ಐಪಿಎಲ್ನಲ್ಲಿ ಆರ್ಸಿಬಿ ಕೊನೆಗೂ ಟ್ರೋಫಿಗೆ ಮುತ್ತಿಟ್ಟಿದೆ. ಆದರೆ ಫೈನಲ್ ಪಂದ್ಯ ಮುಗಿದ ಮರುದಿನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ದುರಂತ, ಆರ್ಸಿಬಿಗೆ ಕಪ್ಪುಚುಕ್ಕೆಯಾಗಿ ಉಳಿದಿದೆ. ಕ್ರೀಡಾಂಗಣದ ಹೊರಗೆ ಕಾಲ್ತುಳಿತ ಸಂಭವಿಸಿ 11 ಆರ್ಸಿಬಿ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ.
ಕಂಕುಳಿನ ಕಪ್ಪು ಕಲೆ ಬೆಳ್ಳಗಾಗಬೇಕಾ!? ಹಾಗಿದ್ರೆ ಶಾಂಪೂಗೆ ಈ ಪದಾರ್ಥ ಮಿಕ್ಸ್ ಮಾಡಿ ಹಚ್ಚಿ!
ಅನಾಹುತ ಸಂಬಂಧ ಆರ್ಸಿಬಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದೀಗ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಕೂಡ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಕಾಲ್ತುಳಿತ ಸಂದರ್ಭದಲ್ಲಿ ಮಕ್ಕಳಿಗೂ ಹಾನಿಯಾಗಿರುವ ಶಂಕೆ ಇದೆ.
ಹೀಗಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮಕ್ಕಳ ಹಕ್ಕುಗಳ ಆಯೋಗ ತಿಳಿಸಿದೆ. ಅಷ್ಟೇ ಅಲ್ಲದೆ, ಎಷ್ಟು ಮಕ್ಕಳಿಗೆ ತೊಂದರೆಯಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸಿಐಡಿಗೆ ಪತ್ರ ಬರೆದಿದೆ. ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಸಿಐಡಿಗೆ ಪತ್ರ ಬರೆದಿದ್ದು, ವಿವರ ಒದಗಿಸುವಂತೆ ಕೋರಿದ್ದಾರೆ.
ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರ ಪತ್ರದಲ್ಲೇನಿದೆ?
‘ರಾಜ್ಯದ ಆರ್ಸಿಬಿ ತಂಡವು ಐಪಿಎಲ್ ಕ್ರಿಕೇಟ್ ಪಂದ್ಯಾವಳಿಯನ್ನು ಗೆದ್ದಿದ್ದರಿಂದ ತಂಡವನ್ನು ರಾಜ್ಯಕ್ಕೆ ಸ್ವಾಗತಿಸಿ, ಅಭಿನಂದಿಸಲು ಬೆಂಗಳೂರಿನ ಕ್ರಿಕೆಟ್ ಅಕಾಡೆಮಿಯು ಕಾರ್ಯಕ್ರಮವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿತ್ತು. ಈ ಅಭಿನಂದನಾ ಸಮಾರಂಭವನ್ನು ವೀಕ್ಷಿಸಲು ಬೆಂಗಳೂರಿನ ಹಾಗೂ ಇತರ ಜಿಲ್ಲೆಗಳಿಂದ ಸಾಕಷ್ಟು ಸಾರ್ವಜನಿಕರು ಭಾಗವಹಿಸಿದ್ದರು.
ಇದರಲ್ಲಿ ಮಕ್ಕಳೂ ಸಹ ಇದ್ದರು ಎಂಬ ಅಂಶವು ಆಯೋಗದ ಗಮನಕ್ಕೆ ಬಂದಿರುತ್ತದೆ. ಈ ಸಮಾರಂಭ ನಡೆಯುವ ಮೊದಲೇ ಚಿನ್ನಸ್ವಾಮಿ ಕ್ರೀಡಾಂಗಣದ ಕೆಲವು ದ್ವಾರಗಳ ಮುಂದೆ ಜನ ಸಂಖ್ಯೆಯ ಒತ್ತಡವು ಹೆಚ್ಚಾಗಿದ್ದು, ಸಾರ್ವಜನಿಕರನ್ನು ನಿಯಂತ್ರಿಸುವಲ್ಲಿ ವೈಪಲ್ಯ ಉಂಟಾಗಿದ್ದರಿಂದ 11 ಜನರು ಕಾಲ್ತುಳಿತಕ್ಕೆ ಒಳಗಾಗಿ ಸಾವಿಗೀಡಾಗಿರುವುದು ಈಗಾಗಲೇ ಸುದ್ದಿ ಮಾಧ್ಯಮದಲ್ಲಿ ವರದಿಯಾಗಿದ್ದು,
ಈ ಬಗ್ಗೆ ಸರ್ಕಾರ ಹಾಗೂ ಮಾನ್ಯ ಉಚ್ಚ ನ್ಯಾಯಾಲಯವು ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ಈ ಅವಘಡದಲ್ಲಿ ಮಕ್ಕಳಿಗೂ ಸಹ ತೊಂದರ ಉಂಟಾಗಿರುವ ಬಗ್ಗೆ ಆಯೋಗಕ್ಕೆ ಮಾಹಿತಿಯನ್ನು ಸಾರ್ವಜನಿಕರು ಒದಗಿಸಿರುತ್ತಾರೆ. ಈ ಅಂಶವನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ಇದುವರೆವಿಗೂ ಮಕ್ಕಳಿಗೆ ಉಂಟಾದ ತೊಂದರೆಯ ವಿವರಗಳು ನಿಖರವಾಗಿ ತಿಳಿದು ಬಂದಿರುವುದಿಲ್ಲ’ ಎಂದು ಮಕ್ಕಳಹಕ್ಕುಗಳ ಆಯೋಗದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.