ಬೆಂಗಳೂರು:- ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆರ್ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ್ ಸೇರಿ ಐವರು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಈ ದುರಂತದ ಹಿನ್ನೆಲೆ ರಾಜ್ಯ ಸರ್ಕಾರದ ಮೇಲೂ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಮೊದಲಿಗೆ ಹೊಣೆ ಹೊತ್ತುಕೊಳ್ಳದ ಸರ್ಕಾರವು ಇದೀಗ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಕ್ರಮ ಕೈಗೊಂಡಿದೆ.
Breaking News: ಕಾಲ್ತುಳಿತಕ್ಕೆ 11 ಮಂದಿ ಬಲಿ: ಕಮಿಷನರ್ ದಯಾನಂದ್ ಸೇರಿ ನಾಲ್ವರು ಅಧಿಕಾರಿಗಳು ಸಸ್ಪೆಂಡ್!
ಇನ್ನೂ ಪೊಲೀಸರ ಮೇಲಿನ ರಾಜ್ಯ ಸರ್ಕಾರದ ಈ ಕ್ರಮವನ್ನು ಬಿಜೆಪಿ ಮುಖಂಡರು ಸೇರಿ ಹಲವರು ಖಂಡಿಸಿದ್ದಾರೆ. ಛಲವಾದಿ ನಾರಾಯಣಸ್ವಾಮಿ, ಸದಾನಂದಗೌಡ, ವಿಜಯೇಂದ್ರ ಸೇರಿ ಹಲವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಹೇಳಿದ್ದೇನು?
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತ – ನೈತಿಕ ಹೊಣೆ ರಾಜ್ಯ ಸರ್ಕಾರದ್ದು.
ಕಾಂಗ್ರೆಸ್ ಸರ್ಕಾರದ ಸ್ವಯಂಕೃತ ಅಪರಾಧಕ್ಕೆ ಪೊಲೀಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಅಮಾನತ್ತು ಮಾಡಿರುವುದು ನ್ಯಾಯಸಮ್ಮತವಲ್ಲ, ಇದು ಖಂಡನೀಯ.
ರಾಜ್ಯ ಸರ್ಕಾರ ತಾನು ಎಸಗಿದ ಸ್ವಯಂಕೃತ ಅಪರಾಧಕ್ಕೆ ಹೊಣೆಗಾರರನ್ನಾಗಿ ಮಾಡಿ ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆ ತೋರಿಸಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಹತ್ತಿರ ನಡೆದ ಕಾಲ್ತುಳಿತ ಘಟನೆ ಕಾಂಗ್ರೆಸ್ ಸರ್ಕಾರದ ಪ್ರಚಾರದ ಗೀಳು ಮತ್ತು ಅಚಾತುರ್ಯದ ಕಾರಣದಿಂದಾಗಿ ನಡೆದಿದ್ದು, ಅಪರಾಧ ಎಸಗದ ಈ ಅಧಿಕಾರಿಗಳ ಮೇಲೆ ಅಮಾನತ್ತು ಹಾಗೂ ಶಿಸ್ತು ಕ್ರಮ ಕೈಗೊಂಡಿರುವುದು ಅತ್ಯಂತ ಖಂಡನೀಯ ಮತ್ತು ಅಧಾರವಿಲ್ಲದ ನಿರ್ಧಾರವಾಗಿದೆ.
ಇಡೀ ದೇಶವನ್ನು ಬೆಚ್ಚಿಬೀಳಿಸಿದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದು, 47 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆರ್ಸಿಬಿಯ ವಿಜಯೋತ್ಸವದ ಕ್ಷಣಗಳು ಕೆಲವೇ ನಿಮಿಷಗಳಲ್ಲಿ ಸಾವಿನ ನಿಗೂಢವಾಗಿ ಮಾರ್ಪಟ್ಟವು. ಈ ಘಟನೆಗೆ ನೇರ ಹೊಣೆ ಕಾಂಗ್ರೆಸ್ ಸರ್ಕಾರ.
