ಮಂಗಳೂರು:- ಚೂರಿಯಿಂದ ಇರಿದು ವ್ಯಕ್ತಿಯ ಬರ್ಬರ ಕೊಲೆ ನಡೆದಿರುವ ಘಟನೆ ಮಂಗಳೂರು ಹೊರವಲಯದ ವಳಚ್ಚಿಲ್ ಬಳಿ ಜರುಗಿದೆ. ಮದುವೆ ವಿಚಾರಕ್ಕೆ ನಡೆದ ಗಲಾಟೆ, ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಸಲ್ಮಾನ್ ಕೊಲೆಯಾದ ದುರ್ದೈವಿ. ಮುಸ್ತಾಫ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.
ಅಷ್ಟೇ ಅಲ್ಲದೆ ಸಲ್ಮಾನ್ನ ಇಬ್ಬರ ಪುತ್ರರಾದ ರಿಯಾಬ್, ಸಿಯಾಬ್ ಮೇಲೂ ಹಲ್ಲೆ ನಡೆಸಿ ಮುಸ್ತಾಫ ಪರಾರಿ ಆಗಿದ್ದಾನೆ. ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸಂಬಂಧಿ ಮುಸ್ತಫ ಎಂಬವರ ಮದುವೆಯನ್ನು ಸಲ್ಮಾನ್ ನೆರವೇರಿಸಿದ್ದ. ಇವರಿಬ್ಬರ ನಡುವೆ ಮದುವೆ ಸಂದರ್ಭದಲ್ಲಿ ವೈಮನಸ್ಸು ಉಂಟಾಗಿತ್ತು. ಇದೇ ವಿಚಾರವಾಗಿ ಮುಸ್ತಫ ಜೊತೆ ಮಾತುಕತೆಗೆ ತನ್ನ ಇಬ್ಬರು ಪುತ್ರರೊಂದಿಗೆ ಸಲ್ಮಾನ್ ಬಂದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಸಲ್ಮಾನ್ಗೆ ಮುಸ್ತಫ ಚೂರಿಯಿಂದ ಇರಿದಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಸಲ್ಮಾನ್ನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.