ಬೆಂಗಳೂರು: ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೃಷಿ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ವ್ಯಾಪಾರ ಕ್ಷೇತ್ರಗಳು ಆಸರೆಯಾಗಿವೆ ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿಯವರ ಅಭಿಪ್ರಾಯ ಪಟ್ಟಿದ್ದಾರೆ.. ನಗರದ ಟೌನ್ ಹಾಲ್ ನಲ್ಲಿ ಕೆಪೆಕ್ ಹಾಗೂ ಖೆತಿವಾಲ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಕೃಷಿ ಜಾಗೃತಿ ಕಾರ್ಯಗಾರ, ಖೆತಿ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಸಚಿವರು ಮಾತನಾಡಿದರು..
ಕೃಷಿ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆ ವಹಿವಾಟು ವ್ಯವಸ್ಥೆಯಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಜೊತೆಗೆ ಸ್ವ-ಉದ್ಯೋಗಗಳ ಅವಕಾಶಗಳು ಹೆಚ್ಚುತ್ತಿವೆ ಯುವ ಸಮುದಾಯ ಅವಕಾಶಗಳನ್ನು ಸದ್ಬಳಿಕೆ ಮಾಡಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು..
ಸಾಂಪ್ರದಾಯಕ ಕೃಷಿಯೊಂದಿಗೆ ತಂತ್ರಜ್ಞಾನ, ವೈಜ್ಞಾನಿಕ ಪದ್ದತಿಗಳ ಅಳವಡಿಕೆ ಸಮಯ, ಶ್ರಮದ ಉಳಿತಾಯದ ಜೊತೆಗೆ ಆದಾಯವನ್ನು ಹೆಚ್ಚಿಸುತ್ತಿದೆ. ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ ಹಾಗೂ ಮಾರುಕಟ್ಟೆಯ ಬಗ್ಗೆ ಜ್ಞಾನ ವಿಸ್ತಾರಗೊಳ್ಳಬೇಕು ಎಂದು ಎನ್. ಚಲುವರಾಯಸ್ವಾಮಿ ಹೇಳಿದರು..
ಕೆಪೆಕ್ ಕೂಡ ರೈತರ ಉತ್ಪನಗಳ ಮೌಲ್ಯವರ್ಧನೆ, ರಫ್ತು ಹಾಗೂ ಆಹಾರ ಉತ್ಪನಗಳ ತಯಾರಿಕೆ ಉದ್ಯಮದ ಪ್ರೋತ್ಸಾಹಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದರೊಂದಿಗೆ ಖೆತಿವಾಲ ಸಂಸ್ಥೆ ಕೆಪೆಕ್ ಫಲಾನುಭವಿಗಳಿಗೆ ದೇಸಿ ಹಾಗೂ, ಅಂತರರಾಷ್ಟ್ರೀಯ ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನಾರ್ಹ ಎಂದು ಅವರು ತಿಳಿಸಿದರು..
ಕೆಪೆಕ್ ನಲ್ಲಿ PMFME ಯೋಜನೆಯಡಿಯಲ್ಲಿ ಕಿರು ಆಹಾರ ಸಂಸ್ಕರಣ ಉದ್ಯಮ ಸ್ಥಾಪಿಸಲು ಅವಕಾಶವಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಒಟ್ಟು ಕೂಡ 15 ಲಕ್ಷ ರೂಪಾಯಿ ಸಬ್ಸಿಡಿ ಕೂಡ ದೊರೆಯಲಿದೆ. ಇದಕ್ಕಾಗಿ 206 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈ ಅವಕಾಶವನ್ನು ರೈತರ ಮಕ್ಕಳು ಸದ್ಬಳಿಕೆ ಮಾಡಿಕೊಳ್ಳಬೇಕು ಎಂದು ಕೃಷಿ ಸಚಿವರು ಕರೆ ನೀಡಿದರು..
ಕೆಪೆಕ್ ನಲ್ಲಿ ಈ ವರ್ಷ 5 ಸಾವಿರ ಹೊಸ ಆಹಾರ ಉದ್ಯಮಗಳ ಸೃಷ್ಟಿಯ ಗುರಿ ಹೊಂದಲಾಗಿದೆ ಇದಲ್ಲದೆ ಕೃಷಿ ಇಲಾಖೆಯಲ್ಲಿಯು ಹಲವು ವಿನೂತನ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಕೃಷಿ ನವೋದ್ಯಮ ರೂ.8 ಕೋಟಿ ಸಹಾಯಧನದಲ್ಲಿ 40 ನವೋದ್ಯಮಗಳ ಸ್ಥಾಪಿಸಲಾಗಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿಯವರು ಮಾಹಿತಿ ನೀಡಿದರು..
ರೂ.128 ಕೋಟಿ ವೆಚ್ಚದಲ್ಲಿ 344 ಹಾರ್ವೆಸ್ಟರ್ ಹಬ್ ವಿತರಣೆ ಮಾಡಲಾಗಿದೆ ರೈತರನ್ನು ಯಾಂತ್ರಿಕವಾಗಿಯು ಸಬಲರನ್ನಾಗಿ ಮಾಡಲು ರಾಜ್ಯ ಸರ್ಕಾರ 900 ಕೋಟಿ ವೆಚ್ಚದಲ್ಲಿ ಈಗಾಗಲೇ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ. 1075 ಕೋಟಿ ರೂಪಾಯಿ ವೆಚ್ಚದಲ್ಲಿ ಸೂಕ್ಷ್ಮ ನೀರಾವರಿ ಪರಿಕರಗಳನ್ನು ವಿತರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು..
ಜಲಾನಯನ ಇಲಾಖೆ ನಿರ್ದೇಶಕರಾದ ಬಂಥನಾಳ, ಕೆಪಕ್ ವ್ಯವಸ್ಥಾಪಕ ನಿರ್ದೇಶಕರಾದ ಶಿವಪ್ರಕಾಶ್, ನರ್ಬಾಡ್ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ವಿ.ಎನ್. ಶರ್ಮಾ ಮತ್ತು ಎಸ್.ಎಲ್.ಬಿ.ಸಿ ಸಂಯೋಜಕರಾದ ಭಾಸ್ಕರ್ ಭಟ್ಟಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು..ಇದೆ ವೇಳೆ ಖೆತಿ ಪುರಸ್ಕಾರಕ್ಕೆ ಭಾಜನರಾದ ಅಧಿಕಾರಿಗಳು ಸಂಸ್ಥೆಯ ಪ್ರತಿನಿಧಿಗಳನ್ನು ಸಚಿವರು ಸನ್ಮಾನಿಸಿದರು..