ಚಾಮರಾಜನಗರ:- ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಆಕ್ಸಿಜನ್ ದುರಂತ ನ್ಯಾಯಕ್ಕಾಗಿ ಹೋರಾಟ ಸಮಿತಿವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ವರ್ಗಾವಣೆ: ಜಿಲ್ಲಾಡಳಿತದಿಂದ ಬೀಳ್ಕೊಡುಗೆ!
2021 ರ ಮೇ 2 ರ ಮಧ್ಯರಾತ್ರಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ 36 ಮಂದಿಯ ಕುಟುಂಬದವರ ಪೈಕಿ 13 ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ, 11 ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡಿದೆ. ಉಳಿದ 12 ಕುಟುಂಬಗಳಿಗೆ ಪರಿಹಾರ ನೀಡಿಲ್ಲ. ಅವರನ್ನು ಪರಿಹಾರದ ಪಟ್ಟಿಗೂ ಸೇರಿಸಿಲ್ಲ ಎಂದು ಆರೋಪಿಸಿದರು. ಆಕ್ಸಿಜನ್ ದುರಂತದ ವೇಳೆ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ನಾಯಕರು ಚಾಮರಾಜನಗರ ಆಸ್ಪತ್ರೆಗೆ ಭೇಟಿ ನೀಡಿ ನಮ್ಮ ಪಕ್ಷ ಆಡಳಿತಕ್ಕೆ ಬಂದಾಗ ಸರಕಾರಿ ನೌಕರಿ ಹಾಗೂ ಹೆಚ್ಚಿನ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಭರವಸೆ ಈವರೆಗೂ ಭರವಸೆಯಾಗಿಯೇ ಉಳಿದಿದೆ.
ಬೆಂಗಳೂರಿನಲ್ಲಿ ಆರ್ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ ಕುಟುಂಬವದರಿಗೆ ಒಂದು ರೀತಿಯ ಪರಿಹಾರ ಮತ್ತು ಚಾಮರಾಜನಗರದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ಮತ್ತೊಂದು ರೀತಿಯ ಪರಿಹಾರ ನೀಡುವುದು ಸರ್ಕಾರದ ಮಲತಾಯಿ ಧೋರಣೆಯಾಗಿದೆ ಎಂದು ಕಿಡಿಕಾರಿದರು. ಆರ್ಸಿಬಿ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ರಾಜ್ಯ ಸರಕಾರದಿಂದ 25 ಲಕ್ಷ ರೂ.ಪರಿಹಾರ ನೀಡುವ ಕಾಂಗ್ರೆಸ್ ಪಕ್ಷವು ಆಕ್ಸಿಜನ್ ದುರಂತದ ವೇಳೆ ಕೊಟ್ಟ ಮಾತಿನಂತೆ ಸಂತ್ರಸ್ತರಿಗೆ ಸರಕಾರಿ ನೌಕರಿಯನ್ನು ನೀಡಬೇಕು ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಭಾಗ್ಯರಾಜ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿ.ಎಂ.ಕೃಷ್ಣಮೂರ್ತಿ, ಮಾಡ್ರಹಳ್ಳಿ ಮಹದೇವಪ್ಪ, ಕೆ.ವೆಂಕಟರಾಜು, ಮಹೇಶ್ ಕುಮಾರ್, ಹೊನ್ನೂರು ಪ್ರಕಾಶ್, ಅಬ್ರಾರ್ ಅಹಮ್ಮದ್, ನಯಾಜ್ ವುಲ್ಲಾ, ನಿಜಧ್ವನಿ ಗೋವಿಂದರಾಜು, ಚಾ. ರಂ. ಶ್ರೀನಿವಾಸ್ ಗೌಡ, ಸುರೇಶ್ ವಾಜಪೇಯಿ, ಬ್ರಿಜೇಶ್ ಒಲಿವೇರಾ, ಮಹೇಶ್ ಗಾಳೀಪುರ, ಮಹೇಶ್, ಗುರುಪ್ರಸಾದ್, ಹಾಲಿನ ನಾಗರಾಜ್, ಬೆಳ್ಳಿಯಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು