ತುಮಕೂರು:- ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ವಿವಾದ ಇದೀಗ ಮತ್ತಷ್ಟು ತೀವ್ರಸ್ವರೂಪ ಪಡೆದುಕೊಳ್ಳುತ್ತಿದೆ. ಹೇಮಾವತಿ ನೀರಿಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಕುಣಿಗಲ್ ಶಾಸಕ ಡಾ.ರಂಗನಾಥ್ ಹೇಳಿಕೆ ಕೊಟ್ಟಿದ್ದಾರೆ.
ಈ ಸಂಬಂಧ ಕುಣಿಗಲ್ ತಾಲೂಕಿನ ಎಲೆಯೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ತಾಲೂಕಿನ ರೈತರಿಗಾಗಿ ತಗ್ಗಿ ಬಗ್ಗಿ ನಡೆಯಲಿಕ್ಕೆ ಸಿದ್ದನಿದ್ದೇನೆ. ನೀವು ಪೈಪ್ ಲೈನ್ ಕಾಮಗಾರಿಗೆ ಅಡ್ಡಿ ಪಡಿಸಲಿಕ್ಕೆ ನಿಂತರೆ, ಕುಣಿಗಲ್ ತಾಲೂಕಿನ ನಾವು ಗಂಡು ಮಕ್ಕಳು ಕಚ್ಚೆ ಕಟ್ಟಿ ಹೋರಾಟ ಮಾಡೋಕೆ ತಯಾರಿದ್ದೇವೆ. ಮುಂದಿನ ದಿನಗಳಲ್ಲಿ ಬೀದಿಗೆ ಇಳಿಯುತ್ತೇವೆ ಎಂದರು.
ನಮ್ಮ ತಾಲೂಕಿನ ನೀರಿಗಾಗಿ ಹೋರಾಟ ಮಾಡ್ತೀವಿ. ನಾನು ಸಹ ಕುಣಿಗಲ್ ತಾಲೂಕಿನ ಮಗನಾಗಿ ಆತ್ಮಹತ್ಯೆ ಮಾಡಿಕೊಳ್ಳೊಕೆ ಹಿಂದೆ ಮುಂದೆ ನೋಡಲ್ಲ. ನನ್ನ ತಾಲೂಕಿನ ರೈತರಿಗೊಸ್ಕರ ನನ್ನ ದೇಹ ತ್ಯಾಗಕ್ಕೂ ಸಿದ್ದನಿದ್ದೇನೆ. ನಮ್ಮೂರು ಎಲೆಯೂರಿನಲ್ಲಿ ಈ ಮಾತು ಹೇಳ್ತಾ ಇದ್ದೇನೆ. ನಾನು ಬಹಳ ತಾಳ್ಮೆಯಿಂದ ನೋಡ್ತಾ ಇದ್ದೇನೆ ಎಂದು ವೇದಿಕೆ ಮೇಲೆ ಶಾಸಕ ಡಾ.ರಂಗನಾಥ್ ಭಾವುಕ ಮಾತುಗಳನ್ನಾಡಿದ್ದಾರೆ.