮಿಯಾ, ಥೈರಾಯ್ಡ್ ಇತ್ಯಾದಿಗಳು ಕಣ್ಣುಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ಆದ್ದರಿಂದ ಅವುಗಳನ್ನು ನಿಯಂತ್ರಣದಲ್ಲಿಡಬೇಕು.
ನಿಯಮಿತ ಕಣ್ಣಿನ ತಪಾಸಣೆ ಮಾಡಬೇಕು.
ಕಣ್ಣುಗಳಲ್ಲಿ ಯಾವುದೇ ಬದಲಾವಣೆ ಅಥವಾ ಮಸುಕನ್ನು ನೀವು ಗಮನಿಸಿದರೆ ವೈದ್ಯರನ್ನು ಸಂಪರ್ಕಿಸಿ.
ಮಧುಮೇಹದಿಂದ ಬಳಲುತ್ತಿರುವ ಜನರು ವರ್ಷಕ್ಕೊಮ್ಮೆ ಕಣ್ಣಿನ ಪೊರೆ ತಪಾಸಣೆ ಮಾಡಿಸಿಕೊಳ್ಳಬೇಕು. ಯಾವುದೇ ಔಷಧಿ ಮತ್ತು ಕಣ್ಣಿನ ಡ್ರಾಪ್ಸ್ನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಬಳಸಿ.
ಕಣ್ಣುಗಳನ್ನು ಸ್ವಚ್ಛವಾಗಿಡಲು ಸ್ವಚ್ಛವಾದ ಬಟ್ಟೆಗಳನ್ನು ಬಳಸಬೇಕು