ಅಂಬಾಟಿ ರಾಯುಡು.. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ. ಆದ್ರೆ ಇವರಿಗೆ RCB ಬಗ್ಗೆ ಟೀಕೆ-ಟಿಪ್ಪಣಿ ಮಾಡಲಿಲ್ಲ ಅಂದ್ರೆ ತಿಂದ ಅನ್ನ ಜೀರ್ಣ ಆಗೋದಿಲ್ಲ ಅನ್ನಿಸತ್ತೆ. ಯಾವಾಗಲೂ RCBಯನ್ನೇ ಟಾರ್ಗೆಟ್ ಮಾಡುವ ಇವರು ಮತ್ತೊಮ್ಮೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆಗಿದ್ದಾರೆ.
ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಸಿಎಸ್ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ನೀಡಿದ ಹೇಳಿಕೆಯು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಚಾನೆಲ್ ಚರ್ಚೆಯೊಂದರಲ್ಲಿ ಮಾತನಾಡಿದ ಅಂಬಾಟಿ ರಾಯುಡು, ಆರ್ಸಿಬಿ ಮತ್ತು ಸಿಎಸ್ಕೆ ನಡುವೆ ಯಾವುದೇ ಪೈಪೋಟಿಯಿಲ್ಲ. ಉಭಯ ತಂಡಗಳಿಂದ ಜಿದ್ದಾಜಿದ್ದಿನ ಕದನ ನಿರೀಕ್ಷೆಯನ್ನು ಸಹ ಮಾಡುವಂತಿಲ್ಲ. ಇಲ್ಲಿ ಆರ್ಸಿಬಿ ತಂಡವನ್ನು ಸಿಎಸ್ಕೆ ತಂಡದ ಸಾಂಪ್ರದಾಯಿಕ ಎದುರಾಳಿಯಾಗಿ ಬಿಂಬಿಸಲಾಗಿದೆ. ಆದರೆ ಅಂತಹದ್ದೇನು ಇಲ್ಲ. ಉಭಯ ತಂಡಗಳ ನಡುವೆ ಅಂತಹದೊಂದು ಪೈಪೋಟಿಯೇ ಇಲ್ಲ.
ಏಕೆಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹಲವು ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬಗ್ಗು ಬಡಿದಿದೆ. ಅಲ್ಲದೆ ಆರ್ಸಿಬಿ ವಿರುದ್ಧ ಸಿಎಸ್ಕೆ ಮೇಲುಗೈ ಸಾಧಿಸುತ್ತಾ ಬಂದಿದೆ. ಹೀಗಾಗಿ ಆರ್ಸಿಬಿ ಸಿಎಸ್ಕೆ ತಂಡದ ಸಾಂಪ್ರದಾಯಿಕ ಎದುರಾಳಿ ಎಂದು ನಾನಂತು ಭಾವಿಸುವುದಿಲ್ಲ.
ನೀವು ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಸಾಂಪ್ರದಾಯಿಕ ಎದುರಾಳಿಗಳೆಂದು ಬಿಂಬಿಸುವುದರಲ್ಲಿ ಅರ್ಥವಿದೆ. ಏಕೆಂದರೆ ಉಭಯ ತಂಡಗಳ ನಡುವೆ ಅಂತಹದೊಂದು ಪೈಪೋಟಿ ಇದೆ. ಆದರೆ ಸಿಎಸ್ಕೆ ಮುಂದೆ ಆರ್ಸಿಬಿ ಸಾಮಾನ್ಯ ತಂಡ. ಹೀಗಾಗಿ ಉಭಯ ತಂಡಗಳನ್ನು ಸಾಂಪ್ರದಾಯಿಕ ಎದುರಾಳಿಗಳೆಂದು ಬಿಂಬಿಸುವುದು ಸರಿಯಲ್ಲ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.