ಬೆಂಗಳೂರು: ಜಾತಿ ಗಣತಿ ಬೆಂಕಿ ಪ್ರಬಲ ಜಾತಿಗಳನ್ನು ಮಾತ್ರವಲ್ಲ, ಆಡಳಿತಾರೂಡ ಕಾಂಗ್ರೆಸ್ ನಲ್ಲೂ ಕಿಚ್ಚು ಹಚ್ಚಿದೆ. ಜಾತಿ ಗಣತಿ ವರದಿ ಬಗ್ಗೆ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಮುದಾಯದಲ್ಲೇ ಅಸಮಾಧಾನ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಒಕ್ಕಲಿಗ ಶಾಸಕರ ಜತೆ ಇಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸಭೆ ನಡೆಸಲಿದ್ದಾರೆ.
ಸದಾಶಿವನಗರದ ಡಿ.ಕೆ ಶಿವಕುಮಾರ್ ನಿವಾಸದಲ್ಲಿ ಸಂಜೆ ನಡೆಸಲಿರುವ ಡಿಕೆ ಶಿವಕುಮಾರ್, ಒಕ್ಕಲಿಗ ಶಾಸಕರ ಅಭಿಪ್ರಾಯ ಪಡೆಯಲಿದ್ದಾರೆ. “ನಾನು ಜಾತಿ ಗಣತಿ ವರದಿಯನ್ನು ಸಂಪೂರ್ಣವಾಗಿ ನೋಡಿಲ್ಲ, ಅದರ ಅಧ್ಯಯನ ಮಾಡಲಾಗುತ್ತಿದೆ. ಹೀಗಾಗಿ ಸಂಜೆ ಕಾಂಗ್ರೆಸ್ ಪಕ್ಷದ ನಮ್ಮ ಸಮುದಾಯದ ಶಾಸಕರ ಸಭೆ ಕರೆದಿದ್ದೇನೆ. ಅವರ ಜತೆ ಚರ್ಚೆ ಮಾಡಿ, ಯಾರ ಮನಸ್ಸಿಗೂ ನೋಯಿಸದೇ ಎಲ್ಲರ ಗೌರವ ಕಾಪಾಡಲು ಸಲಹೆ ನೀಡುತ್ತೇವೆ ಎಂದು ಡಿಕೆಶಿ ನಿನ್ನೆ ಹೇಳಿದ್ದರು.
ಹೀಗಾಗಿ ಜಾತಿಗಣತಿ ಬಗ್ಗೆ ಕಾಂಗ್ರೆಸ್ ನಲ್ಲೇ ಅಸಮಾಧಾನ ಹೊಗೆಯಾಡಲು ಶುರು ಮಾಡಿದೆ. ಕಳೆದ ವರ್ಷವೂ ಒಕ್ಕಲಿಗ ಶಾಸಕರು, ಸಚಿವರು, ಸೋರಿಕೆಯಾಗಿದ್ದ ಜಾತಿ ಗಣತಿ ವರದಿಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಡಿಕೆ ಶಿವಕುಮಾರ್ ನಡೆಸುವ ಒಕ್ಕಲಿಗ ಶಾಸಕರ ಸಭೆ ಭಾರು ಕುತೂಹಲ ಮೂಡಿಸಿದೆ.