ಚಾಮರಾಜನಗರ : ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಮಲೆಮಹದೇಶ್ವರಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸುವ ದಿನಾಂಕಗಳಿಗೆ ಮಾತ್ರ ಸೀಮಿತವಾಗಿ ಸಭೆಯ ಸಮಯ ಕೂಡಿಬರದೆ ಮುಂದೂಡುತ್ತಲೇ ಸಾಗಿತ್ತು. ಇದೀಗ ಏಪ್ರಿಲ್ 24 ರಂದು ಸಚಿವ ಸಂಪುಟ ಫಿಕ್ಸ್ ಆಗಿದ್ದು. ಜಿಲ್ಲೆಯ ಸಮಗ್ರ ಅಭಿವೃದ್ದಿಯ ಆಸೆ ಜನರಲ್ಲಿ ಗರಿಗೆದರಿದೆ.
ಪ್ರಾರಂಭದಲ್ಲಿ ಕ್ಯಾಬಿನೆಟ್ ಸಭೆಯನ್ನು ಫೆಬ್ರವರಿ 15 ರಂದು ನಡೆಸುವ ಯೋಜನೆ ಇತ್ತು, ಬಳಿಕ ಫೆಬ್ರವರಿ 17 ಕ್ಕೆ ಮುಂದೂಡಲಾಗಿತ್ತು. ಆದರೆ ಹಲವಾರು ಕಾರಣಗಳಿಂದ ಮತ್ತೆ ಸಭೆ ಮುಂದೂಡಲಾಗಿತ್ತು. ಇದೀಗ ಸರ್ಕಾರ ಏಪ್ರಿಲ್ 24 ರಂದು ಸಭೆ ನಡೆಸಲು ನಿರ್ಧಾರ ಕೈಗೊಂಡಿದೆ. ಈಗಾಗಲೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು ಸಭೆಗೆ ಸಂಬಂಧಿಸಿದ ಎಲ್ಲಾ ವ್ಯವಸ್ಥೆಗಳನ್ನು ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮೈಸೂರು ವಿಭಾಗದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಸ್ತಾವನೆಗಳು ಚರ್ಚೆಗೆ ಬರಲಿವೆ. ಜಿಲ್ಲೆಯ ಪ್ರವಾಸೋದ್ಯಮ, ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನಿರೀಕ್ಷಿಸಲಾಗಿದೆ. ಸಭೆಗೆ ಸಂಪೂರ್ಣ ತಯಾರಿ ನಡೆದಿದೆ.