ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ದುರಾಡಳಿತದಿಂದ ನಲುಗಿ ಹೋಗಿರುವ ಜನಸಾಮಾನ್ಯನಿಗೆ ಏಕೈಕ ಆಶಾಕಿರಣ ಆಮ್ ಆದ್ಮಿ ಪಕ್ಷ ಒಂದೇ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಅತಿಶಿ ಸಿಂಗ್ ಬೆಂಗಳೂರಿನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅಭಿಪ್ರಾಯ ಪಟ್ಟರು.
” ದೆಹಲಿಯಲ್ಲಿ ನಾವು ಕಳೆದ ಹತ್ತು ವರ್ಷಗಳಿಂದ ಮಾಡಿರುವ ಸಾಧನೆ, ಹಾಗೂ ಪಂಜಾಬ್ ನಲ್ಲಿ ನೀಡುತ್ತಿರುವ ಸ್ವಚ್ಛ, ಪ್ರಾಮಾಣಿಕ ಆಡಳಿತ ವೈಖರಿ ನೋಡಿದಾಗ ಜನಸಾಮಾನ್ಯರು ಆಡಳಿತಕ್ಕೆ ಬಂದಾಗ ಮಾತ್ರ ದೇಶದಲ್ಲಿ ಬದಲಾವಣೆ ಸಾಧ್ಯವೆ ಹೊರತು ಪರಂಪರಾನುಗತ ಪಕ್ಷಗಳಿಂದ ಖಂಡಿತ ಸಾಧ್ಯವಿಲ್ಲ. ಜನಸಾಮಾನ್ಯನು ಸಹ ಮುಖ್ಯಮಂತ್ರಿ ಆಗಬಹುದೆಂಬ ಉದಾಹರಣೆಯನ್ನು ನನ್ನನ್ನು ನೋಡಿದರೆ ಗೊತ್ತಾಗುತ್ತದೆ.
ಇದೇ ರೀತಿಯ ಪರ್ಯಾಯ ರಾಜಕಾರಣವನ್ನು ದೇಶದೆಲ್ಲೆಡೆ ಜನಸಾಮಾನ್ಯರು ಸ್ವಾಗತಿಸುತ್ತಿದ್ದಾರೆ. ಕರ್ನಾಟಕದಲ್ಲಿಯೂ ಪಕ್ಷಕ್ಕೆ ಉಜ್ವಲ ಭವಿಷ್ಯವಿದೆ. ಕಾರ್ಯಕರ್ತರೆಲ್ಲರೂ ಅಧಿಕಾರ ಇರಲಿ ಬಿಡಲಿ ಹಗಲಿರುಳು ಜನಸಾಮಾನ್ಯನ ಏಳಿಗೆಗಾಗಿ ದುಡಿಯಬೇಕು. ಹಾಗಾದರೆ ಮತ್ತು ರಾಜಕೀಯ ಪರಿವರ್ತನೆ ಖಂಡಿತಾ ಸಾಧ್ಯ ” ಎಂದು ಅತಿಶಿ ಸಿಂಗ್ ತಮ್ಮ ಪ್ರಮುಖ ಭಾಷಣದಲ್ಲಿ ತಿಳಿಸಿದರು.
ವೇದಿಕೆಯಲ್ಲಿ ಪಕ್ಷದ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಪೃಥ್ವಿ ರೆಡ್ಡಿ, ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು , ಪ್ರಧಾನ ಕಾರ್ಯದರ್ಶಿ ಸಂಚಿತ್ ಸೆಹ್ವಾನಿ, ರಾಜ್ಯ ಖಜಾಂಚಿ ಪ್ರಕಾಶ್ ನೆಡುಂಗಡಿ ಹಾಗೂ ಪ್ರಮುಖ ಕಾರ್ಯಕರ್ತರುಗಳು, ಮುಖಂಡರುಗಳು ಭಾಗವಹಿಸಿದ್ದರು.