ಹುಬ್ಬಳ್ಳಿ: ಬಡವರು ಹಾಗೂ ವಿವಿಧ ವೃತ್ತಿಯಲ್ಲಿರುವವರಿಗೆಸ್ವಉದ್ಯೋಗ ಕೈಗೊಳ್ಳಲು ಪ್ರೋತ್ಸಾಹಿಸುವ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ವಿವಿಧ ಕೌಶಲ ತರಬೇತಿ ಪಡೆದ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಜಿಲ್ಲೆಯ ವಿವಿಧ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪಿಎಂ ವಿಶ್ವಕರ್ಮ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ವಿಶ್ವಕರ್ಮ ಯೋಜನೆಯಡಿ ತರಬೇತಿ ಪಡೆದ ಫಲಾನುಭವಿಗಳು ವಿವಿಧ ಚಟುವಟಿಕೆ ನಡೆಸಲು ಬ್ಯಾಂಕ್ಗಳು ಆರ್ಥಿಕ ನೆರವು ನೀಡಲು ಶಿಫಾರಸ್ಸು ಆದ ಎಲ್ಲ ಅರ್ಜಿಗಳನ್ನು ಆದ್ಯತೆ ಮೇಲೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಹಣ್ಣಿಗೆ ಹೃದಯಾಘಾತ ತಡೆಯೋ ಶಕ್ತಿ ಇದೆ.. ವಾರದಲ್ಲಿ ಒಮ್ಮೆಯಾದರೂ ತಪ್ಪದೇ ಸೇವಿಸಿ!
ಫಲಾನುಭವಿಗಳು ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ ಬ್ಯಾಂಕ್ ಅಧಿಕಾರಿಗಳು ಅವರೊಂದಿಗೆ ಕಟುವಾಗಿ ವರ್ತಿಸಬಾರದು. ಸಾಲಕ್ಕಾಗಿ ಅವರನ್ನು ಸತಾಯಿಸಬಾರದು. ವಿನಾ ಕಾರಣ ಅರ್ಜಿ ತಿರಸ್ಕರಿಸಬಾರದು. ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಕನ್ನಡದಲ್ಲೇ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕು. ಸಂಬಂಧಿತ ಅಧಿಕಾರಿಗೆ ಕನ್ನಡ ಬಾರದಿದ್ದರೆ, ಕನ್ನಡ ಬಲ್ಲ ಸಿಬ್ಬಂದಿಯ ನೆರವು ಪಡೆಯಬೇಕು ಎಂದು ತಿಳಿಸಿದರು.
ಜಿಲ್ಲೆಯ ಕೆಲವು ಬ್ಯಾಂಕ್ಗಳು ಪಿಎಂ ವಿಶ್ವಕರ್ಮ ಯೋಜನೆಯಡಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡುವ ವೇಳೆ ದುಬಾರಿ ಸ್ಟಾಂಪ್ ಶುಲ್ಕ ಪಡೆಯುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ, ಯೋಜನೆಗೆ ನಿಗದಿತ ಮೌಲ್ಯಕ್ಕಿಂತ ಕೆಲ ಬ್ಯಾಂಕ್ಗಳು ಹೆಚ್ಚಿಗೆ ಪಡೆಯುತ್ತಿರುವ ಬಗ್ಗೆ ಅನೇಕರು ಲಿಖಿತವಾಗಿ ದೂರು ನೀಡಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.
ಪಿಎಂ ವಿಶ್ವಕರ್ಮ ಯೋಜನೆ ಭಾರತ ಸರ್ಕಾರದ ಒಂದು ಕೇಂದ್ರ ವಲಯ ಯೋಜನೆಯಾಗಿದ್ದು- ಕೈಯಿಂದ ಮತ್ತು ಉಪಕರಣಗಳನ್ನು ಬಳಸಿ ಕೆಲಸ ಮಾಡುವ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲ ಕಲಾವಿದರಿಗೆ ಸರ್ವಾಂಗೀಣ ಬೆಂಬಲವನ್ನು ಒದಗಿಸಲು 2023ರ ಸೆಪ್ಟೆಂಬರ್ 17ರಂದು (ವಿಶ್ವಕರ್ಮ ಜಯಂತಿಯಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಚಾಲನೆಗೊಂಡಿತು. ಈ ಯೋಜನೆಯು ಭಾರತದ ಸಾಂಪ್ರದಾಯಿಕ ಕರಕುಶಲತೆಯನ್ನು ಸಂರಕ್ಷಿಸುವುದರ ಜೊತೆಗೆ ಕುಶಲಕರ್ಮಿಗಳಿಗೆ ಆರ್ಥಿಕ ಸ್ವಾವಲಂಬನೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಡಿಐಸಿ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್, ಡಿಐಸಿ ಸಹಾಯ ನಿರ್ದೇಶಕ ಶಿವಾನಂದ ಕಮ್ಮಾರ, ಜಿಲ್ಲಾ ವ್ಯವಸ್ಥಾಪಕರು ಸಾಮಾನ್ಯ ಸೇವಾ ಕೇಂದ್ರ ಹಾಗೂ ರಾಷ್ಟ್ರೀಯ ಸ್ಟೀರಿಂಗ್ ಸಮಿತಿಯಿಂದ ನಾಮ ನಿರ್ದೇಶಿತ ಗೊಂಡ ಸದಸ್ಯರಾದ ಬಸವರಾಜ ಕುಂದಗೋಳಮಠ, ಸಂತೋಷ ಚವ್ಹಾಣ ಮತ್ತು ಶಿವು ಬೆಲಾರಡ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.