ಇಂತಹ ಭೀಕರ ಅವ್ಯವಸ್ಥೆಗೆ ನೈತಿಕ ಹೊಣೆ ಹೊತ್ತು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಮತ್ತು ಕಾಲ್ತುಳಿತದಿಂದ ಸಾವು ಸಂಭವಿಸಿರುವ ವಿಷಯ ತಿಳಿದ ನಂತರವೂ ಕೂಡಾ, ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ಸಾಹದಿಂದ & ಹುಮ್ಮಸ್ಸಿನಿಂದ ಪಾಲ್ಗೊಂಡ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ @DKShivakumar ರವರುಗಳು ತಕ್ಷಣವೇ ರಾಜೀನಾಮೆ ನೀಡಬೇಕಿತ್ತು. ಸರ್ಕಾರದ ಯೋಜನೆಯಿಲ್ಲದ, ನಿರ್ಲಕ್ಷ್ಯಪೂರ್ಣ ನಿರ್ವಹಣೆಯ ಕಾರಣದಿಂದಾಗಿ ಈ ಅನಾಹುತ ಸಂಭವಿಸಿದೆ. ಆದರೆ ತನ್ನ ದೋಷವನ್ನು ಮುಚ್ಚಿಹಾಕುವ ಪ್ರಯತ್ನದಲ್ಲಿ ನಿರಪರಾಧಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ. ಇದೊಂದು ಸ್ಪಷ್ಟವಾಗಿ ಜನವಿರೋಧಿ & ನ್ಯಾಯಸಮ್ಮತವಲ್ಲದ ನಿರ್ಧಾರವಾಗಿದೆ.
ಇದೊಂದು ದುರ್ಘಟನೆ ಮಾತ್ರವಲ್ಲ – ಇದು @INCKarnataka ಸರ್ಕಾರದ ನೈತಿಕ ವಿಫಲತೆ ಮತ್ತು ನಿರ್ವಹಣಾ ದೌರ್ಬಲ್ಯಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದರು.
ಸದಾನಂದ ಗೌಡ ಹೇಳಿದ್ದೇನು?
ಕೋತಿ ತಾನು ಮೊಸರು ತಿಂದು ಮೇಕೆಯ ಬಾಯಿಗೆ ಒರಸಿದಂತೆ ಆಯಿತು ಈ ಕಥೆ. ಅಭಿಮಾನಿಗಳನ್ನು ಮೈದಾನಕ್ಕೆ ಬನ್ನಿ ಎಂದು ಕರೆದವರ ಮೇಲೆ ಯಾವ ಕ್ರಮವೂ ಇಲ್ಲ. ರಾತ್ರಿಯಿಡೀ ಕರ್ತವ್ಯ ನಿರ್ವಹಿಸಿದ್ದ ಪೊಲೀಸರಿಗೆ ಶಿಕ್ಷೆ !! ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹಸಚಿವರು ಈ ಕೂಡಲೇ ಇದರ ಹೊಣೆಯನ್ನು ಹೊತ್ತು ರಾಜೀನಾಮೆ ಕೊಡಬೇಕು ಎಂದಿದ್ದಾರೆ.
ಯಡಿಯೂರಪ್ಪ ಹೇಳಿದ್ದೇನು?
ಸ್ವತಃ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೇ ಮುಂದೆ ನಿಂತು ಇಡೀ ಸರ್ಕಾರವೇ ವ್ಯವಸ್ಥೆಯ ಜವಾಬ್ದಾರಿ ಹೊತ್ತು, ಆರ್.ಸಿ.ಬಿ ವಿಜಯೋತ್ಸವದ ಆಚರಣೆಗೆ ಮುಂದಾಗಿ, ಇಂತಹ ಬಹುದೊಡ್ಡ ದುರಂತಕ್ಕೆ ಕಾರಣವಾಗಿರುವಾಗ, ತಮ್ಮ ನೈತಿಕ ಜವಾಬ್ದಾರಿಯನ್ನು ಮರೆತು, ಜನರ ಆಕ್ರೋಶವನ್ನು ತಣ್ಣಗಾಗಿಸಬಹುದೆಂಬ ದುರಾಲೋಚನೆಯಿಂದ ಪೊಲೀಸ್ ಆಯುಕ್ತರೂ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿ ಅಮಾನತು ಮಾಡಿರುವುದು ನಾಚಿಕೆಗೇಡಿನ ಕ್ರಮವಾಗಿದೆ. ಸಮಾರಂಭಕ್ಕೂ ಮುನ್ನವೇ ಕಾಲ್ತುಳಿತದಿಂದ ಸಾವು-ನೋವಾಗಿರುವ ಸುದ್ದಿ ತಲುಪಿದರೂ ಭಂಡತನದಿಂದ ಸನ್ಮಾನ ಕಾರ್ಯಕ್ರಮವನ್ನು ಮುಗಿಸಿ, ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ಕಾರ್ಯಕ್ರಮ ಮುಂದುವರೆಸಿ, ಕಾಂಗ್ರೆಸ್ ಸರ್ಕಾರ ಕರುನಾಡಿನಲ್ಲಿ ಕರಾಳ ಇತಿಹಾಸ ಸೃಷ್ಟಿಸಿದೆ.
ಜನರ ಆಕ್ರೋಶವನ್ನು ತಣಿಸಲು ಹಾಗೂ ಉಚ್ಚ ನ್ಯಾಯಾಲಯದ ನ್ಯಾಯದಂಡದಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ಕುರ್ಚಿಗೆ ಅಂಟಿ ಕೂರುವ ಸ್ವಾರ್ಥದ ಕ್ರಮವಾಗಿದೆ. ಮುಖ್ಯಮಂತ್ರಿ @siddaramaiah ನವರಿಗೆ, ಉಪ-ಮುಖ್ಯಮಂತ್ರಿ @DKShivakumar ಹಾಗೂ ಗೃಹಮಂತ್ರಿ @DrParameshwara ಅವರಿಗೆ ಕನಿಷ್ಠ ನೈತಿಕತೆ ಇದ್ದರೆ ಈ ದುರಂತ ಘಟನೆಯ ಜವಾಬ್ದಾರಿ ಹೊತ್ತು ಈ ಕೂಡಲೇ ರಾಜಿನಾಮೆ ನೀಡಲಿ. ಎಂದಿದ್ದಾರೆ.
ವಿಜಯೇಂದ್ರ ಹೇಳಿದ್ದೇನು?
RCB ವಿಜಯೋತ್ಸವದ ಹೆಸರಿನಲ್ಲಿ ಸಂದರ್ಭದ ಲಾಭ ಪಡೆಯುವ ಕೆಟ್ಟ ಸ್ವಾರ್ಥದ ಫಲವಾಗಿ 11 ಅಮಾಯಕ ಜೀವಗಳ ಬಲಿಯಾಗಿದೆ. ಸಾವಿರಾರು ಜನರು ಸಂಕಟ ಅನುಭವಿಸಿದ್ದಾರೆ. ಇಂದು ಉಚ್ಚ ನ್ಯಾಯಾಲಯ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಪರಿಗಣಿಸಿ ಇಂದೇ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ಈ ಸಂದರ್ಭದಲ್ಲಿ ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಬೇಕಾದ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಹಾಗೂ ಗೃಹಸಚಿವರು ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರುʼ ಎಂಬಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಹಾಗೂ ಇತರ ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ಸರ್ಕಾರದ ನಿರ್ಲಜ್ಜ ಹಾಗೂ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ದುರಾಲೋಚನೆಯ ಕ್ರಮವಾಗಿದೆ. ಕರ್ನಾಟಕದ ಜನತೆ ಮಮ್ಮಲ ಮರುಗುತ್ತಿದ್ದಾರೆ, ಜನರ ಆಕ್ರೋಶ ಮುಗಿಲು ಮುಟ್ಟಿದೆ, ಮನೆ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮಾನವೀಯತೆ ಇರುವವರ ಕರುಳು ಹಿಂಡುತ್ತಿದೆ.
ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ನಿನ್ನೆಯ ಘಟನೆ ಬಹುದೊಡ್ಡ ದುರಂತವಾಗಿ ದಾಖಲಾಗಿದೆ. ಯಾವುದೇ ಮಾನದಂಡವಿಲ್ಲದೇ ರಾಷ್ಟ್ರೀಯ ಅಥವಾ ರಾಜ್ಯದ ಮಹತ್ವದ ಹಿನ್ನೆಲೆಯಿಲ್ಲದೇ ವಿವೇಚನಾರಹಿತವಾಗಿ ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಂದರ್ಭದ ಲಾಭ ಪಡೆಯಬಹುದು ಎಂಬ ದುರಾಸೆಯಿಂದ ರಾಜಧಾನಿಯ ಹೃದಯ ಭಾಗವನ್ನು ಸ್ಮಶಾನವನ್ನಾಗಿಸಿ ಸಂಭ್ರಮಾಚರಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ @INCKarnataka ಸರ್ಕಾರವನ್ನು ಇಂದು ಕರ್ನಾಟಕದ ಜನತೆ ದಿನವಿಡೀ ಶಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನೈತಿಕತೆ ಮೆರೆದು ರಾಜಿನಾಮೆ ನೀಡಿ ಗೌರವ ಉಳಿಸಿಕೊಳ್ಳಬೇಕಾದ ಮುಖ್ಯಮಂತ್ರಿ, ಉಪ-ಮುಖ್ಯಮಂತ್ರಿ ಹಾಗೂ ಗೃಹಸಚಿವರು ಪೊಲೀಸ್ ಅಧಿಕಾರಿಗಳ ತಲೆದಂಡ ಪಡೆದುಕೊಂಡಿರುವುದು ನಿಜಕ್ಕೂ ತುಘಲಕ್ ಆಡಳಿತವನ್ನು ನೆನಪಿಸುತ್ತಿದೆ. ಯಾರು ಸತ್ತರೇನು? ಯಾರು ನೊಂದರೇನು? ನಾವು ಮಾತ್ರ ಅಧಿಕಾರದಲ್ಲಿರಬೇಕೆಂಬ ಭಂಡತನಕ್ಕೆ ಅಂಟಿ ಕುಳಿತಿರುವ ಕಾಂಗ್ರೆಸ್ ಸರ್ಕಾರವನ್ನು ಇತಿಹಾಸಕ್ಕೆ ಕಪ್ಪು ಚುಕ್ಕಿ ಅಂಟಿಸಿದ ಕಾರಣಕ್ಕೆ ಜನರೇ ಕಿತ್ತೊಗೆಯುವ ಅನಿವಾರ್ಯ ಸಂದರ್ಭ ಸಮೀಪಿಸುತ್ತಿದೆ.
ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿ
“ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದಂತೆ” ಮುಖ್ಯಮಂತ್ರಿ @siddaramaiah , ಉಪಮುಖ್ಯಮಂತ್ರಿ @DKShivakumar ಹಾಗೂ ಗೃಹ ಸಚಿವ @DrParameshwara ಅವರುಗಳು ತಪ್ಪಿಸಿಕೊಳ್ಳಲಾಗದು ತಕ್ಷಣವೇ ಮೂವರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ತಮ್ಮ ಗೌರವ ಕಾಪಾಡಿಕೊಳ್ಳಲಿ ಎಂದು ಒತ್ತಾಯಿಸುವೆ ಎಂದಿದ್ದಾರೆ.
ನಾಚಿಕೆ ಆಗ್ಬೇಕು ನಿಮ್ಮ ಜನ್ಮಕ್ಕೆ: ಆರ್ ಅಶೋಕ್
ಅಮಾಯಕ ಕ್ರಿಕೆಟ್ ಪ್ರೇಮಿಗಳಿಗೆ ಸಾವಿನ ಗ್ಯಾರೆಂಟಿ
❌ದಕ್ಷ/ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಗೆ ಅಮಾನತು ಗ್ಯಾರೆಂಟಿ
✅ಸಿಎಂ, ಮಂತ್ರಿಗಳಿಗೆ ಅಧಿಕಾರ ಗ್ಯಾರೆಂಟಿ
ಇದು @INCKarnataka ಸರ್ಕಾರದ ಯೋಗ್ಯತೆ. ಥೂ, ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.