ಧಾರವಾಡ: ಭಾರತದಲ್ಲಿ ಉತ್ಪಾದನಾ ವಲಯಕ್ಕೆ ಪೂರಕ ಪರಿಸರ, ಸಂಪನ್ಮೂಲ ಮತ್ತು ಸಶಕ್ತ ಯುವ ಸಮೂಹವಿದ್ದು, ಭವಿಷ್ಯದಲ್ಲಿ ಭಾರತ ಜಾಗತಿಕ ಉತ್ಪಾದನಾ ಹಬ್ ಆಗಿ ಪರಿವರ್ತನೆ ಹೊಂದಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಕಾಲ್ತುಳಿತ ಕೇಸ್: ನಿಷ್ಠಾವಂತ ಪೊಲೀಸ್ ಅಧಿಕಾರಿಗಳನ್ನ ಬಲಿಪಶು ಮಾಡಿದ ಸರ್ಕಾರ- ದತ್ತಮೂರ್ತಿ ಕುಲಕರ್ಣಿ!
ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಹೊಡೆಕ್ ವೈಬ್ರೇಶನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿದ 3ನೇ ಗ್ರೀನ್ಫೀಲ್ಡ್ ಘಟಕ ಹಾಗೂ ಶ್ರೀರಾಮ ದೇವಾಲಯ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಇಂದು ಉತ್ಪದನಾ ವಲಯದಲ್ಲಿ ಅಭೂತಪೂರ್ವ ಬೆಳವಣಿಗೆ ಸಾಧಿಸುತ್ತಿದೆ ಎಂದು ಹೇಳಿದರು.
ಭಾರತದ ಇಂದು ಕೈಗಾರಿಕೆ, ಔದ್ಯೋಗಿಕ, ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಸಾರಿಗೆ, ವಿದ್ಯುತ್ ಹೀಗೆ ಪ್ರತಿಯೊಂದರಲ್ಲೂ ಆತ್ಮನಿರ್ಭರವಾಗಿದೆ. 2014ರಲ್ಲಿ ಇದ್ದಂತಹ ಆಮದು ಪರಿಸ್ಥಿತಿ ಇಂದಿಲ್ಲ. ಜಗತ್ತಿನಲ್ಲೇ ಅತಿದೊಡ್ಡ ರಫ್ತು ರಾಷ್ಟ್ರವಾಗಿ ಅಭಿವೃದ್ಧಿ ಸಾಧಿಸುತ್ತಿದೆ ಎಂದು ಪ್ರತಿಪಾದಿಸಿದರು.
ಜಗತ್ತಿನಲ್ಲಿ ಈವರೆಗೆ ಚೀನಾ, ವಿಯೇಟ್ನಾಂ ಮಾತ್ರ ಉತ್ಪಾದಕ ರಾಷ್ಟ್ರಗಳಾಗಿ ಮುಂಚೂಣಿಯಲ್ಲಿದ್ದವು. ಈಗ ಆ ಸಾಲಿಗೆ ಭಾರತ ಸಹ ಸೇರ್ಪಡೆಯಾಗಿದ್ದು, ಉತ್ಪಾದನೆಯಲ್ಲಿ 3ನೇ ಅತಿದೊಡ್ಡ ರಾಷ್ಟ್ರವಾಗಿ ಹೊರ ಹೊಮ್ಮಲಿದೆ. ಆದರೆ, ಭವಿಷ್ಯದಲ್ಲಿ ನಂಬರ್ ದೇಶವಾಗಬೇಕು ಎಂಬುದು ಪ್ರಧಾನಿ ಮೋದಿ ಅವರ ಧ್ಯೇಯವಾಗಿದ್ದು, ಆ ನಿಟ್ಟಿನಲ್ಲಿ ನವ ಭಾರತ ಹೆಜ್ಜೆ ಹಾಕಿದೆ ಎಂದು ಹೇಳಿದರು.
ಅಮೇರಿಕಾಕ್ಕೇ ಶೇ.97ರಷ್ಟು ಮೊಬೈಲ್ ಪೂರೈಸಿದೆ ಭಾರತ: ಭಾರತದಲ್ಲಿ 1997-98ರಲ್ಲಿ ಮೊಬೈಲ್ ಹವಾ ಶುರುವಾಯಿತು. ಚೀನಾದಿಂದ ಮೊಬೈಲ್ ಸೆಟ್ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೀಗ ಭಾರತವೇ ಮೊಬೈಲ್ ರಫ್ತು ಮಟ್ಟಕ್ಕೆ ಬೆಳೆದು ನಿಂತಿದೆ. ಪ್ರಸಕ್ತ ಮಾರ್ಚ್, ಏಪ್ರಿಲ್ ವೇಳೆಗೆ ಅಮೇರಿಕಾಕ್ಕೆ ಶೇ.97ರಷ್ಟು ಮೊಬೈಲ್ ಸೆಟ್ಗಳನ್ನು ಭಾರತ ಪೂರೈಸಿದೆ. ಈ ಮೂಲಕ ಜಗತ್ತಿನಲ್ಲೇ ಅತಿ ದೊಡ್ಡ ಮೊಬೈಲ್ ಉತ್ಪಾದಕ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ನೀತಿ-ಯೋಜನೆಗಳು ಇದನ್ನು ಸಾಕಾರಗೊಳಿಸಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಸಂತಸ ವ್ಯಕ್ತಪಡಿಸಿದರು.
ಲಾಜಿಸ್ಟಿಕ್ಗೆ ವೇಗ ನೀಡಿದ ಭಾರತ: ಜಗತ್ತಿನಲ್ಲಿ ಜಲ ಸಾರಿಗೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಆದರೆ, ಭಾರತ ಇದಕ್ಕೆ ತದ್ವಿರುದ್ಧವಾಗಿದೆ. ಮೊದಲು ರಸ್ತೆ, ರೈಲು ನಂತರ ಜಲ ಸಾರಿಗೆಗೆ ಒತ್ತು ನೀಡಿದೆ. ಒಟ್ಟಾರೆ ಲಾಜಿಸ್ಟಿಕ್ ವ್ಯವಸ್ಥೆಗೆ ಪ್ರಧಾನಿ ಮೋದಿ ಸರ್ಕಾರ ವೇಗ ನೀಡಿದ್ದು, ಅದರಲ್ಲೂ ರೈಲ್ವೆ ವಲಯಕ್ಕೆ ವಿಶೇಷ ಒತ್ತು ನೀಡಿದೆ ಎಂದು ಹೇಳಿದರು.
ಭಾರತದಲ್ಲಿ 2014ರವರೆಗೆ 60 ವರ್ಷದಲ್ಲಿ 23000 ಕಿ.ಮೀ. ರೈಲು ಮಾರ್ಗ ವಿದ್ಯುದ್ದೀಕರಣವಾಗಿತ್ತು. ಆದರೆ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಹತ್ತೇ ವರ್ಷದಲ್ಲಿ 63000 ಕಿ.ಮೀ. ರೈಲ್ವೆ ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ದೇಶದ ಕ್ರೂಡಾಯಿಲ್ ಆಮದು ತಗ್ಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಸಾಧ್ಯವಾಗಿದೆ ಎಂದು ಹೇಳಿದರು.
ಜರ್ಮನಿ ಸೇರಿದಂತೆ ಜಗತ್ತಿನೆಲ್ಲೆಡೆ ಇಂದು ಭಾರತೀಯ ಯುವ ಸಮೂಹಕ್ಕೆ ಹೆಚ್ಚಿನ ಬೇಡಿಕೆಯಿದೆ. ಅರ್ಹ, ನಿಷ್ಠಾವಂತ, ಶೈಕ್ಷಣಿಕ ಗುಣಮಟ್ಟದ ಉದ್ಯೋಗಿಗಳು ಮತ್ತು ತಂತ್ರಜ್ಞರ ಕೊರತೆಯಿಂದಾಗಿ ಇಂದು ವಿದೇಶಗಳು ಭಾರತದತ್ತ ಮುಖ ಮಾಡುತ್ತಿವೆ. ಅಲ್ಲಿನ ಪ್ರಸಿದ್ಧ ಕೈಗಾರಿಕೋದ್ಯಮಿಗಳು ಬಂಡವಾಳ ಹೂಡಿಕೆಗೆ ಭಾರತವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಸಶಕ್ತ-ಕ್ರಿಯಾತ್ಮಕ ಯುವಶಕ್ತಿ, ಸಂಪನ್ಮೂಲ, ಪರಿಸರ ಹೀಗೆ ಸರ್ವ ವಿಧದಲ್ಲೂ ಅದ್ಭುತ ಅವಕಾಶವಿದ್ದು, ಸ್ಥಳೀಯರೂ ಇದರ ಸದ್ಬಳಕೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
460 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆ: ಭಾರತದಲ್ಲಿ 1947ರಿಂದ 20214ರವರೆಗೆ ಆರೇಳು ದಶಕದಲ್ಲಿ 240 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿತ್ತು. ಮೋದಿ ಸರ್ಕಾರ ಬಂದ ಮೇಲೆ ವಿದ್ಯುತ್ ಸ್ವಾವಲಂಬನೆಗೆ ಒತ್ತು ನೀಡಿದೆ. 2014-2024ರ ಅವಧಿಯಲ್ಲಿ ಅದನ್ನು 460 ಗಿಗಾವ್ಯಾಟ್ಗೆ ಹೆಚ್ಚಿಸಿದೆ. ಈಗಂತೂ ಸೌರ ವಿದ್ಯುತ್ ಉತ್ಪಾದನೆ ಮೂಲಕ ಜಗತ್ತನ್ನೇ ತನ್ನತ್ತ ಸೆಳೆಯುತ್ತಿದೆ ಎಂದರು.
