ಬೆಂಗಳೂರು: ಕಲ್ಯಾಣ ಕರ್ನಾಟಕದಲ್ಲಿ ಗುಣಮಟ್ಟದ ಕಾಮಗಾರಿ ಆಗುತ್ತಿಲ್ಲ. ಇದೊಂದು ಭ್ರಷ್ಟವಾದ ರಾಜ್ಯವಾದ ವ್ಯವಸ್ಥೆ ಆಗಿದೆ ಎಂದು ರಾಜ್ಯ ಸರ್ಕಾರವನ್ನೇ ಭ್ರಷ್ಟ ಸರ್ಕಾರ ಎಂದು ಟೀಕಿಸಿ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಉಲ್ಟಾ ಹೊಡೆದಿದ್ದಾರೆ.
ನಾನು ನಿನ್ನೆ ದಿನ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಮ್ಮ ಸರ್ಕಾರದಲ್ಲಿ ಡಾ. ನಂಜುಂಡಪ್ಪ ವರದಿಯ ಅನುಷ್ಠಾನ ಆದ ಮೇಲೆ ಏನೆಲ್ಲಾ ಆಗಿದೆ ಎಂದು ಹೇಳಿದ್ದೆ. ಕಲ್ಯಾಣ ಕರ್ನಾಟಕದಲ್ಲಿ ಗುಣಮಟ್ಟದ ಕಾಮಗಾರಿ ಆಗ್ತಿಲ್ಲ. ಹಳೇ ಮೈಸೂರು ಭಾಗದಲ್ಲಿ ಗುಣಮಟ್ಟ ಆಗ್ತಿದೆ ಅಂತಾ ಹೇಳಿದೆ. ಇದೊಂದು ಭ್ರಷ್ಟವಾದ ರಾಜ್ಯವಾದ ವ್ಯವಸ್ಥೆ ಆಗಿದೆ ಅಂತಾ ಹೇಳಿದ್ದೇನೆ. ಈ ವ್ಯವಸ್ಥೆ ಸರಿಯಲ್ಲ, ಸರಿಯಾಗಿ ಕೆಲಸ ಮಾಡಿ ಅಂತಾ ಅಧಿಕಾರಿಗಳಿಗೆ ಹೇಳಿದೆ. ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ರಾಯರಡ್ಡಿ ಸಮರ್ಥನೆ ಮಾಡಿಕೊಂಡಿದ್ದಾರೆ.
ನಾನು ಹೇಳಿದ್ದು ಭ್ರಷ್ಟಾಚಾರ ಕ್ಕೆ ಆಸ್ಪದವಿಲ್ಲದಂತೆ ಉತ್ತಮ ವ್ಯವಸ್ಥೆ ಕೊಡಿ ಎಂದು ಹೇಳಿದ್ದೆ. ರಾಜ್ಯದಲ್ಲಿ ಭ್ರಷ್ಟಾಚಾರ ನಡಿತಿದೆ, ಅದನ್ನು ಹತೋಟಿಗೆ ತರಬೇಕು. ಕರ್ನಾಟಕಕ್ಕೆ ಒಳ್ಳೆಯದಾಗಬೇಕು ಅಂತಾ ಹೇಳಿದ್ದು. ನಮ್ಮ ಸರ್ಕಾರ ಭ್ರಷ್ಟಾಚಾರದಲ್ಲಿದೆ, ನಮ್ಮ ಸರ್ಕಾರ ಭ್ರಷ್ಟಾಚಾರ ಮಾಡಿದೆ ಅಂತಾ ನಾನು ಹೇಳಿಲ್ಲ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳಪೆ ಕಾಮಗಾರಿ ಜಾಸ್ತಿ ಆಗ್ತಿದೆ. ಸಿದ್ದರಾಮಯ್ಯ ನವರ ವಿಚಾರದಲ್ಲಿ ನನಗೆ ಎರಡು ಮಾತು ಇಲ್ಲ. ಅವರು ಇಡೀ ದೇಶದಲ್ಲೇ ಅತ್ಯುತ್ತಮ ಸಿಎಂ ಎಂದ ರಾಯರೆಡ್ಡಿ, ಸಿಎಂ ಅವರು ನನಗೆ ಸಚಿವ ಸ್ಥಾನ ಕೊಡಲಿ, ಬಿಡಲಿ I stand with CM ಎಂದಿದ್ದಾರೆ.
ನಾನು ಯಾವುದೇ ಪಕ್ಷದ ವಿರುದ್ಧ ಮಾತನಾಡಿಲ್ಲ, ಪಕ್ಷದ ವಿರುದ್ಧವೂ ಮಾತನಾಡಿಲ್ಲ. ಅಧಿಕಾರಿಗಳ ಕಳಪೆ ಕೆಲಸದ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದು. ರಾಜ್ಯ ಭ್ರಷ್ಟಾಚಾರದಲ್ಲಿದೆ ಅಂತಾ ನಾನು ಹೇಳಿಲ್ಲ. ನಾನು ಜನರಲ್ ಆಗಿ ನಡೆದುಬಂದ ಭ್ರಷ್ಟಾಚಾರ ವ್ಯವಸ್ಥೆ ಬಗ್ಗೆ ಹೇಳಿದ್ದೀನಿ. ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರ ರಹಿತವಾಗಿದ್ದಾರೆ. ಇವತ್ತಿನ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಇಲ್ಲ ಅಂತಾ ನಾನು ಹೇಳೋಕೆ ಆಗಲ್ಲ. ತಮ್ಮ ಸರ್ಕಾರ ದಲ್ಲೂ ಭ್ರಷ್ಟಾಚಾರ ನಡಿತಿದೆ ಅಂತ ರಾಯರೆಡ್ಡಿ ಒಪ್ಪಿಕೊಂಡಿದ್ದಾರೆ.