ಬೆಂಗಳೂರು/ಶಿವಮೊಗ್ಗ:- ಜನಿವಾರ ಹಾಕಿ ಬಂದಿದ್ದಕ್ಕೆ ಸಿಇಟಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅವಕಾಶ ನಿರಾಕರಿಸಿದ ಘಟನೆಗೆ ಸಂಬಂಧಿಸಿದಂತೆ ಪರಿಷತ್ ಶಾಸಕ ಟಿಎ ಶರವಣ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಟಿಎ ಶರವಣ, ಶಿವಮೊಗ್ಗದಲ್ಲಿ ವಿದ್ಯಾರ್ಥಿಯೊಬ್ಬ ಜನಿವಾರ ಧರಿಸಿದ್ದ ಕಾರಣಕ್ಕೆ ಸಿ ಇ ಟಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿರುವುದು ಅತ್ಯಂತ ಹೇಯ ಹಾಗೂ ಅಮಾನುಷ ವರ್ತನೆಯಾಗಿದೆ. ಧರ್ಮದ ಆಧಾರದ ಮೇಲೆ ಮನುಷ್ಯರ ಮೇಲೆ ಆಡಳಿತ ಯಂತ್ರ ನಡೆಸುತ್ತಿರುವ ಇಂಥ ದೌರ್ಜನ್ಯ ವನ್ನು ನಾನು ಬಲವಾಗಿ ಖಂಡಿಸುತ್ತೇನೆ.
ಭಾರತದ ಇತಿಹಾಸದಲ್ಲೇ ಇಂಥ ಅವಮಾನಕರ ಘಟನೆ ಇನ್ನೊಂದು ನಡೆದಿಲ್ಲ. ಹಿಂದೂ ಸಂಸ್ಕೃತಿಗೆ , ಆಚರಣೆಗೆ ಕಾಂಗ್ರೆಸ್ ಸರಕಾರ ಮಾಡುತ್ತಿರುವ ಇಂಥ ಅಪಚಾರಕ್ಕೆ ಕೊನೆಯೇ ಇಲ್ಲ. ಜನಿವಾರ ಧರಿಸಿ ಬಂದ ಕಾರಣಕ್ಕೆ ಸಿ ಇ ಟಿ ಪರೀಕ್ಷೆ ಗೆ ನಿರಾಕರಿಸಿ, ಬಾಲಕರ ಬದುಕಿಗೆ ಈ ಸರಕಾರ ಕೊಳ್ಳಿ ಇಟ್ಟಿದೆ. ವಿದ್ಯಾರ್ಥಿಯ ಭವಿಷ್ಯಕ್ಕೆ ಸರಕಾರ ಕೊಳ್ಳಿ ಇಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಮದ್ಯ ಪ್ರವೇಶ ಮಾಡಬೇಕೆಂದು ನಾನು ಆಗ್ರಹ ಪಡಿಸುತ್ತೇನೆ. ವಿದ್ಯಾರ್ಥಿಯ ಭವಿಷ್ಯಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸುತ್ತೇವೆ. ವಿದ್ಯಾರ್ಥಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕೆಂದು ನಾನು ಒತ್ತಾಯಿಸುತ್ತೇವೆ. ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ವಜಾ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಪರಿಷತ್ ಶಾಸಕ ಟಿಎ ಶರವಣ ಅವರು ಆಗ್ರಹಿಸಿದ್ದಾರೆ.