ಕೈಗಾರೀಕರಣಕ್ಕೆ ಧಾರವಾಡದಲ್ಲೂ ಪೂರಕ ಅವಕಾಶ: ಉತ್ಪಾದನಾ ವಲಯಕ್ಕೆ ನಮ್ಮ ಧಾರವಾಡ ಜಿಲ್ಲೆಯಲ್ಲೂ ಪೂರಕ ಪರಿಸರವಿದೆ. ಉನ್ನತ ಶಿಕ್ಷಣ ಹೊಂದಿದ ಯುವ ಸಮೂಹವಿದೆ. ಇಲ್ಲಿ ನಾಲ್ಕೈದು ವಿಶ್ವವಿದ್ಯಾಲಯಗಳಿವೆ. 7 ಇಂಜಿನಿಯರಿಂಗ್ ಕಾಲೇಜ್, ಐಐಟಿ, ತ್ರಿಬಲ್ ಐಟಿಗಳಿವೆ. ಕೃಷಿ ವಿವಿಯಿದೆ. ಕೈಗಾರೀಕರಣ, ಉತ್ಪಾದನೆ ವಲಯಕ್ಕೆ ತಕ್ಕಂತೆ ಯುವ ಶಕ್ತಿಯನ್ನು ರೂಪಿಸುವ ಅನುಕೂಲಕರ ವಾತಾವರಣವಿದೆ ಎಂದು ಹೊಡೆಕ್ ವೈಬ್ರೇಶನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥರ ಗಮನ ಸೆಳೆದರು ಸಚಿವ ಜೋಶಿ.
ಧಾರವಾಡ ಗ್ರೀನ್ಫೀಲ್ಡ್ ಘಟಕದಿಂದ ಉ.ಕ. ಕೈಗಾರಿಕಾ ಬೆಳವಣಿಗೆ: ಹೊಡೆಕ್ ವೈಬ್ರೇಶನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸುಸ್ಥಿರತೆಗೆ ಬದ್ಧವಾಗಿದ್ದು, ಪುಣೆ ಘಟಕದಲ್ಲಿ 155 ಕೆಡಬ್ಲ್ಯೂಪಿ ರೂಫ್ಟಾಪ್ ಸೌರಶಕ್ತಿ ಸ್ಥಾವರವನ್ನು ಉದ್ಘಾಟಿಸಿದೆ. ಇದು ಕಂಪನಿಯ ಇಂಗಾಲದ ಹೆಜ್ಜೆ ಗುರುತನ್ನು ಕಡಿಮೆ ಮಾಡುವ ಗುರಿಯೊಂದಿಗೆ ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸುತ್ತದೆ. ಧಾರವಾಡ ಘಟಕವೂ ಇಂತಹ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಂಡಿದ್ದು, ISO 14001 ಪರಿಸರ ನಿರ್ವಹಣಾ ಪ್ರಮಾಣೀಕರಣವನ್ನು ಹೊಂದಿದೆ. ಧಾರವಾಡದ ಈ ಗ್ರೀನ್ಫೀಲ್ಡ್ ಘಟಕವು ಉತ್ತರ ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ನೀಡಲಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿ, ಆರ್ಥಿಕ ವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್, ಶಾಸಕ ಅಮೃತ್ ದೇಸಾಯಿ, ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ್ ಛಬ್ಬಿ, ಹೊಡೆಕ್ ವೈಬ್ರೇಶನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ನಿರ್ದೇಶಕರಾದ ಅಭಿಜೀತ್ ಖಾನ್ವಿಲ್ಕರ್ ಹಾಗೂ ಆಡಳಿತ ವರ್ಗದವರು ಮತ್ತು ಗಣ್ಯರು ಉಪಸ್ಥಿತರಿದ್ದರು.