ರಶ್ಮಿಕಾ ಮಂದಣ್ಣ ಏನೇ ಮಾಡಿದ್ರೂ, ಏನೂ ಮಾಡದೇ ಇದ್ದರೂ ಸದಾ ಸುದ್ದಿಯಲ್ಲಿರುವ ನಟಿ..ಸದ್ಯ ಕನ್ನಡ ಚಿತ್ರರಂಗಕ್ಕೆ ಬೈ ಬೈ ಹೇಳಿ ತೆಲುಗು, ತಮಿಳು, ಹಿಂದಿ ಸಿನಿಮಾರಂಗದಲ್ಲಿ ಬ್ಯುಸಿಯಾಗಿರುವ ಪಂಚ ಭಾಷೆ ತಾರೆ. ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್. ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟು ಲಕ್ಕಿ ಗರ್ಲ್ ಎನಿಸಿಕೊಂಡಿರುವ ಮಂದಣ್ಣನಿಗೆ ತಾವು ಎಲ್ಲಿಯವರೂ ಅನ್ನೋದು ಜ್ಞಾನೋದಯವಾಗಿದೆ.
ರಶ್ಮಿಕಾ ಮಂದಣ್ಣ ಕನ್ನಡದ ಪ್ರೀತಿ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಖಾನ್ ಜೊತೆ ಸಿಕಂದರ್ ಸಿನಿಮಾದ ಪ್ರಚಾರದ ವೇಳೆ ಪುಷ್ಪ ಶ್ರೀವಲ್ಲಿ, ನಾನು ಕರ್ನಾಟಕದವಳು. ನಾನು ಬೆಳೆದಿದ್ದು ಕರ್ನಾಟಕದಲ್ಲಿ. ಅಲ್ಲಿ ನಾನು ಮಾತನಾಡುತ್ತಿದ್ದಿದ್ದು ಕನ್ನಡ ಮತ್ತು ಇಂಗ್ಲೀಷ್ ಎಂದಿದ್ದಾರೆ.
ನಾನು ಹೈದರಾಬಾದ್ಗೆ ಬಂದ ಬಳಿಕ ತೆಲುಗು ಭಾಷೆ ಕಲಿಯುವುದು ನನಗೆ ಅನಿವಾರ್ಯವಾಗಿತ್ತು. ಏಕೆಂದರೆ ನನ್ನ ಮನೆ, ಆಫೀಸ್ ಸಿಬ್ಬಂದಿ, ಸೆಕ್ಯುರಿಟಿ ಎಲ್ಲರೂ ತೆಲುಗು ಭಾಷೆಯವರೇ ಆಗಿರುವುದರಿಂದ ನಾನು ಅವರೊಂದಿಗೆ ಅಲ್ಲಿ ತೆಲುಗು ಭಾಷೆಯಲ್ಲೇ ಮಾತನಾಡಬೇಕಾಗಿತ್ತು. ಈ ಕಾರಣದಿಂದಲೇ ನಾನು ತೆಲುಗು ಭಾಷೆಯನ್ನು ಕಲಿತುಕೊಂಡಿದ್ದೇನೆ ಎಂದೂ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ನಾನು ಹೈದ್ರಾಬಾದ್ನವಳು ಎಂದಿದ್ದ ನಟಿ
ರಶ್ಮಿಕಾ ಮಂದಣ್ಣ ಛಾವಾ ಸಿನಿಮಾದ ಪ್ರಚಾರದ ವೇಳೆ ಮುಂಬೈ ನೆಲದಲ್ಲಿ ನಿಂತು ನಾನು ಹೈದ್ರಾಬಾದ್ ನವಳು ಎಂದಿದ್ದರು. ಇದು ಕನ್ನಡಿಗರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಮೂಲತಃ ರಶ್ಮಿಕಾ ಕರ್ನಾಟಕದ ಕೊಡಗಿನವರು. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಿಂದಲೇ ಚಿತ್ರರಂಗಕ್ಕೆ ಕಾಲಿಟ್ಟವರು. ಹೀಗಾಗಿ ಕನ್ನಡ ಅನ್ನ ತಿಂದು, ಕನ್ನಡದಿಂದ ಚಿತ್ರರಂಗ ಶುರು ಮಾಡಿ ಈಗ ಬೆಳೆದ ಮೇಲೆ ಹೈದ್ರಾಬಾದ್ ನವಳು ಎಂದಿದ್ದ ರಶ್ಮಿಕಾ ಮಂದಣ್ಣ ವಿರುದ್ದ ಕನ್ನಡಿಗರು ಗರಂ ಆಗಿದ್ದರು.