ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಾಪ್ಟರ್-1 ಚಿತ್ರೀಕರಣಕ್ಕೆ ಮತ್ತೆ ಸಂಕಷ್ಟ ಎದುರಾಗಿದ್ದು, ಹೊಸನಗರ ತಹಸಿಲ್ದಾರ್ ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ಮಾಣಿ ಜಲಾಶಯದಲ್ಲಿ ಅನುಮತಿ ಪಡೆಯದೆ ಚಿತ್ರೀಕರಣ ನಡೆಸಿದ ಆರೋಪದ ಮೇಲೆ 3 ದಿನಗಳಲ್ಲಿ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.
ಶಿವಮೊಗ್ಗದ ಹೊಸನಗರ ತಾಲ್ಲೂಕಿನ ಮಾಣಿ ಜಲಾಶಯದ ಹಿನ್ನೀರಿನಲ್ಲಿ ನಡೆಸಲಾದ ಕಾಂತಾರ: ದಿ ಲೆಜೆಂಡ್ – ಭಾಗ 1 ಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಹೊಸನಗರ ತಹಸಿಲ್ದಾರ್ ರಶ್ಮಿ ಅವರು ಚಿತ್ರತಂಡಕ್ಕೆ ಅಧಿಕೃತ ನೋಟಿಸ್ ಜಾರಿ ಮಾಡಿದ್ದಾರೆ. ದಿನಾಂಕ ಜೂನ್ 15ರಂದು ನಡೆದ ದೋಣಿ ಮುಗುಚಿ 30 ಜನರು ನೀರಿಗೆ ಬಿದ್ದಿರುವ ಘಟನೆ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಿ, 3 ದಿನಗಳ ಒಳಗೆ ನೋಟಿಸ್ಗೆ ಉತ್ತರ ನೀಡುವಂತೆ ತಾಕೀತು ಮಾಡಲಾಗಿದೆ
ಕಾಂತಾರ ಚಿತ್ರತಂಡವು ಸಿನಿಮಾ ಚಿತ್ರೀಕರಣಕ್ಕಾಗಿ ವಿವಿಧ ಇಲಾಖೆಗಳಿಂದ ಪಡೆದ ಅನುಮತಿಯ ವಿವರಗಳು ಹಾಗೂ ದಾಖಲಾತಿಗಳನ್ನು ತಹಸಿಲ್ದಾರರಿಗೆ ಸಲ್ಲಿಸಬೇಕಿದೆ. ಈ ಕುರಿತು ತಾಲೂಕು ಹಾಗೂ ಜಿಲ್ಲಾ ಆಡಳಿತಕ್ಕೆ ಯಾವುದೇ ಮಾಹಿತಿ ನೀಡದೇ ಚಿತ್ರೀಕರಣ ನಡೆಸಿರುವ ಆರೋಪ ಚಿತ್ರತಂಡದ ಮೇಲೆ ಮೂಡಿದೆ.